ತುಂಬೆ ಅಣೆಕಟ್ಟಿನಲ್ಲಿ 4.90 ಮೀಟರ್ ನೀರು!
ತುಂಬೆ ಅಣೆಕಟ್ಟಿಗೆ ಸಚಿವ ಖಾದರ್ ಭೇಟಿ
ಬಂಟ್ವಾಳ, ಎ. 28: ತುಂಬೆ ನೂತನ ಅಣೆಕಟ್ಟಿನಲ್ಲಿ 4.90 ಮೀಟರ್ (7.30 ಎಂಸಿಎಂ) ನೀರು ಸಂಗ್ರಹವಿದ್ದು, ಇದನ್ನು ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಳಕೆದಾರರಿಗೆ ಕೇವಲ 28 ದಿನಗಳವರೆಗೆ ನೀರು ಪೂರೈಕೆ ಮಾಡಬಹುದಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ರವಿವಾರ ತುಂಬೆ ಅಣೆಕಟ್ಟೆಗೆ ಅಧಿಕಾರಿಗಳ ಜೊತೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರನ್ನುದ್ದೇಶಿಸಿ ಮಾತನಾಡಿದ ಅವರು, ಶಂಭೂರಿನ ಎಎಂಆರ್ ಡ್ಯಾಂನಲ್ಲಿ ಸಮುದ್ರಮಟ್ಟದಿಂದ 12.20 ಮೀ. ನೀರಿನಮಟ್ಟವಿದ್ದು, ಈ ನೀರು ಬಳಕೆಗೆ ಲಭ್ಯವಿರುವುದಿಲ್ಲ ಎಂದರು.
ಡ್ಯಾಂನಲ್ಲಿ ಇದೀಗ 4.90 ಮೀಟರ್ ನೀರಿದ್ದು, ಪಡಿತರ ಮಾಡದೇ ನೀರು ಪೂರೈಕೆ ಮಾಡಿದರೆ ಮೇ 28ರವೆರೆಗೆ ಸಾಕಾಗುತ್ತದೆ. ಒಂದು ವೇಳೆ ವಾರಕ್ಕೆ 5 ದಿನಗಳಿಗೆ ಪಡಿತರವಾಗಿ ನೀರು ಪೂರೈಕೆ ಮಾಡಿದರೆ ಜೂ. 15ರವರೆಗೆ ಸುಧಾರಿಸಬಹುದು ಎಂಬುವುದು ಇಂಜಿನಿಯರ್ ಗಳ ಲೆಕ್ಕಚಾರ. ಒಂದು ವೇಳೆ ನೀರಿನ ಅಭಾವ ಕಂಡುಬಂದರೆ ನೀರಿನ ಲಭ್ಯತೆ ಅನುಸರಿಸಿ ನಿರಂತರ 5 ದಿನ ಪಂಪಿಂಗ್ (96 ಗಂಟೆ) ಮಾಡಿ ಮಂಗಳೂರು ನಗರಕ್ಕೆ ನೀರು ಪೂರೈಕೆ ಮಾಡುವುದು ಹಾಗೂ 2 ದಿನ (48 ಗಂಟೆ) ಪಂಪಿಂಗ್ ಸ್ಥಗಿತಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಲಾಗಿದೆ. ಈ ಬಗ್ಗೆ ಜಿಲ್ಲೆಯ ಶಾಸಕರು, ಜಿಲ್ಲಾಡಳಿತ ಹಾಗೂ ಇಂಜಿನಿಯರ್ ಗಳ ಜೊತೆ ಮತ್ತೊಮ್ಮೆ ಚರ್ಚೆ ಮಾಡಿ ರೇಶನಿಂಗ್ ನೀರಿನ ಬಗ್ಗೆ ಮಾಹಿತಿ ನೀಡಲಾಗುವುದು ಎಂದ ಅವರು, ಶೀಘ್ರ ಮಳೆಗಾಗಿ ಪ್ರಾರ್ಥಿಸುವಂತೆ ಮನವಿ ಮಾಡಿದರು.
ನೀರಿನ ಒಳಹರಿವಿಲ್ಲದೆ ಎಎಂಆರ್ ಡ್ಯಾಂ ಬರಿದಾಗಿದ್ದು, ಇದೀಗ ಇಲ್ಲಿನ ಎಲ್ಲ ಬಾಗಿಲನ್ನು ಮುಚ್ಚಲಾಗಿದೆ. ಈ ಡ್ಯಾಂನಲ್ಲಿ ವಾರದ ಬಳಿಕ 14 ಮೀ. ನೀರು ಸಂಗ್ರಹವಾದರೆ, ತುಂಬೆ ಡ್ಯಾಂಗೆ ನೀರನ್ನು ಹರಿಯಬಿಡಲಾಗುವುದು. ನೀರಿನ ಸಮಸ್ಯೆ ಮತ್ತು ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿ ರಾಜ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಗೆ ಅನುಮತಿ ಕೇಳಲಾಗಿದೆ. ಚುನಾವಣೆಯ ನೀತಿ ಸಂಹಿತೆ ಜಾರಿಯಾಗಿದ್ದರಿಂದ ಸರಕಾರದ ಮಟ್ಟದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗವುದು ಎಂದು ಹೇಳಿದರು.
