ಬೈಂದೂರು: ಮಂಗಳ ಲಕ್ಷದ್ವೀಪ ಎಕ್ಸ್ಪ್ರೆಸ್ ರೈಲಿನ ಬೋಗಿಯಲ್ಲಿ ಬೆಂಕಿ
ಪ್ರಯಾಣಿಕ ಮಹಿಳೆಯ ಸಮಯಪ್ರಜ್ಞೆಯಿಂದ ತಪ್ಪಿದ ಅಪಾಯ
ಬೈಂದೂರು, ಎ.28: ಚಲಿಸುತ್ತಿದ್ದ ರೈಲಿನ ಬೋಗಿಯೊಂದರಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ಬೈಂದೂರು ಸಮೀಪದ ಬಿಜೂರು ರೈಲ್ವೆ ನಿಲ್ದಾಣದ ಸಮೀಪ ಎ.28ರಂದು ನಸುಕಿನ ವೇಳೆ 1.18ರ ಸುಮಾರಿಗೆ ನಡೆದಿದೆ.
ದೆಹಲಿಯ ನಿಜಾಮುದ್ದೀನ್ನಿಂದ ಕೇರಳದ ಎರ್ನಾಕುಲಂಗೆ ಹೋಗುತ್ತಿದ್ದ ಮಂಗಳ ಲಕ್ಷದ್ವೀಪ ಎಕ್ಸ್ಪ್ರೆಸ್(ಕ್ರಮ ಸಂಖ್ಯೆ 12618) ರೈಲಿನ ಎಸಿ ಬೋಗಿ ನಂಬರ್ ಬಿ4ನಲ್ಲಿ ಉಂಟಾದ ಶಾರ್ಟ್ ಸಕ್ಯೂಟ್ನಿಂದ ಈ ಬೆಂಕಿ ಅನಾಹುತ ಸಂಭವಿಸಿದೆ ಎನ್ನಲಾಗಿದೆ. ತಕ್ಷಣವೇ ಬೆಂಕಿಯನ್ನು ಆರಿಸಿದ್ದು, ಯಾರಿಗೂ ಗಾಯಗಳಾಗಿಲ್ಲ ಎಂದು ಕೊಂಕಣ ರೈಲ್ವೆ ಇಲಾಖಾಧಿಕಾರಿಗಳು ತಿಳಿಸಿದ್ದಾರೆ.
ಮಂಗಳ ಎಕ್ಸ್ಪ್ರೆಸ್ ರೈಲು ಬಿಜೂರು ರೈಲ್ವೆ ನಿಲ್ದಾಣದ ದಾಟಿ ಸುಮಾರು ಒಂದು ಕಿ.ಮೀ. ದೂರದ ಕಂಬದಕೋಣೆ ಎಂಬಲ್ಲಿ ಸಾಗುತ್ತಿದ್ದಾಗ ಎಸಿ ಬೋಗಿಯಲ್ಲಿ ಬೆಂಕಿ ಕಾಣಿಸಿಕೊಂಡಿತ್ತೆನ್ನಲಾಗಿದೆ. ಬೋಗಿಯಲ್ಲಿದ್ದ ಬಹುತೇಕ ಮಂದಿ ಮಲಗಿದ್ದರಿಂದ ಇದು ಯಾರ ಗಮನಕ್ಕೂ ಬಂದಿರಲಿಲ್ಲ. ಕುಂದಾಪುರ ನಿಲ್ದಾಣದಲ್ಲಿ ಇಳಿಯಬೇಕಾಗಿದ್ದ ಮಹಿಳೆಯೊಬ್ಬರು ಗಮನಿಸಿ ತಕ್ಷಣ ಟಿಕೆಟ್ ಪರೀಕ್ಷಕರಿಗೆ ಮಾಹಿತಿ ನೀಡಿದರು. ಈ ಮಹಿಳೆಯ ಸಮಯಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದಂತಾಯಿತು.
ಧಗಧಗನೆ ಉರಿದ ಬೋಗಿ: ಸಿಬ್ಬಂದಿಗಳ ಸೂಚನೆಯಂತೆ ರೈಲನ್ನು ಕೂಡಲೇ ನಿಲ್ಲಿಸಲಾಯಿತು. ಇತರ ರೈಲುಗಳ ಸಂಚಾರಕ್ಕೆ ತೊಂದರೆ ಉಂಟಾಗಬಹುದೆಂಬ ಕಾರಣದಿಂದ ರೈಲನ್ನು ಒಂದು ಕಿ.ಮೀ. ಹಿಂದೆ ಇರುವ ಬಿಜೂರು ರೈಲ್ವೆ ನಿಲ್ದಾಣಕ್ಕೆ ರಿವರ್ಸ್ ಮೂಲಕ ತರಲಾಯಿತು. ಕೂಡಲೇ ಬೋಗಿಯಲ್ಲಿದ್ದವರನ್ನು ಕೆಳಗೆ ಇಳಿಸಿ ಬೇರೆ ಬೋಗಿಗಳಿಗೆ ವರ್ಗಾಯಿಸಲಾಯಿತು.
ಧಗಧಗನೆ ಉರಿಯುತ್ತಿದ್ದ ಬೆಂಕಿಯನ್ನು ರೈಲ್ವೆ ಹಾಗೂ ಅಗ್ನಿ ಶಾಮಕ ದಳದ ಸಿಬ್ಬಂದಿಗಳು ನಂದಿಸಿದರು. ಎಸಿ ಬೋಗಿಯ ಗಾಜು ಒಡೆಯುವಾಗ ಸಂಭವಿಸಿದ ಸಣ್ಣಪುಟ್ಟ ಗಾಯ ಹೊರತು ಪಡಿಸಿದರೆ ಉಳಿದಂತೆ ಯಾವುದೇ ಅಪಾಯಗಳು ಸಂಭವಿಸಿಲ್ಲ.
ಮಾಹಿತಿ ತಿಳಿದು ಮಂಗಳೂರು ಪ್ರಾದೇಶಿಕ ಟ್ರಾಫಿಕ್ ವ್ಯವಸ್ಥಾಪಕ ವಿನಯ ಕುಮಾರ್, ಉಡುಪಿ ರೈಲ್ವೆ ನಿಲ್ದಾಣದ ಮುಖ್ಯ ಆರೋಗ್ಯಾಧಿಕಾರಿ ಡಾ.ಸ್ಟಿವನ್ ಜಾರ್ಜ್ ಬಿಜೂರು ರೈಲ್ವೆ ನಿಲ್ದಾಣಕ್ಕೆ ಆಗಮಿಸಿದರು. ಅಲ್ಲದೆ ಗೋವಾದ ವೆರ್ನದಲ್ಲಿರುವ ಅಕ್ಸಿಡೆಂಟ್ ರಿಲೀಫ್ ಮೆಡಿಕಲ್ ವ್ಯಾನ್ ಇಡೀ ತಂಡದ ಜೊತೆ ಧಾವಿಸಿತು.
ಬೆಂಕಿಯ ಬೋಗಿ ಪ್ರತ್ಯೇಕ: ಮುಂಬೈಯಲ್ಲಿರುವ ಕೊಂಕಣ ರೈಲ್ವೆಯ ಪ್ರಧಾನ ಕಚೇರಿಗೆ ಆಗಮಿಸಿದ ವಿವಿಧ ವಿಭಾಗಗಳ ಮುಖ್ಯ ಅಧಿಕಾರಿಗಳು ಈ ಕುರಿತು ಸಮಾಲೋಚನೆ ನಡೆಸಿದರು. ಅದರಂತೆ ಬೆಂಕಿ ನಂದಿಸಿದ ಬಳಿಕ ರೈಲನ್ನು ಸುಮಾರು 13ಕಿ.ಮೀ. ದೂರದ ಸೇನಾಪುರ ರೈಲ್ವೆ ನಿಲ್ದಾಣಕ್ಕೆ ತರಲಾಯಿತು. ಈ ವೇಳೆ ಸುಟ್ಟ ಬೋಗಿಯಲ್ಲಿದ್ದ ಪ್ರಯಾಣಿಕರನ್ನು ಇತರ ಬೋಗಿಯಲ್ಲಿ ವರ್ಗಾಯಿಸಲಾಗಿತ್ತು.
ಅಲ್ಲಿ ಪರಿಶೀಲನೆ ನಡೆಸಿದ ನಂತರ ಅಧಿಕಾರಿಗಳ ಮಾರ್ಗದರ್ಶನದಂತೆ ಬಿ4 ಬೋಗಿಯನ್ನು ರೈಲಿನಿಂದ ಬೇರ್ಪಡಿಸಲಾಯಿತು. ಮುಂದೆ ಮಂಗಳೂರಿನಲ್ಲಿ ಹೊಸ ಬೋಗಿಯನ್ನು ಅಳವಡಿಸುವಂತೆ ಸೂಚನೆ ನೀಡಲಾಯಿತು. ಅದರಂತೆ ರೈಲು ಬೆಳಗ್ಗೆ 5.30ಕ್ಕೆ ಸೇನಾಪುರದಿಂದ ಹೊರಟು 6.30ರ ಸುಮಾರಿಗೆ ಮಂಗಳೂರು ತಲುಪಿತು. ಅಲ್ಲಿಂದ ಹೊಸ ಬೋಗಿಯೊಂದಿಗೆ ರೈಲು ಸುರಕ್ಷಿತವಾಗಿ ಎರ್ನಕುಲಂಗೆ ತಲುಪಿತು ಎಂದು ರೆಲ್ವೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಬೋಗಿಯಲ್ಲಿದ್ದ ಪ್ರಯಾಣಿಕರ ಕೆಲವು ಸೊತ್ತುಗಳಿಗೆ ಹಾನಿ ಉಂಟಾಗಿದೆ. ಈ ಬೆಂಕಿ ಅವಘಡಕ್ಕೆ ನಿಖರವಾದ ಕಾರಣ ಇನ್ನು ತಿಳಿದುಬಂದಿಲ್ಲ. ಈ ಕುರಿತು ರೈಲ್ವೆ ತಜ್ಞರು ಇನ್ನಷ್ಟೆ ತನಿಖೆ ನಡೆಸಿ ವರದಿ ನೀಡಬೇಕಾಗಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.