ಶ್ರೀಲಂಕಾ ಸ್ಫೋಟದಲ್ಲಿ ಮೃತಪಟ್ಟ ರಝೀನಾ ಮನೆಗೆ ಸಚಿವ ಯು.ಟಿ.ಖಾದರ್ ಭೇಟಿ
ಮಂಗಳೂರು, ಎ.28: ಶ್ರೀಲಂಕಾದಲ್ಲಿ ಇತ್ತೀಚೆಗೆ ನಡೆದ ಭೀಕರ ಸರಣಿ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ ಬೈಕಂಪಾಡಿ ಮೂಲದ ರಝೀನಾ ಖಾದರ್ ಕುಕ್ಕಾಡಿ ಅವರ ಮನೆಗೆ ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ರವಿವಾರ ಸಂಜೆ ಭೇಟಿ ನೀಡಿ, ಸಾಂತ್ವನ ಹೇಳಿದ್ದಾರೆ.
ಬೈಕಂಪಾಡಿಯ ಕುಕ್ಕಾಡಿಯಲ್ಲಿರುವ ರಝೀನಾ ಮನೆಗೆ ಭೇಟಿ ನೀಡಿ ಅವರ ಪತಿ ಖಾದರ್, ಮಕ್ಕಳು ಸೇರಿದಂತೆ ಮನೆಯ ಸದಸ್ಯರಿಗೆ ಸಾಂತ್ವನ ನೀಡಿದರು.
ರಝೀನ ಅವರು ತಮ್ಮ ಪತಿ ಖಾದರ್ ಜೊತೆ ಶ್ರೀಲಂಕಾದಲ್ಲಿರುವ ಸಂಬಂಧಿಕರ ಮನೆಗೆ ಹೋಗಿದ್ದರು. ಬಳಿಕ ಖಾದರ್ ಶ್ರೀಲಂಕಾದಿಂದ ದುಬೈಗೆ ತೆರಳಿದ್ದರು. ಹೋಟೆಲ್ಗೆ ರಝೀನಾ ತಮ್ಮ ಸಂಬಂಧಿಕರ ಜೊತೆ ತೆರಳಿದ್ದಾಗ ನಡೆದ ಬಾಂಬ್ ಸ್ಫೋಟದಲ್ಲಿ ಮೃತಪಟ್ಟಿದ್ದರು.
ಅಳೇಕಲ ಭೇಟಿ: ಜಿಲ್ಲಾ ಪರಿಷತ್ ಮಾಜಿ ಸದಸ್ಯ ಅಬ್ದುಲ್ ಖಾದರ್ ಹಾಜಿ ಅಳೇಕಲ ಅವರ ಮನೆಗೆ ಸಚಿವರು ತೆರಳಿ ಕುಟುಂಬದ ಸದಸ್ಯರಿಗೆ ಸಾಂತ್ವನ ಹೇಳಿದರು.
ಅಬ್ದುಲ್ ಖಾದರ್ ಉಳ್ಳಾಲ ಕೇಂದ್ರ ಜುಮಾ ಮಸೀದಿಯ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಇವರು ‘ಮೀಸೆ ಖಾದಿರಾಕ’ ಎಂದೇ ಗುರುತಿಸಲ್ಪಟ್ಟಿದ್ದರು.
ಗೋಳ್ತಮಜಲು ಭೇಟಿ: ಹಜಾಜ್ ಸಮೂಹ ಸಂಸ್ಥೆಗಳ ಸ್ಥಾಪಕ, ಹಿರಿಯ ಸಾಹಿತಿ ಕಲ್ಲಡ್ಕ ಸಮೀಪದ ಗೋಳ್ತಮಜಲು ಹಾಜಿ ಜಿ.ಅಬ್ದುಲ್ ಖಾದರ್ ಅವರ ಮನೆಗೆ ಸಚಿವ ಯು.ಟಿ.ಖಾದರ್ ಭೇಟಿ ನೀಡಿ ಸಾಂತ್ವನ ನೀಡಿದರು.
ಅಬ್ದುಲ್ ಖಾದರ್ ಹಾಜಿ ಕಲ್ಲಡ್ಕ ಕೇಂದ್ರ ಜುಮಾ ಮಸೀದಿಯಲ್ಲಿ ಸುದೀರ್ಘ ಕಾಲ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಹಿತ್ಯ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದ ಇವರು, ‘ಅಬ್ಬೊನು ಹಾಜಿ’ ಎಂದೇ ಚಿರಪರಿಚಿತರಾಗಿದ್ದರು.