ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ 'ರಂಗ ಸ್ವರೂಪ ಪ್ರಶಸ್ತಿ' ಪ್ರದಾನ
ಮಂಗಳೂರು, ಎ.29: ಕುಂಜತ್ತಬೈಲ್ ನ ರಂಗಸ್ವರೂಪ ಹಮ್ಮಿಕೊಂಡಿರುವ ಪ್ರಸಕ್ತ ಸಾಲಿನ ಸೃಜನಾಂತರಂಗ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು 'ರಂಗ ಸ್ವರೂಪ ಪ್ರಶಸ್ತಿ' ಪ್ರದಾನ ಸಮಾರಂಭವು ಮರಕಡದ ದ.ಕ.ಜಿ.ಪಂ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಅಕ್ಷರ ಸಂತ ಹರೇಕಳ ಹಾಜಬ್ಬರಿಗೆ 'ರಂಗ ಸ್ವರೂಪ ಪ್ರಶಸ್ತಿ-2019' ಪ್ರದಾನ ಮಾಡಲಾಯಿತು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಕಲಾವಿದ ಮತ್ತು ಪರಿಸರವಾದಿ ದಿನೇಶ್ ಹೊಳ್ಳ ಮಾತನಾಡಿ, ಹಾಜಬ್ಬ ಓರ್ವ ರಿಯಲ್ ಹೀರೊ ಆಗಿದ್ದಾರೆ. ರಂಗ ಸ್ವರೂಪ ಸಂಸ್ಥೆ ಈ ಭಾರೀಯ ಪ್ರಶಸ್ತಿಗೆ ಹರೇಕಳ ಹಾಜಬ್ಬರನ್ನು ಆಯ್ಕೆ ಮಾಡಿದು ಉತ್ತಮ ಆಯ್ಕೆಯಾಗಿದೆ. ಹಾಜಬ್ಬರಂತಹವರನ್ನು ಗುರುತಿಸುವ ಕಾರ್ಯ ರಂಗ ಸ್ವರೂಪ ಸಂಸ್ಥೆ ಮುಂದುವರಿಸಲಿ ಎಂದು ಹಾರೈಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಹರೇಕಳ ಹಾಜಬ್ಬ, ಮಾಧ್ಯಮ ಕ್ಷೇತ್ರ ನನನ್ನು ಜಗತ್ತಿಗೆ ಗುರುತಿಸುವ ಕೆಲಸ ಮಾಡಿದೆ. ಅದು ದೇಶಾದ್ಯಂತ ನನಗೆ, ನಮ್ಮ ಶಾಲೆಯ ಮಾನ್ಯತೆಯನ್ನು ಹೆಚ್ಚಿಸಿದೆ ಎಂದರು.
ಮಂಗಳೂರು
ಆಕಾಶವಾಣಿಯ ವಿಶ್ರಾಂತ ನಿರ್ದೇಶಕ ಡಾ.ವಸಂತ್ ಕುಮಾರ್ ಪೆರ್ಲ ಕಾರ್ಯಕ್ರಮದ ಅಧ್ಯಕ್ಷ ತೆ ವಹಿಸಿದ್ದರು.
ಮನಪಾ ಮಾಜಿ ಉಪ ಮೇಯರ್ ಕೆ.ಮುಹಮ್ಮದ್, ಸ್ವರೂಪ ಅಧ್ಯಯನ ಸಮೂಹದ ನಿರ್ದೇಶಕ ಗೋಪಾಡ್ಕರ್, ಶಾಲಾ ಮುಖ್ಯ ಶಿಕ್ಷಕಿ ಮಾಲತಿ, ಸ್ಕೇಟಿಂಗ್ ಬಾಲ ಕ್ರೀಡಾಪಟು ಫರಾಝ್ ಅಲಿ, ಸುಬ್ರಹ್ಮಣ್ಯ ಕಾಸರಗೋಡು ವೇದಿಕೆ ಯಲ್ಲಿ ಉಪಸ್ಥಿತರಿದ್ದರು.
ಶಿಬಿರ ಸಂಯೋಜಕ ರಹ್ಮಾನ್ ಖಾನ್ ಕುಂಜತ್ತಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ರಂಗ ಸ್ವರೂಪದ ಸದಸ್ಯರಾದ ಅನೀಸಾ ಸ್ವಾಗತಿಸಿದರು. ತಸ್ಲೀಮಾ ಬಾನು ಪ್ರಶಸ್ತಿ ಪತ್ರ ವಾಚಿಸಿದರು. ಪ್ರೇಮನಾಥ್ ಮರ್ಣೆ ಕಾರ್ಯಕ್ರಮ ನಿರೂಪಿಸಿದರು.
ಶಿಬಿರದಲ್ಲಿ 145 ಮಂದಿ ಭಾಗವಹಿಸಿದ್ದರು. ಸಭಾ ಕಾರ್ಯಕ್ರಮದ ಬಳಿಕ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು.