ಜೀರ್ಣೋದ್ಧಾರದ ಸಂಭ್ರಮದಲ್ಲಿ ಸೂರಿಮಣ್ಣು ಮಠ
ಹೆಬ್ರಿ, ಎ.27: ಗ್ರಾಮೀಣ ಪ್ರದೇಶ ಶಿವಪುರ ಗ್ರಾಮದ ಸೂರಿಮಣ್ಣಿನಲ್ಲಿ ಹಚ್ಚಹಸಿರಿನ ಸೊಬಗಿನ ನಡುವೆ ಕಂಗೊಳಿಸುತ್ತಿರುವ ಶ್ರೀಲಕ್ಷ್ಮೀನಾರಾಯಣ ದೇವಸ್ಥಾನದ ಸೂರಿಮಣ್ಣು ಮಠಕ್ಕೆ ಇದೀಗ ಜೀರ್ಣೋದ್ಧಾರ ಹಾಗೂ ಬ್ರಹ್ಮಕಲಶದ ಸಂಭ್ರಮ. ಶಿವಪುರ ಗ್ರಾಮದಲ್ಲಿ ಒಟ್ಟು 8 ಮಠಗಳಿದ್ದು, ಈ ಪೈಕಿ 6 ಮಠಗಳು ಇಂದಿಗೂ ಉಳಿದುಕೊಂಡಿವೆ. ಉಳಿದೆರಡು ಮಠ ಏನಾಗಿವೆ ಎಂಬ ಬಗ್ಗೆ ಸ್ಪಷ್ಟ ಮಾಹಿತಿಗಳಿಲ್ಲ.
ಈಗ ಉಳಿದುಕೊಂಡಿರುವ ಆರು ಮಠಗಳ ಪೈಕಿ ಸೂರಿಮಣ್ಣು ಮಠ ಕೂಡ ಒಂದು. ಒಂದು ಕಾಲದಲ್ಲಿ ಶೀರೂರು ಮಠದ ಆಡಳಿತಕ್ಕೊಳಪಟ್ಟು 'ಜನ್ನಿ' ಎಂಬ ಬ್ರಾಹ್ಮಣ ಮನೆತನದ ಉಸ್ತುವಾರಿಕೆಯಲ್ಲಿ ನಡೆಯುತ್ತಿದ್ದ ಸೂರಿಮಣ್ಣಿನ ಶ್ರೀಲಕ್ಷ್ಮೀನಾರಾಯಣ ದೇವರ ಗುಡಿಯು ಸೂರಿಮಣ್ಣು ಮಠ ಎಂದು ಪ್ರಸಿದ್ಧವಾಗಿದೆ. 500 ವರ್ಷಗಳ ಇತಿಹಾಸ ಹೊಂದಿರುವ ಮಠಕ್ಕೆ 100 ವರ್ಷಗಳ ಹಿಂದೆ ಮುದ್ರಾಡಿ ಬಲ್ಲಾಡಿಯಿಂದ ಬಂದ ಗುರುರಾಜ ಉಪಾಧ್ಯಾಯರು ದೇವರ ಪೂಜಾಕೈಕಂರ್ಯದಲ್ಲಿ ತೊಡಗಿಕೊಂಡಿದ್ದರು. ಅವರ ಕಾಲಾನಂತರ ಅವರ ಮನೆತನದವರು ಇದನ್ನು ಮುಂದುವರಿಸಿದ್ದಾರೆ.
ಇದೀಗ ಸದಾಶಿವ ಉಪಾಧ್ಯಾಯರು ಮಠದ ಪೂಜೆಯನ್ನು ನಡೆಸಿಕೊಂಡು ಬರುತಿದ್ದಾರೆ. ಅಲ್ಲದೇ ಅವರು ಮಠದಲ್ಲಿ ಹಲವಾರು ದೈವಿ ಕಾರ್ಯಗಳನ್ನು ಸಹ ನೆರವೇರಿಸಿದ್ದಾರೆ. ಭಾವೀ ಸಮೀರ, ಶ್ರೀವಾದಿರಾಜ ಜಯಂತಿ, 45 ವರ್ಷ ಗಳಿಂದ ಅಹೋರಾತ್ರಿ ಭಜನೆ, ಅಹೋರಾತ್ರಿ ಭಜನಾ ಸಪ್ತಾಹ, ಪ್ರತಿ ವರ್ಷ ಯಕ್ಷಗಾನ ಬಯಲಾಟ ಸೇರಿ ದೇವರ ಸೇವೆ ನಡೆಯುತ್ತಾ ಬಂದಿದೆ.
ಇದೀಗ ಸೂರಿಮಣ್ಣು ಮಠದ ಭಕ್ತರು ಹಾಗೂ ಊರ ಪರವೂರವರು ಸೇರಿ ದಾನಿಗಳ ಸಹಕಾರದಲ್ಲಿ ಸುಮಾರು 75 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರದ ಕೆಲಸಗಳು ಭರದಿಂದ ನಡೆಯುತ್ತಿದೆ. 75 ಲಕ್ಷ ರೂ. ವೆಚ್ಚದಲ್ಲಿ ಮಠವನ್ನು ಸಂಪೂರ್ಣ ಶಿಲಾಮಯವಾಗಿ ನಿರ್ಮಾಣ ಮಾಡಿ ಸುತ್ತು ಪೌಳಿ, ತೀರ್ಥ ಮಂಟಪ, ಯಾಗಶಾಲೆ, ಸಭಾ ಮಂಟಪದ ಕಾರ್ಯಗಳು ನಡೆಯುತ್ತಿದೆ.
ಮಠದ ಮುಖ್ಯಸ್ಥರಾದ ಸದಾಶಿವ ಉಪಾಧ್ಯಾಯರ ಮಾರ್ಗದರ್ಶನದಲ್ಲಿ ಸ್ಥಳೀಯ ಸಾಮಾಜಿಕ ಮುಂದಾಳು ಶಿವಪುರ ಹುಣ್ಸೆದಡಿ ಸುರೇಶ ಶೆಟ್ಟಿ ನೇತೃತ್ವದಲ್ಲಿ ಜೀರ್ಣೋದ್ಧಾರ ಸಮಿತಿಯನ್ನು ರಚಿಸಲಾಗಿದ್ದು ಊರಿನವರು, ದಾನಿಗಳು ಮತ್ತು ಜನಪ್ರತಿನಿಧಿಗಳ ಸಹಕಾರದಲ್ಲಿ ಜೀರ್ಣೋದ್ಧಾರದ ಕಾರ್ಯಗಳು ಸಾಗುತ್ತಿದೆ.
ಜೀರ್ಣೋದ್ಧಾರ ಸಮಿತಿ, ಸ್ವಾಗತ ಸಮಿತಿ ಜೊತೆಗೆ ವಿವಿಧ ಉಪಸಮಿತಿಗಳು ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಯಶಸ್ವಿಗೆ ದುಡಿಯುತ್ತಿದೆ. ಮುಂದಿನ ತಿಂಗಳು ಮೇ 9ರಿಂದ 11ರವರೆಗೆ ಬ್ರಹ್ಮಕಲಶೋತ್ಸವ ನಡೆಯಲಿದೆ.