ಎ.29:ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಳದ ಅನ್ನಛತ್ರಕ್ಕೆ ಶಿಲನ್ಯಾಸ- ಎನ್. ಸುಧಾಕರ ಶೆಟ್ಟಿ
ಪುತ್ತೂರು: ಸುಮಾರು 2 ಸಾವಿರ ಮಂದಿ ಭಕ್ತರು ಏಕಕಾಲದಲ್ಲಿ ಕುಳಿತು ಅನ್ನಪ್ರಸಾದ ಸ್ವೀಕರಿಸುವ ನಿಟ್ಟಿನಲ್ಲಿ ದೇವಳದ ಕಚೇರಿಯ ಪಕ್ಕದಲ್ಲಿ ಸುಸಜ್ಜಿತವಾದ 8 ಸಾವಿರ ಚದರ ಅಡಿಯ ಅನ್ನಛತ್ರಕ್ಕೆ ಟೆಂಡರ್ ಕಾಮಗಾರಿ ನಡೆದಿದ್ದು, ಎ.29ರಂದು ಬೆಳಗ್ಗೆ 10.25ಕ್ಕೆ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎನ್.ಸುಧಾಕರ್ ಶೆಟ್ಟಿಯವರು ತಿಳಿಸಿದ್ದಾರೆ.
ವೆಂಕಟರ್ರಾಜ್ ಅವರು ಕಾಮಗಾರಿಯ ಇಂಜಿನಿಯರ್ ಆಗಿದ್ದು, ಗಿರೀಶ್ ಕುಮಾರ್ ಅವರು ಕಾಮಗಾರಿ ಗುತ್ತಿಗೆ ಪಡೆದು ಕೊಂಡಿದ್ದಾರೆ. ನೂತನ ಅನ್ನಛತ್ರದಲ್ಲಿ ಪ್ರತ್ಯೇಕ ಅಡುಗೆ ಕೋಣೆ, ಅತಿಥಿಗಳಿಗೆ, ವಿಶೇಷ ಪೂಜೆ, ಮಹಾಪೂಜೆ ಮಾಡಿಸುವ ಭಕ್ತರಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗುವುದು. ಜೊತೆಗೆ ಆಧುನಿಕ ರೀತಿಯಲ್ಲಿ ಬಡಿಸುವ ವ್ಯವಸ್ಥೆಗೂ ಸೌಲಭ್ಯ ಇರುವ ಅನ್ನಛತ್ರದ ಕಾಮಗಾರಿಗೆ ಅಂದಾಜು ಸುಮಾರು 78ಲಕ್ಷ ವೆಚ್ಚ ತಗಲಲಿದೆ.
ಸುಮಾರು 800 ವರ್ಷಗಳ ಹಿಂದೆ ನಿರ್ಮಾಣವಾದ ಪುತ್ತೂರಿನ ಸೀಮೆ ದೇಗುಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನಕ್ಕೆ ಇತಿಹಾಸದಲ್ಲೇ ಮೊದಲ ಬಾರಿಗೆ ಭವ್ಯ ರಾಜಗೋಪುರ ಲೋಕಾರ್ಪಣೆಯು ಬಹಳ ವಿಜೃಂಭಣೆಯಿಂದ ನಡೆದಿದೆ. ಅದೇ ರೀತಿ ಎಲ್ಲಿ ತೊಂದರೆ ಕಂಡಿದೆಯೋ ಅದನ್ನು ಚಿನ್ನದಿಂದ ಮುಚ್ಚಬೇಕೆಂಬ ಶಾಸ್ತ್ರದ ಉಲ್ಲೇಖದಂತೆ ಧ್ವಜಸ್ತಂಭದಲ್ಲಿ ದೋಷಕಂಡು ಬಂದಿರುವ ಹಿನ್ನೆಲೆಯಲ್ಲಿ ಸುವರ್ಣ ಕವಚಾವೃತದಲ್ಲಿ ನೂತನ ಧ್ವಜಸ್ತಂಭದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ನೂತನ ಹೂ ತೇರು ಸಮರ್ಪಣೆ ಮಾಡುವ ಕಾರ್ಯ ಈಗಾಗಲೇ ನಡೆದಿದ್ದು, ಇದೀಗ ದೇವಳಕ್ಕೆ ನೂತನ ಅನ್ನ ಛತ್ರಕ್ಕಾಗಿ ಶಿಲಾನ್ಯಾಸ ಕಾರ್ಯಕ್ರಮ ನಡೆಯಲಿದೆ ಎಂದು ಅವರು ತಿಳಿಸಿದರು.
ಭಕ್ತರಿಂದ ದಾಸೋಹ ಸೇವೆಗೆ ಅವಕಾಶ:
ಶುಭ ಕಾರ್ಯ, ಜನ್ಮ ದಿನಚಾರಣೆ, ದಾಂಪತ್ಯ ಜೀವನದ ಬೆಳ್ಳಿಹಬ್ಬ, ವರ್ಷಾಚರಣೆಗೆ ಸಂಬಂಧಿಸಿ ವರ್ಷಂಪ್ರತಿ ಆಯಾ ದಿನಗಳಲ್ಲಿ ಶ್ರೀ ದೇವರಿಗೆ ಸೇವಾ ಕಾರ್ಯಗಳನ್ನು ಮಾಡುವ ಮೂಲಕ ಅನ್ನದಾಸೋಹಕ್ಕೆ ಕಿಂಚಿತ್ ಸೇವೆ ನೀಡುವ ಅವಕಾಶವನ್ನು ಒಂದು ಗೋಣಿ ಅಕ್ಕಿ ಸಮರ್ಪಣೆ ಮಾಡಬಹುದು. ಅಕ್ಕಿ ಸಮರ್ಪಣೆ ಮಾಡುವ ಭಕ್ತರು ದೇವಳದ ಕಚೇರಿಯಲ್ಲಿ ತಮ್ಮ ಹೆಸರು ನೊಂದಾವಣೆ ಮಾಡಿಸಿ ಕೊಂಡು ಅಕ್ಕಿ ಅಥವಾ ಅದರ ಬಾಬ್ತನ್ನು ದೇವಳದಲ್ಲಿ ಸಮರ್ಪಣೆ ಮಾಡಬಹುದು ಎಂದು ಅಧ್ಯಕ್ಷರು ತಿಳಿಸಿದ್ದಾರೆ.