ಶ್ರೀಲಂಕಾ ದಾಳಿ: ಪಜೀರ್ ಚರ್ಚ್ ನಲ್ಲಿ ವಿಶೇಷ ಪ್ರಾರ್ಥನಾ ಸಭೆ, ಕ್ಯಾಂಡಲ್ ಮಾರ್ಚ್
ಕೊಣಾಜೆ: ಈಸ್ಟರ್ ದಿನ ಶ್ರೀಲಂಕಾದಲ್ಲಿ ನಡೆದ ಉಗ್ರದಾಳಿಯನ್ನು ಖಂಡಿಸಿ ರವಿವಾರ ಪಜೀರು ಮೆರ್ಸಿಯಮ್ಮನವರ ಚರ್ಚ್, ಕೆಥೊಲಿಕ್ ಸಭಾ ಪಜೀರು ಘಟಕ, ಭಾರತೀಯ ಕೆಥೊಲಿಕ್ ಯುವಸಂಚಲನ ಪಜೀರು ಘಟಕ ಹಾಗೂ ಪಜೀರ್ ಚರ್ಚ್ ವ್ಯಾಪ್ತಿಯ ಕ್ರೈಸ್ತರಿಂದ ವಿಶೇಷ ಪ್ರಾರ್ಥನೆ, ಸಂತಾಪ ಸೂಚಕ ಹಾಗೂ ಖಂಡನಾ ಸಭೆ ಮತ್ತು ಪಜೀರ್ ಹೊಸ ಚರ್ಚ್ ನಿಂದ ಗ್ರಾಮಚಾವಡಿ ಜಂಕ್ಷನ್ ವರೆಗೆ ಕ್ಯಾಂಡಲ್ ಮಾರ್ಚ್ ನಡೆಯಿತು.
ವಿಶೇಷ ಪ್ರಾರ್ಥನೆಯ ನೇತೃತ್ವ ವಹಿಸಿದ ಚರ್ಚ್ ನ ಧರ್ಮಗುರು ಫಾ.ಸುನಿಲ್ ವೇಗಸ್ ಮಾತನಾಡಿ, ಉಗ್ರದಾಳಿಯಲ್ಲಿ ಮೃತರಾದವರ ಕುಟುಂಬದ ದುಃಖದಲ್ಲಿ ನಾವಿದ್ದೇವೆ. ಇಂದಿನ ಸಂಕಷ್ಟ ಸಂದರ್ಭದಲ್ಲಿ ನಮ್ಮ ಪ್ರಾರ್ಥನೆ ಅಗತ್ಯವಿದ್ದು, ಅದರ ಫಲವಾಗಿ ಮೃತರ ಕುಟುಂಬಕ್ಕೆ ಶಾಂತಿ, ನೆಮ್ಮದಿ ಸಿಗಲಿ ಎಂದು ಹೇಳಿದರು.
ಮನುಷ್ಯರಾಗಿರುವ ನಾವೆಲ್ಲರೂ ಪರಸ್ಪರ ಸಹೋದರತೆಯಿಂದ ಜೀವಿಸಲು ಮುಂದಾದಾಗ ಜಗತ್ತಿನಲ್ಲಿ ಶಾಂತಿ, ಸೌಹಾರ್ದತೆ ಸಾಧ್ಯ. ಒಂದು ಧರ್ಮದ ವಿರುದ್ಧ ಇನ್ನೊಂದು ಧರ್ಮದವರು ದ್ವೇಷದಿಂದ ಕಂಡರೆ ಜಗತ್ತಿನಲ್ಲಿ ಯಾರೂ ನೆಮ್ಮದಿಯಿಂದ ಜೀವಿಸಲು ಅಸಾಧ್ಯ. ನಮ್ಮ ದೇಶ, ಜಗತ್ತಿನಲ್ಲಿ ಶಾಂತಿ ಸಿಗುವಂತಾಗಲು ವಿಶೇಷ ಪ್ರಾರ್ಥನೆ ಸಲ್ಲಿಸಲಾಗಿದೆ ಎಂದರು.
ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಸಿಸ್ಟರ್ ಈನೆಟ್ ಡಿಸೋಜ, ಸಿಸ್ಟರ್ ಲೀನೆಟ್ ದಾಂತಿ, ಚರ್ಚ್ ಪಾಲನಾ ಮಂಡಳಿ ಕಾರ್ಯದರ್ಶಿ ಜಾನ್ ವಿಕ್ಟರ್ ಮೆಂಡೋನ್ಸ, ಕೆಥೊಲಿಕ್ ಸಭಾ ಪಜೀರ್ ಘಟಕಾಧ್ಯಕ್ಷ ಹಿಲರಿ ಡಿಸೋಜ, ಕೆಥೊಲಿಕ್ ಸಭಾ ಕಾರ್ಯದರ್ಶಿ ವಿನಿತಾ ಲೋಬೋ, ಐಸಿವೈಎಂ ಕಾರ್ಯದರ್ಶಿ ಟೀನಾ ಫೆರಾವೋ, ಕೋಶಾಧಿಕಾರಿ ಪ್ರೀತಂ ಜಾಯ್ಸನ್ ಡಿಸೋಜ ಇನ್ನಿತರರು ಭಾಗವಹಿದ್ದರು.
ಚರ್ಚ್ ಪಾಲನಾ ಮಂಡಳಿ ಉಪಾಧ್ಯಕ್ಷ ರೋಶನ್ ಡಿಸೋಜ ವಂದಿಸಿದರು.