ಕಾರಿಂಜೇಶ್ವರ ದೇವಸ್ಥಾನದ ತೀರ್ಥ ಸ್ನಾನದ ಕೆರೆಯ ನೀರು ರಸ್ತೆ ಕಾಮಗಾರಿಗೆ ಬಳಕೆ: ಆರೋಪ
ಬಂಟ್ವಾಳ, ಎ. 27: ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಹಿಂದೂ ಧಾರ್ಮಿಕ ದತ್ತಿ ಇಲಾಖೆಗೆ ಒಳಪಟ್ಟ ವಗ್ಗ ಕಾರಿಂಜೇಶ್ವರ ದೇವಸ್ಥಾನದ ತೀರ್ಥ ಸ್ನಾನದ ಕೆರೆಯ ನೀರನ್ನು ರಸ್ತೆ ಕಾಮಗಾರಿಗೆ ಬಳಸಲಾಗುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಬಂಟ್ವಾಳದಿಂದ ಪುಂಜಾಲಕಟ್ಟೆಯವರೆಗೆ ನಿರ್ಮಾಣವಾಗುತ್ತಿರುವ ರಸ್ತೆ ಕಾಮಗಾರಿಗೆ ಈ ನೀರನ್ನು ಬಳಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿಯ ಕಾಮಗಾರಿಯನ್ನು ವಹಿಸಿಕೊಂಡಿರುವ ಮುಗರೋಡಿ ಖಾಸಗಿ ಸಂಸ್ಥೆಯು, ಕೆರೆಯ ನಾಲ್ಕು ಕಡೆಗಳಲ್ಲಿ ಪೈಪ್ಗಳನ್ನು ಅಳವಡಿಸಿದ್ದು, ನಾಲ್ಕು ಟ್ಯಾಂಕರ್ ಗಳ ಮೂಲಕ ದಿನಕ್ಕೆ ನೂರಕ್ಕಿಂತಲೂ ಅಧಿಕವಾಗಿ ನೀರನ್ನು ಕೊಂಡೊಯ್ಯುತ್ತಿದೆ. ಇದರಿಂದ ಕಾರಿಂಜೇಶ್ವರ ದೇವಸ್ಥಾನದ ಗದಾ ತೀರ್ಥದ ಒಡಲು ಖಾಲಿಯಾಗುತ್ತಿರುವುದಲ್ಲದ್ದದೆ, ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗುವ ಸಾಧ್ಯತೆ ಇದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ಬಗ್ಗೆ ಕ್ಷೇತ್ರದ ಸಮಿತಿ ಮತ್ತು ಅಧಿಕಾರಿಗಳು ಮೌನವಹಿಸಿದ್ದಾರೆ. ಜಿಲ್ಲಾಧಿಕಾರಿ ಹಾಗೂ ಬಂಟ್ವಾಳ ಶಾಸಕರು ಈ ಬಗ್ಗೆ ಮಧ್ಯೆ ಪ್ರವೇಶಿಸಿ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ವಿನಂತಿಸಿದ್ದಾರೆ.