ವಿಶ್ರಾಂತಿಗಾಗಿ ಮತ್ತೆ ಉಡುಪಿಗೆ ಆಗಮಿಸಿದ ಮುಖ್ಯಮಂತ್ರಿ
ಉಡುಪಿ, ಎ.29: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಶ್ರಾಂತಿಗಾಗಿ ಮತ್ತೆ ಉಡುಪಿಗೆ ಆಗಮಿಸಿದ್ದು, ಅವರೊಂದಿಗೆ ತಂದೆ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಕೂಡಾ ಇದ್ದಾರೆ.
ರವಿವಾರ ರಾತ್ರಿ ಬೆಂಗಳೂರಿನಿಂದ ಮಂಗಳೂರು ಅಂತರ್ರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮುಖ್ಯಮಂತ್ರಿ ಅಲ್ಲಿಂದ ರಸ್ತೆ ಮೂಲಕ ಉಡುಪಿಗೆ ಆಗಮಿಸಿದ್ದಾರೆ. ಬಳಿಕ ಕಾಪುವಿನ ಮೂಳೂರಿನಲ್ಲಿರುವ ಸಾಯಿರಾಧಾ ಹೆಲ್ತ್ ರೆಸಾರ್ಟ್ಗೆ ತೆರಳಿ ವಾಸ್ತವ್ಯ ಹೂಡಿದ್ದಾರೆ. ಅವರಿಬ್ಬರು ಇಲ್ಲಿ ನಾಲ್ಕೈದು ದಿನ ತಂಗಿ ಆಯುರ್ವೇದ ಚಿಕಿತ್ಸೆ ಪಡೆಯಲಿದ್ದಾರೆ ಎಂದು ಹೇಳಲಾಗಿದೆ.
ಕಳೆದ ವಾರ ಆರ್ಯುವೇದ ಚಿಕಿತ್ಸೆಗಾಗಿ ಕಾಪುವಿಗೆ ಆಗಮಿಸಿದ್ದ ಮುಖ್ಯಮಂತ್ರಿ ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದನಾ ದಾಳಿಯಲ್ಲಿ ಕರ್ನಾಟಕದ ಜೆಡಿಎಸ್ ಮುಖಂಡರು ಬಲಿಯಾದ ಹಿನ್ನೆಲೆಯಲ್ಲಿ ಚಿಕಿತ್ಸೆಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ವಾಪಸ್ ಆಗಿದ್ದರು. ಇದೀಗ ಮತ್ತೆ ಆಗಮಿಸಿದ್ದು, ಪಂಚಕರ್ಮ ಸಹಿತ ಆಯುರ್ವೇದ ಚಿಕಿತ್ಸೆಗೆ ಒಳಗಾಗಲಿದ್ದಾರೆ ಎಂದು ತಿಳಿದುಬಂದಿದೆ.
ಈ ಭೇಟಿಯನ್ನು ಸಂಪೂರ್ಣ ಖಾಸಗಿಯಾಗಿಯೇ ಕಳೆಯಲು ಸಿಎಂ ಬಯಸಿದ್ದಾರೆ. ಹಾಗಾಗಿ ರೆಸಾರ್ಟ್ನ ಅಸುಪಾಸಿಗೂ ಯಾರೂ ಬರದಂತೆ ಪೊಲೀಸರಿಗೆ ಸೂಚಿಸಿದ್ದಾರೆ. ರವಿವಾರ ರಾತ್ರಿ ಚಿತ್ರೀಕರಣಕ್ಕೆ ತೆರಳಿದ್ದ ಮಾಧ್ಯಮದವರಿಗೆ ಪೊಲೀಸರು ಅಡ್ಡಿಪಡಿಸಿದರು. ಸಾರ್ವಜನಿಕ ರಸ್ತೆಯಲ್ಲೂ ನಿಲ್ಲಲು ಅವಕಾಶ ನಿರಾಕರಿಸಿದ್ದಾರೆ.
ಮಾಜಿ ಶಾಸಕ ಗೋಪಾಲ ಪೂಜಾರಿಯ ಪುತ್ರಿಯ ವಿವಾಹದಲ್ಲಿ ಭಾಗಿ
ವಿಶ್ರಾಂತಿಗಾಗಿ ಉಡುಪಿಗೆ ಆಗಮಿಸಿರುವ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹಾಗೂ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಅವರು ಅಂಬಾಗಿಲಿನಲ್ಲಿ ನಡೆಯುತ್ತಿರುವ ಮಾಜಿ ಶಾಸಕ ಗೋಪಾಲ ಪೂಜಾರಿಯವರ ಪುತ್ರಿಯ ವಿವಾಹ ಸಮಾರಂಭದಲ್ಲಿ ಭಾಗಿಯಾಗಿದರು.
ಗೋಪಾಲ ಪೂಜಾರಿಯವರ ಪುತ್ರಿ ಕೀರ್ತನಾ ಅವರ ವಿವಾಹವು ಉದ್ಯಮಿ ಸಂದೀಪ್ ಅವರ ಜೊತೆ ನೆರವೇರಿದೆ. ಮದುವೆಗೆ ಆಗಮಿಸಿ ಸಿಎಂ ಹಾಗೂ ದೇವೇಗೌಡ ಅವರು ನವ ವಧೂವರರನ್ನು ಹರಸಿದರು.