ನೀರನ್ನು ಮಿತ ಬಳಕೆ ಅಗತ್ಯ:
ನಗರಪಾಲಿಕೆ ವ್ಯಾಪ್ತಿಯ ಕಟ್ಟಡ ರಚನೆ ಉದ್ದೇಶಕ್ಕೆ ಬಳಸುವ ನೀರಿನ ಜೋಡಣೆಗಳನ್ನು ಈಗಾಗಲೇ ಸ್ಥಗಿತಗೊಳಿಸಲಾಗಿದೆ. ನೀರಿನ ಅಭಾವದ ಬಗ್ಗೆ ಜನರೂ ಕೂಡಾ ಜಿಲ್ಲಾಡಳಿತದ ಜೊತೆ ಸಹಕರಿಸಬೇಕು. ಸರಕಾರ ಮತ್ತು ಜಿಲ್ಲಾಡಳಿತ ಜನರಿಗೆ ತೊಂದರೆ ಕೊಡುವ ದೃಷ್ಠಿಯಿಂದ ಯಾವುದೇ ತೀರ್ಮಾಣಗಳನ್ನು ತೆಗೆದುಕೊಳ್ಳುವುದಿಲ್ಲ. ಇದನ್ನು ಜನರು ಅರ್ಥ ಮಾಡಿಕೊಳ್ಳಬೇಕು. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಬೇಕು ಎಂದ ಅವರು, ಸಾರ್ವಜನಿಕರಿಗೆ ಯಾವುದೇ ಆತಂಕ ಬೇಡ. ಯಾವುದೇ ಕಾರಣಕ್ಕು ಮಂಗಳೂರು ನಗರಕ್ಕೆ ನೀರಿನ ಸಮಸ್ಯೆಯಾಗದು ಎಂದರು.
ಮುಂಜಾಗೃತಾ ಕ್ರಮಗಳೇನು?:
ಮುಂಜಾಗೃತಾ ಕ್ರಮವಾಗಿ ನಗರಪಾಲಿಕೆ ವ್ಯಾಪ್ತಿಯಲ್ಲಿರುವ 48 ಸರಕಾರಿ ಮತ್ತು ಖಾಸಗಿ ಬಾವಿಗಳನ್ನು ಸ್ವಚ್ಛಗೊಳಿಸುವುದರ ಜೊತೆಗೆ ಬಳಕೆಗೆ ಯೋಗ್ಯವನ್ನಾಗಿ ಮಾಡಲು ಕ್ರಮವಹಿಸಲಾಗಿದೆ. 218 ಕೊಳವೆಬಾವಿಗಳ ಪೈಕಿ 134 ಕೊಳವೆ ಬಾವಿಗಳು ಚಾಲನೆಯಲ್ಲಿವೆ. ಅದಲ್ಲದೆ, ನಗರ ವ್ಯಾಪ್ತಿಯಲ್ಲಿ ಕೊಳವೆ ಬಾವಿಗಳನ್ನು ಸುಸ್ಥಿತಿಯಲ್ಲಿಡಲಾಗಿದ್ದು, ಅವಶ್ಯಕತೆ ಇವರುವಲ್ಲಿ ಫ್ಲಷಿಂಗ್ ಮಾಡಲು ಕ್ರಮ ವಹಿಸಲಾಗಿದೆ. ನಗರಪಾಲಿಕೆ ವ್ಯಾಪ್ತಿಯ ಎತ್ತರ ಪ್ರದೇಶಗಳಿಗೆ ನೀರು ಪೂರೈಕೆಯಲ್ಲಿ ಅಡಚಣೆಯಾದಲ್ಲಿ ನೀರನ್ನು ಒದಗಿಸಲು ಒಟ್ಟು 8 ಟ್ಯಾಂಕರ್ಗಳನ್ನು ಖಾಸಗಿಯವರಿಗೆ ಬಾಡಿಗೆ ದರದಲ್ಲಿ ಪಡೆಯಲು ಕ್ರಮವಹಿಸಲಾಗಿದೆ ಎಂದು ಹೇಳಿದರು.
