ಮಂಗಳೂರು: ಶ್ರೀಲಂಕಾ ಸ್ಫೋಟ ಸಂತ್ರಸ್ತರಿಗೆ ಮಹಿಳಾ ಕಾಂಗ್ರೆಸ್ ನಿಂದ ಶ್ರದ್ಧಾಂಜಲಿ
ಮಂಗಳೂರು, ಎ.27: ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಯಲ್ಲಿ ಮೃತಪಟ್ಟವರ ಆತ್ಮಕ್ಕೆ ಶಾಂತಿಯನ್ನು ಕೋರಿ ದ.ಕ. ಜಿಲ್ಲಾ ಮಹಿಳಾ ಕಾಂಗ್ರೆಸ್ನಿಂದ ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನ ಮುಂಭಾಗದಲ್ಲಿ 'ಅಸತೋಮ ಸದ್ಗಮಯ, ತಮಸೋಮ ಜ್ಯೋತಿರ್ಗಮಯ' ಶಾಂತಿಮಂತ್ರ ಪಠಿಸಿ, ಮೊಂಬತ್ತಿ ಹತ್ತಿಸಿ ಮೌನಾಚರಣೆ ಆಚರಿಸಲಾಯಿತು.
ಮೌನಾಚರಣೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಘಟಕದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ, ಶ್ರೀಲಂಕಾದಲ್ಲಿ ನಡೆದ ಸರಣಿ ಬಾಂಬ್ ಸ್ಫೋಟದಲ್ಲಿ ಹುತಾತ್ಮರಾದವರ ಕುಟುಂಬಗಳಿಗೆ ಸಾಂತ್ವನ ನೀಡುವ ಮೂಲಕ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ ಎಂದರು.
ಸ್ಫೋಟ ನಡೆಸಿ ಅಮಾಯಕರನ್ನು ಹತ್ಯೆಗೈದ ಉಗ್ರಗಾಮಿಗಳಿಗೆ ಯಾವುದೇ ಧರ್ಮವಿಲ್ಲ. ಧರ್ಮದ ಹೆಸರಿನಲ್ಲಿ ಮಸೀದಿ, ಚರ್ಚ್, ಹೊಟೇಲ್ಗಳಲ್ಲಿ ದಾಳಿ ನಡೆಸುತ್ತಿರುವುದು ಖಂಡಿಸುತ್ತೇವೆ. ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಬೇಕು. ಕೆಟ್ಟದನ್ನು ಬಯಸುವ ದುಷ್ಕರ್ಮಿಗಳಿಗೆ ದೇವರೇ ಶಿಕ್ಷೆ ನೀಡಬೇಕು. ಎಲ್ಲೆಡೆಯೂ ಶಾಂತಿ ನೆಲೆಸಲಿ ಎಂದು ಹೇಳಿದರು.
ರಾಯಚೂರು ಘಟನೆ: ರಾಯಚೂರಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇತ್ತೀಚೆಗೆ ವಿದ್ಯಾರ್ಥಿನಿಯೋರ್ವಳು ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅದೊಂದು ಅತ್ಯಾಚಾರ ಪ್ರಕರಣವೆಂದು ಸಂತ್ರಸ್ತೆಯ ಪೋಷಕರು ದೂರಿದ್ದಾರೆ. ರಾಜ್ಯ ಸರಕಾರವು ಕೂಡಲೇ ತಪ್ಪಿತಸ್ಥರನ್ನು ಬಂಧಿಸಿ, ಸೂಕ್ರ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಘಟಕದ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶಾಲೆಟ್ ಪಿಂಟೊ ಮನವಿ ಮಾಡಿದರು.
'ಭಯೋತ್ಪಾದನೆ ಮಾನವೀಯತೆಯ ಶತ್ರು', 'ಶ್ರೀಲಂಕಾದಲ್ಲಿ ಮೃತಪಟ್ಟವರಿಗೆ ಶ್ರದ್ಧಾಂಜಲಿ', 'ಹೆಣ್ಣುಮಕ್ಕಳಿಗೆ ಸೂಕ್ತ ರಕ್ಷಣೆ ಸಿಗಲಿ', 'ಮಧುಗೆ ನ್ಯಾಯ', ಜಸ್ಟೀಸ್ ಫಾರ್ ಮಧು' ಎನ್ನುವ ಘೋಷವಾಕ್ಯಗಳ ಭಿತ್ತಿಪತ್ರಗಳನ್ನು ಪ್ರದರ್ಶಿಸಿ ಜಿಲ್ಲಾ ಘಟಕದ ಮಹಿಳಾ ಸದಸ್ಯೆಯರು ಖಂಡನೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ನ ವಕ್ತಾರೆ ಮರಿಯಮ್ಮ ಥಾಮಸ್, ಶಾಂತಲಾ ಗಟ್ಟಿ, ತನ್ವೀರ್ ಶಾ, ರೂಪಾ ಚೇತನ್, ಮಾಜಿ ಮೇಯರ್ ಜೆಸಿಂತಾ, ಆಶಾ ಡಿಸಿಲ್ವಾ, ನಾಗವೇಣಿ, ಮೆಬಲ್ ಡಿಸೋಜ, ಮರಿಯಾ ರೇಖಾ, ಲಿಲ್ಲಿ ಬರ್ಬೊಜಾ, ವಿಜಯಲಕ್ಷ್ಮಿ, ಭಾರತಿ ಬಿ.ಎಂ., ಪ್ರಭಾವತಿ, ಸುರೇಖಾ ಚಂದ್ರಹಾಸ್, ಹೆಸ್ತರ್ ಮತ್ತಿತರರು ಉಪಸ್ಥಿತರಿದ್ದರು.