ಮೇ 2ರಿಂದ ಕದ್ರಿ ಕ್ಷೇತ್ರದಲ್ಲಿ ಮಹಾದಂಡರುದ್ರಾಭಿಷೇಕ
ಮಂಗಳೂರು, ಎ.27: ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಮೇ2ರಿಂದ 11ರವರೆಗೆ ವೈಭವದ ಅಷೋತ್ತರ ಸಹಸ್ರ ಬ್ರಹ್ಮಕಲಶಾಭಿಷೇಕ ಮತ್ತು ಮಹಾದಂಡರುದ್ರಾಭಿಷೇಕ, ಮಹಾರುದ್ರಯಾಗ ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ಎ. ಜನಾರ್ದನ ಶೆಟ್ಟಿ ತಿಳಿಸಿದರು.
ಕದ್ರಿ ಶ್ರೀ ಮಂಜುನಾಥ ದೇವಸ್ಥಾನದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವಾಲಯದ ಸಂಪ್ರದಾಯದಂತೆ 12ವರ್ಷಕ್ಕೊಮ್ಮೆ ಬ್ರಹ್ಮಕಲಶಾಭಿಷೇಕ, ಮಹಾದಂಡ ರುದ್ರಾಭಿಷೇಕ, ಮಹಾರುದ್ರಯಾಗ ಜರುಗಲ್ಪಡುತ್ತದೆ. ಈ ಬಾರಿ ಕದ್ರಿ ಮಠಾಧೀಶ ರಾಜಾ ಸಂಧ್ಯಾನಾಥ್ ಜೀ ಉಪಸ್ಥಿತಿಯಲ್ಲಿ, ದೇವಳದ ತಂತ್ರಿ ಬ್ರಹ್ಮಶ್ರೀ ವಿಠ್ಠಲದಾಸ್ ತಂತ್ರಿಯವರ ನೇತೃತ್ವದಲ್ಲಿ ಬ್ರಹ್ಮಕಲಶೋತ್ಸವ ಧಾರ್ಮಿಕ ವಿಧಿವಿಧಾನಗಳು ನಡೆಯಲಿದೆ ಎಂದರು.
ಬ್ರಹ್ಮಕಲಶೋತ್ಸವ ಅಂಗವಾಗಿ ವ್ಯವಸ್ಥಾಪನಾ ಸಮಿತಿ, ಬ್ರಹ್ಮಕಲಶಾಭಿಷೇಕ ಸಮಿತಿ ರಚಿಸಲಾಗಿದ್ದು, ಮೇ2ರಿಂದ 11ರವರೆಗೆ ಧಾರ್ಮಿಕ, ಸಾಂಸ್ಕೃತಿಕ, ಸಭಾ ಕಾರ್ಯಕ್ರಮಗಳು ನಡೆಯಲಿದೆ. ಬ್ರಹ್ಮಕಲಶೋತ್ಸವದ ಅಂಗವಾಗಿ ಶ್ರೀ ದುರ್ಗಾಪರಮೇಶ್ವರಿ ದೇವಾಲಯದ ಸುತ್ತುಪೌಳಿ ಪುನರ್ ನಿರ್ಮಾಣ ಕಾಮಗಾರಿ, ಶನಿಪೂಜೆ, ಸತ್ಯನಾರಾಯಣ ಪೂಜಾ ಹಾಲ್, ಮಂಜುನಾಥ ದೇವಾಲಯದ ಒಳಾಂಗಣಕ್ಕೆ ಗ್ರಾನೈಟ್ ಹಾಸುವ ಕಾಮಗಾರಿ, ದೇವಾಲಯದ ಎದುರು ಭಾಗದ ಮಂಟಪ ನಿರ್ಮಾಣ ಮಾಡಲಾಗಿದೆ ಎಂದರು.
