ಮಾನವೀಯ ಮೌಲ್ಯಗಳಿದ್ದರೆ ಅರ್ಥಪೂರ್ಣ ಬದುಕು ಸಾಧ್ಯ: ವೀರೇಶಾನಂದ ಸ್ವಾಮೀಜಿ
ಬೆಂಗಳೂರು, ಎ.27: ಜೀವನದಲ್ಲಿ ಮನುಷ್ಯರಿಗಿರುವ ಕರ್ತವ್ಯಗಳನ್ನು ಅರಿತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು ಬದುಕಿದರೆ ಅರ್ಥಪೂರ್ಣ ಜೀವನ ನಡೆಸಲು ಸಾಧ್ಯವಾಗುತ್ತದೆ ಎಂದು ರಾಮಕೃಷ್ಣ ವಿವೇಕಾನಂದ ಆಶ್ರಮದ ವೀರೇಶಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಶನಿವಾರ ನಗರದ ಸುರಾನ ಶಿಕ್ಷಣ ಸಂಸ್ಥೆಯು ಆಯೋಜಿಸಿದ್ದ ‘ಬೆಳ್ಳಿ ಹಬ್ಬ ಆಚರಣೆ ಹಾಗೂ ಕಾಫಿ ಟೇಬಲ್’ ಪುಸ್ತಕ ಬಿಡುಗಡೆ ಮತ್ತು ‘2ನೇ ಪಾರದರ್ಶಕ ನಾಯಕತ್ವ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ’ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ನಾವು ಅಳವಡಿಸಿಕೊಳ್ಳುವ ಮಾನವೀಯ ಮೌಲ್ಯ ಮತ್ತು ಶಿಸ್ತು ಯಶಸ್ಸನ್ನು ನಿರ್ಧರಿಸುತ್ತವೆ. ಪ್ರತಿಯೊಬ್ಬ ಮನುಷ್ಯನಿಗೆ ತನ್ನದೇ ಆದ ಕರ್ತವ್ಯಗಳಿರುತ್ತವೆ. ಇದನ್ನು ಅರಿತುಕೊಂಡು ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವ ಮೂಲಕ ಯಶಸ್ಸನ್ನು ಹಾದಿಯನ್ನು ತಲುಪಬೇಕು ಎಂದರು.
ಇಂದಿನ ಯುವಕರಲ್ಲಿರುವ ಸೃಜನಾತ್ಮಕ ಆಲೋಚನೆಗಳನ್ನು ಯಾರೂ ಬಳಸಿಕೊಳ್ಳುತ್ತಿಲ್ಲ. ಅವರು ಏನೂ ಕೆಲಸಕ್ಕೆ ಬಾರದವರು ಎಂಬ ಹಣೆಪಟ್ಟಿ ಕಟ್ಟುವ ಕೆಲಸವಾಗುತ್ತಿದೆ. ಆದರೆ, ಆಧುನಿಕ ಜಗತ್ತಿಗೆ ಬೇಕಾದ ವೈಜ್ಞಾನಿಕ ಮತ್ತು ತಾಂತ್ರಿಕ ಬೌದ್ಧಿಕ ಶಕ್ತಿ ಯುವಕರಲ್ಲಿದೆ ಎಂಬುದನ್ನು ಅರಿಯಬೇಕು. ಅವರಿಂದಲೇ ಸದೃಢ ದೇಶ ನಿರ್ಮಾಣ ಮಾಡಲು ಸಾಧ್ಯ ಎಂದು ಹೇಳಿದರು.
ಲೀಡ್ ಥಿಯೇಟರ್ ಕನ್ಸಲ್ಟಿಂಗ್ ಸಂಸ್ಥೆಯ ಸಂಸ್ಥಾಪಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಿ.ಮಹಾಲಿಂಗಮ್ ಮಾತನಾಡಿ, ಶಿಕ್ಷಕರು ಶಾಲಾ ಮಟ್ಟದಲ್ಲಿಯೇ ವಿದ್ಯಾರ್ಥಿಗಳಿಗೆ ನಾಯಕತ್ವ ಗುಣದ ಮೌಲ್ಯಗಳನ್ನು ಬೆಳೆಸಬೇಕು. ಪಠ್ಯಪುಸ್ತಕಗಳಿಗೆ ಸೀಮಿತಗೊಳಿಸಬಾರದು. ದೊಡ್ಡ ಹುದ್ದೆಗಳನ್ನು ನಿಭಾಯಿಸುವ ಶಕ್ತಿ ಹಾಗೂ ಸೃಜನಶೀಲತೆಯನ್ನು, ಅವರಲ್ಲಿ ಕಲಿಕೆಯ ಹಂತದಲ್ಲಿ ಬೇರು ಮಟ್ಟದಿಂದ ಗಟ್ಟಿಗೊಳಿಸಬೇಕು ಎಂದು ಹೇಳಿದರು. ಸಮಾರಂಭದಲ್ಲಿ ಸುರಾನ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ದಿಲೀಪ್ ಸುರಾನಾ, ವ್ಯವಸ್ಥಾಪನಾ ಟ್ರಸ್ಟಿ ಅರ್ಚನಾ ಸುರಾನಾ ಸೇರಿದಂತೆ ಹಲವರಿದ್ದರು.