ಶ್ರೀನಿವಾಸ್ ವಿವಿಯಿಂದ ‘ಮ್ಯಾನೇಗ್ಮಾ’ ರಾಷ್ಟ್ರೀಯ ಸಮ್ಮೇಳನ
ಮಂಗಳೂರು, ಎ.27: ನಗರದ ಪಾಂಡೇಶ್ವರದಲ್ಲಿರುವ ಶ್ರೀನಿವಾಸ ವಿಶ್ವವಿದ್ಯಾನಿಲಯದ ಕಾಲೇಜ್ ಆಫ್ ಮ್ಯಾನೇಜ್ಮೆಂಟ್ ಮತ್ತು ಕಾಮರ್ಸ್ (ಎಂಬಿಎ) ವತಿಯಿಂದ ‘ಮ್ಯಾನೇಗ್ಮಾ-2019’ ಒಂದು ದಿನದ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು ಶನಿವಾರ ಆಯೋಜಿಸಲಾಗಿತ್ತು.
ಮಂಗಳೂರು ಮಹಾನಗರ ಪಾಲಕೆಯ ಸ್ಮಾರ್ಟ್ಸಿಟಿ ವಿಭಾಗದ ನಿರ್ದೇಶಕ ಮಹೇಶ್ಕುಮಾರ್ ದಾವಣಗೆರೆ ದೀಪ ಬೆಳಗಿಸಿ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶ್ರೀನಿವಾಸ್ ವಿವಿಯ ಸಹ ಕುಲಾಧಿಪತಿ ಮತ್ತು ಎ.ಶ್ಯಾಮರಾವ್ ಪ್ರತಿಷ್ಠಾನದ ಉಪಾಧ್ಯಕ್ಷ ಡಾ.ಎ.ಶ್ರೀನಿವಾಸ್ ರಾವ್, ಸ್ಮಾರ್ಟ್ಸಿಟಿಗೆ ಬೇಕಾದ ನೆರವು ಒದಗಿಸಲು ಶ್ರೀನಿವಾಸ್ ವಿವಿಯಿಂದ ಈಗಾಗಲೇ ಕ್ರಮಗಳನ್ನು ಕೈಗೊಳ್ಳಲಾಗಿದೆ. ಭವಿಷ್ಯದಲ್ಲಿ ಸ್ಮಾರ್ಟ್ಸಿಟಿ ಸಹಯೋಗದೊಂದಿಗೆ ಮ್ಯಾನೇಗ್ಮಾದಂತಹ ಹಲವು ಸಮ್ಮೇಳನಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ವಿವಿಧ ಕಾಲೇಜು ಪದವೀಧರ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡಿದ್ದ ಈ ಸಮ್ಮೇಳನದಲ್ಲಿ ಕಾಲೇಜಿನ ಶಿಕ್ಷಕರು, ಸಂಶೋಧನಾ ವಿದ್ಯಾರ್ಥಿಗಳು ಹಾಗೂ ವಿದ್ಯಾರ್ಥಿಗಳಿಂದ ಸುಮಾರು 135 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.
ಶ್ರೀನಿವಾಸ ವಿವಿ ಕುಲಪತಿ ಡಾ.ಪಿ.ಎಸ್.ಐತಾಳ್, ಎಂಬಿಎ ವಿಭಾಗದ ಡೀನ್ ಡಾ.ಶೈಲಶ್ರೀ ವಿ.ಟಿ., ಕಾರ್ಯಕ್ರಮದ ಸಂಯೋಜಕ ಅಮಿತ್ ಮೆನೇಜಸ್ ಮತ್ತಿತರರಿದ್ದರು. ಮ್ಯಾನೇಗ್ಮಾ ಎಂಬಿಎ ವಿದ್ಯಾರ್ಥಿನಿ ಸಂಯೋಜಕಿ ಪವಿತ್ರ ವಂದಿಸಿದರು.