ಕ್ಷೇತ್ರದ ತಂತ್ರಿಗಳಾದ ದೇರೆಬೈಲು ಬ್ರಹ್ಮಶ್ರೀ ವಿಠಲದಾಸ್ ತಂತ್ರಿ ಮಾತನಾಡಿ, ಕದ್ರಿ ದೇವಸ್ಥಾನದಲ್ಲಿ ಧ್ವಜಾರೋಹಣವಾಗಿ ಜಾತ್ರೆಯ ಜತೆ ಬ್ರಹ್ಮಕಲಶೋತ್ಸವ ನಡೆಯುವುದು ವಿಶೇಷ. ಈ ಹಿನ್ನೆಲೆಯಲ್ಲಿ ಮೇ2ರಂದು ಸಾಮೂಹಿಕ ಪ್ರಾರ್ಥನೆಯೊಂದಿಗೆ ವೈದಿಕ ಕಾರ್ಯಕ್ರಮಗಳು ಆರಂಭವಾಗಲಿದೆ. ಕ್ಷೇತ್ರದ ಸಂಪ್ರದಾಯದಂತೆ ಸಂಜೆ 6.00ಗಂಟೆಗೆ ಧ್ವಜಾರೋಹಣ ನಡೆದು ಧಾರ್ಮಿಕ ಕಾರ್ಯಕ್ರಮ ಆರಂಭವಾಗಲಿದೆ. ಒಟ್ಟು 9 ದಿನಗಳ ಕಾಲ ಬೆಳಗ್ಗೆ ನಾನಾ ಧಾರ್ಮಿಕ ಹಾಗೂ ಸಂಜೆ 4ರಿಂದ ಧರ್ಮಸಭೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಕದ್ರಿ ಜೋಗಿ ಮಠದ ರಾಜಾ ನಿರ್ಮಲನಾಥ್, ಸ್ವಾಗತ ಸಮಿತಿ ಸಂಚಾಲಕ ಪ್ರದೀಪ್ ಕುಮಾರ್ ಕಲ್ಕೂರ, ಹರಿನಾಥ್ ಜೋಗಿ, ಸುಧಾಕರ ರಾವ್ ಪೇಜಾವರ, ನಾನಾ ಸಮಿತಿ ಪ್ರಮುಖರಾದ ದಿನೇಶ್ ದೇವಾಡಿಗ, ಸುರೇಶ್ ಕುಮಾರ್, ಚಂದ್ರಕಲಾ, ಪುಷ್ಪಲತಾ, ಸುಂದರ ಶೆಟ್ಟಿ, ಗಣೇಶ್ ಶೆಟ್ಟಿ, ಕದ್ರಿ ನವನೀತ ಶೆಟ್ಟಿ, ಅಶೋಕ್, ರೂಪಾ ಬಂಗೇರ, ನಿವೇದಿತಾ ಶೆಟ್ಟಿ, ಅರುಣ್ ಕುಮಾರ್, ರಂಜನ್ ಕುಮಾರ್, ಗೋಕುಲ್ ಕದ್ರಿ ಉಪಸ್ಥಿತರಿದ್ದರು.
ಮಹಾದಂಡರುದ್ರಾಭಿಷೇಕದ ವಿಶೇಷ
ದೇವಸ್ಥಾನದಲ್ಲಿರುವ ಲಿಂಗಸ್ವರೂಪಿ ಮಂಜುನಾಥ ದೇವರಿಗೆ ಸಮೀಪದ ಗೋಮುಖ ತೀರ್ಥದಿಂದ ನೇರವಾಗಿ ಮಹಾದಂಡದ ಮೂಲಕ ರುದ್ರಾಭಿಷೇಕ ನೆರವೇರಿಸುವುದು ಇಲ್ಲಿನ ವಿಶೇಷ. ಸುಮಾರು 121 ಮಂದಿ ವೈದಿಕರು ಶತರುದ್ರಾಭಿಷೇಕದಲ್ಲಿ ಪಾಲ್ಗೊಳ್ಳಲಿದ್ದಾರೆ. 11 ಕುಂಡಗಳಲ್ಲಿ ಹೋಮ ನಡೆಯಲಿದೆ. ಅಡಕೆ ಮರದ ಶಲಾಕೆಯನ್ನು ದಂಡವಾಗಿ ಪರಿವರ್ತಿಸಿ ಅದರ ಮೂಲಕ ಬರುವ ಗೋಮುಖ ತೀರ್ಥವನ್ನು ಅಭಿಷೇಕಕ್ಕೆ ಬಳಸಲಾಗುತ್ತದೆ. ಈ ಸಂದರ್ಭ ಜಪ, ಅಭಿಷೇಕ ಹಾಗೂ ಹೋಮ ನಡೆಯಲಿದೆ. ಇದಕ್ಕೆ ಮಹಾದಂಡ ರುದ್ರಾಭಿಷೇಕ ಎಂದು ಎಂದು ದೇರೆಬೈಲು ವಿಠಲದಾಸ ತಂತ್ರಿ ಹೇಳಿದರು.
ಮೇ 3ರಂದು ಬೃಹತ್ ಹೊರೆಕಾಣಿಕೆ
ಕದ್ರಿ ಬ್ರಹ್ಮಕಲಶಾಭಿಷೇಕ ಹಿನ್ನೆಲೆಯಲ್ಲಿ ಶನಿವಾರ ಶರವು ಮಹಾಗಣಪತಿ ದೇವಸ್ಥಾನದ ಸಭಾಂಗಣದಲ್ಲಿ ಹೊರೆಕಾಣಿಕೆ ಕಚೇರಿಯನ್ನು ತೆರೆಯಲಾಗಿದ್ದು ನಾನಾ ಕಡೆಗಳಿಂದ ಅಲ್ಲಿ ಹೊರೆಕಾಣಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಮೇ 3ರಂದು ಸಂಜೆ 3 ಗಂಟೆಗೆ ನೆಹರೂ ಮೈದಾನದಿಂದ ಕದ್ರಿ ದೇವಸ್ಥಾನಕ್ಕೆ ಬಹತ್ ಹೊರೆಕಾಣಿಕೆ ಮೆರವಣಿಗೆ ನಡೆಯಲಿದೆ ಎಂದು ಹಸಿರು ಹೊರೆಕಾಣಿಕೆ ಸಮಿತಿ ಪ್ರಧಾನ ಸಂಚಾಲಕ ಗಣೇಶ್ ಶೆಟ್ಟಿ ತಿಳಿಸಿದರು.