ಬಜೆ ಅಣೆಕಟ್ಟಿಗೆ ಶಾಸಕ ರಘುಪತಿ ಭಟ್ ಭೇಟಿ, ಪರಿಶೀಲನೆ
ಉಡುಪಿ, ಎ.27: ಜಿಲ್ಲೆಯಲ್ಲಿ ಬೇಸಿಗೆ ತಾಪಮಾನ ತೀವ್ರಗತಿಯಲ್ಲಿ ಏರುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ನೀರಿನ ಸಮಸ್ಯೆ ತೀವ್ರಗೊಳ್ಳುತ್ತಿದೆ. ಜನರು ಕುಡಿಯುವ ನೀರಿಗಾಗಿ ಪ್ರತಿದಿನ ಪರದಾಡುವಂತಾಗಿದೆ. ಉಡುಪಿ ನಗರಕ್ಕೆ ನೀರನ್ನು ಒದಗಿಸುವ ಸ್ವರ್ಣ ನದಿಯ ಒಡಲು ಬರಿದಾಗುವ ಹಂತಕ್ಕೆ ಬಂದಿದೆ. ಕೆಲವೇ ದಿನಗಳಲ್ಲಿ ಉಡುಪಿಯ ಜೀವನದಿ ಎನಿಸಿದ ಸ್ವರ್ಣ ನದಿಯ ನೀರು ಕೂಡ ಸಂಪೂರ್ಣ ಬತ್ತಿ ಹೋಗುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಉಡುಪಿ ಶಾಸಕ ಕೆ.ರಘುಪತಿ ಭಟ್ ಶುಕ್ರವಾರ ಸಂಜೆ ಬಜೆ ಅಣೆಕಟ್ಟು ಪ್ರದೇಶಕ್ಕೆ ನಗರಸಭೆಯ ಚುನಾಯಿತ ಸದಸ್ಯರೊಂದಿಗೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸಿದರು.
ನೀರಿನ ಸಮಸ್ಯೆ ಕೇವಲ ನಗರ ಪ್ರದೇಶಗಳಲ್ಲಿ ಮಾತ್ರವಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಕಂಡು ಬಂದಿರುವುದಿಂದ ಇದಕ್ಕೆ ಪರ್ಯಾಯ ವ್ಯವಸ್ಥೆಯನ್ನು ಕೂಡಲೇ ಮಾಡುವಂತೆ ಶಾಸಕರು ಜಿಲ್ಲಾಧಿಕಾರಿಗಳನ್ನು ಆಗ್ರಹಿಸಿದ್ದಾರೆ.
ಬಜೆ ಅಣೆಕಟ್ಟು ಪ್ರದೇಶದಲ್ಲಿ ಹೂಳೆತುತಿವ ಕೆಲಸ ಮಾಡಿದರೆ ಹೆಚ್ಚು ನೀರು ಶೇಖರಣೆ ಮಾಡಬಹುದು ಎಂದು ಸಲಹೆ ನೀಡಿದ ಶಾಸಕರು, ಇದಕ್ಕೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಜಿಲ್ಲಾಧಿಕಾರಿಗಳಲ್ಲಿ ಮನವಿ ಮಾಡಿದರು.
ಭೇಟಿಯ ಸಂದರ್ಭದಲ್ಲಿ ಉಡುಪಿ ನಗರಸಭೆಯ ಚುನಾಯಿತ ಸದಸ್ಯರಾದ ಪ್ರಭಾಕರ್ ಪೂಜಾರಿ, ಬಾಲಕೃಷ್ಣ ಶೆಟ್ಟಿ ಕಕ್ಕುಂಜೆ, ಗಿರೀಶ್ ಅಂಚನ್, ಮಂಜುನಾಥ್ ಮಣಿಪಾಲ, ಸಂತೋಷ್ ಜತ್ತನ್, ವಿಜಯಲಕ್ಷ್ಮಿ, ಸುಮಿತ್ರ ಆರ್.ನಾಯಕ್, ಗಿರಿಧರ ಆಚಾರ್ಯ, ಟಿ.ಜಿ.ಹೆಗ್ಡೆ, ನಗರ ಬಿಜೆಪಿ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ, ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷ ದಾವೂದ್ ಅಬೂಬಕ್ಕರ್ ಮತ್ತಿತರರು ಉಪಸ್ಥಿತರಿದ್ದರು.