ಮೂಡುಬಿದಿರೆ: ಮೇ 2ರಂದು ತುಳುನಾಡ ಸೇನೆಯಿಂದ ಉಚಿತ ಸಾಮೂಹಿಕ ವಿವಾಹ
ಮೂಡುಬಿದಿರೆ: ತುಳುನಾಡ ಸೇನೆ ವತಿಯಿಂದ ಭಗತ್ಸೇನೆ ಇದರ ಸಹಯೋಗದೊಂದಿಗೆ ದ್ವಿತೀಯ ವರ್ಷದ ಉಚಿತ ಸಾಮೂಹಿಕ ವಿವಾಹ ಹಾಗೂ ಸನ್ಮಾನ ಕಾರ್ಯಕ್ರಮವು ಮೇ 2ರಂದು ಪದ್ಮಾವತಿ ಕಲಾ ಮಂದಿರದಲ್ಲಿ ನಡೆಯಲಿದೆ. ಈ ಸಾಮೂಹಿಕ ವಿವಾಹದಲ್ಲಿ ಐದು ಜೋಡಿ ವಿವಾಹ ನಡೆಯಲಿದೆ ಎಂದು ಕಾರ್ಯಕ್ರಮದ ಪ್ರಾಯೋಜಕ ಸುರೇಶ್ ಶೆಟ್ಟಿ ಹರಿಮೀನಾಕ್ಷಿ ದೋಟ ಶನಿವಾರ ಪ್ರೆಸ್ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ವಿವರ ನೀಡಿದರು.
ಬೆಳಿಗ್ಗೆ 10.30ಕ್ಕೆ ವೆಂಕಟರಮಣ ದೇವಸ್ಥಾನದಿಂದ ವಧೂವರರ ವೈಭವದ ದಿಬ್ಬಣ ನಡೆಯಲಿದ್ದು ಮಧ್ಯಾಹ್ನ 12.10ರ ಸುಮೂಹೂರ್ತದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ.ವಧುವಿಗೆ 12 ಗ್ರಾಂ ಚಿನ್ನದ ಕರಿಮಣಿಸರ, ಸೀರೆ, ವರನಿಗೆ ಧೋತಿ ಶರ್ಟು ನೀಡಲಾಗುವುದು.
ಆಳ್ವಾಸ್ ಶಿಕ್ಷಣ ಪ್ರತಿಷ್ಟಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಚೌಟರ ಅರಮನೆಯ ಕುಲದೀಪ ಎಂ, ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಮುಂಬಯಿ ಬಂಟರ ಸಂಘದ ಮಾಜಿ ಅಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ ದಿಬ್ಬಣ ಮೆರವಣಿಗೆಯನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಸಮಾಜಸೇವಾ ಕಾರ್ಯದಲ್ಲಿ ತೊಡಗಿರುವ ಮೇರಮಜಲು ಶ್ರೀ ಮಾತಾ ಲಕ್ಷ್ಮಣ್ ಶಾಂತಿ ಧರ್ಮದ ಸ್ಥಾಪಕ ಕಾಂತಾಡಿಗುತ್ತು ಹರೀಶ್ ಪೆರ್ಗಡೆ, ಮೂಡುಬಿದಿರೆಯ ಸ್ಫೂರ್ತಿ ಭಿನ್ನ ಸಾಮಥ್ರ್ಯದ ಮಕ್ಕಳ ಶಾಲೆಯ ಸಂಚಾಲಕ ಪ್ರಕಾಶ್ ಶೆಟ್ಟಿಗಾರ್ ಹಾಗೂ ಮಾಜಿ ಸೈನಿಕ ಸುಭೇದಾರ್ ಮೇಜರ್ ರಾಜೇಂದ್ರಜೀ ಅವರನ್ನು ಸನ್ಮಾನಿಸಲಾಗುವುದು. ಸಭಾ ಕಾರ್ಯಕ್ರಮದಲ್ಲಿ ಶ್ರೀ ಕ್ಷೇತ್ರ ವಜ್ರದೇಹಿ ಮಠದ ಶ್ರೀ ಶ್ರೀ ರಾಜಶೇಖರಾನಂದ ಸ್ವಾಮೀಜಿ ಆಶೀರ್ವಚನ ನೀಡಲಿದ್ದು ವಿವಿಧ ಕ್ಷೇತ್ರದ ಗಣ್ಯರು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಭಗತ್ಸೇನೆಯ ಸ್ಥಾಪಕಾಧ್ಯಕ್ಷ ಸುಜಿತ್ ಶೆಟ್ಟಿ, ಸತೀಶ್ ಶೆಟ್ಟಿ ಉಪಸ್ಥಿತರಿದ್ದರು.