7ಮೀ.ಗಿಂತ ಹೆಚ್ಚುವರಿ ನೀರು ಸಂಗ್ರಹ?:
ಬೆಳೆಯುತ್ತಿರುವ ಮಂಗಳೂರು ನಗರದ ಜನಸಂಖ್ಯೆಯ ಆಧಾರದಲ್ಲಿ ಹಾಗೂ ಭವಿಷ್ಯದಲ್ಲಿ ನೀರಿನ ಅಭಾವ ಉಂಟಾಗದಂತೆ ತುಂಬೆ ಡ್ಯಾಂನಲ್ಲಿ 7 ಮೀಟರ್ ಗಿಂತ ಹೆಚ್ಚುವರಿ ನೀರನ್ನು ಸಂಗ್ರಹ ಮಾಡುವ ಗುರಿಯನ್ನು ಹೊಂದಲಾಗಿದೆ. ಈ ನಿಟ್ಟಿನಲ್ಲಿ ಅಧಿಕಾರಿಗಳು ಹಾಗು ರೈತರೊಂದಿಗೆ ಸಮಾಲೋಚನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಮುಳುಗಡೆಯಾಗುವ ರೈತರಿಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗವುದು ಎಂದು ಮಾಹಿತಿ ನೀಡಿದರು.
ಅಡ್ಯಾರ್ ನಲ್ಲಿ ಅಣೆಕಟ್ಟು ನಿರ್ಮಾಣ:
ಸುಮಾರು 228 ಕೋಟಿ ರೂ. ವೆಚ್ಚದಲ್ಲಿ ಅಡ್ಯಾರ್ನಿಂದ ಆರ್ಕುಳವೆರೆಗೆ ನೂತನ ಅಣೆಕಟ್ಟನ್ನು ನಿರ್ಮಿಸಿ, ಅದರ ಮೇಲೆ ಲಘುವಾಹನಕ್ಕೆ ಅವಕಾಶ ಕಲ್ಪಿಸುವ ಮಹತ್ತರ ಯೋಜನೆಗೆ ಅನುದಾನ ಮಂಜೂರಾತಿ ಆಗಿದ್ದು, ಟೆಂಡರ್ ಪ್ರಕ್ರಿಯೆ ಮುಗಿದ ಬಳಿಕ ಕಾಮಗಾರಿ ಪ್ರಾರಂಭಿಸಲಾಗುವುದು. ಈ ವ್ಯಾಪ್ತಿಯಲ್ಲಿ ಸುಮಾರು 10 ಸಾವಿರ ಕ್ಯೂಸೆಕ್ ನೀರು ಸಂಗ್ರಹವಾಗಲಿದ್ದು, ಇದರಿಂದ ಉಳ್ಳಾಲ ಸಹಿತ ಮಂಗಳೂರು ನಗರಕ್ಕೆ ಅನುಕೂಲವಾಗಲಿದೆ ಎಂದು ಮಾಹಿತಿ ನೀಡಿದರು.
ಎಂಆರ್ಪಿಎಲ್ ಮತ್ತು ಎಂಎಸ್ಇಝಡ್ ಸಂಸ್ಥೆಯವರು ಎಎಂಆರ್ ಕಿಂಡಿಅಣೆಕಟ್ಟಿನಿಂದ ಪ್ರತಿದಿನ 6.5ಎಂಜಿಡಿ ನೀರನ್ನು ಬಳಸುತ್ತಿದ್ದಾರೆ. ತುಂಬೆ ಅಣೆಕಟ್ಟಿನಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಿ, ಜಿಲ್ಲಾಧಿಕಾರಿ ಅವರು ಕೃಷಿ ಉದ್ದೇಶದ ಪಂಪ್ಸೆಟ್ಗಳ ವಿದ್ಯುತ್ ತಾತ್ಕಾಲಿಕ ನಿಲುಗಡೆಗಾಗಿ ಸೂಚನೆ ನೀಡಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿಧಾನಪರಿಷತ್ನ ಮುಖ್ಯ ಸಚೇತಕ ಐವನ್ ಡಿಸೋಜ, ಮಂಗಳೂರು ಮೇಯರ್ ಭಾಸ್ಕರ ಮೊಯ್ಲಿ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಾಜಿ ಶಾಸಕ ಜೆ.ಆರ್.ಲೋಬೋ, ಕಾರ್ಯನಿರ್ವಹಕ ಇಂಜಿನಿಯರ್ ನಿಂಗೇಗೌಡ, ಸಹಾಯಕ ಇಂಜಿನಿಯರ್ ನರೇಶ್ ಶೆಣೈ, ಅಧಿಕಾರಿಗಳಾದ ರವಿಶಂಕರ್, ಸಾಬಪ್ಪ, ಬಂಟ್ವಾಳ ತಹಶೀಲ್ದಾರ್ ಸಣ್ಣ ರಂಗಯ್ಯ ಹಾಜರಿದ್ದರು.
ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಸುಭದ್ರವಾಗಿದ್ದು, 5 ವಷಗಳ ಕಾಲ ಜನಪರ ಆಡಳಿತ ನಡೆಸಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶವು ಸರಕಾರದ ಮೇಲೆ ಯಾವುದೇ ಪರಿಣಾಮ ಬೀಳದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.