ಬೀಡಿ ಕಾರ್ಮಿಕರ ಭವಿಷ್ಯ ನಿಧಿ ದಾಖಲೆಗಳಲ್ಲಿ ಗೊಂದಲ: ಎಚ್ಎಂಎಸ್ ಆರೋಪ
ಮಂಗಳೂರು, ಎ. 29: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಸುಮಾರು 2 ಲಕ್ಷಕ್ಕಿಂತಲೂ ಅಧಿಕ ಮಂದಿ ಮಂದಿ ಬೀಡಿ ಉದ್ಯಮದಲ್ಲಿ ಕೆಲಸ ಮಾಡುವ ಕಾರ್ಮಿಕರ ಭವಿಷ್ಯ ನಿಧಿಯ ದಾಖಲೆಗಳಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಆರೋಪಿಸಿರುವ ಎಚ್ಎಂಎಸ್ ಶೀಘ್ರ ಈ ಗೊಂದಲ ನಿವಾರಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದೆ.
ಬೀಡಿ ಕಾರ್ಮಿಕರಿಗೆ ಆಯಾಯ ಬೀಡಿ ಕಂಪೆನಿಯ ಆಡಳಿತ ವರ್ಗವು ಪಾಸ್ ಪುಸ್ತಕ ನೀಡಿರುತ್ತದೆ. ಬೀಡಿ ಕಾರ್ಮಿಕರಲ್ಲಿ ಶೇ.95 ಅವಿದ್ಯಾವಂತರಾಗಿದ್ದು, ಸರಿಯಾಗಿ ಬರೆಯಲು, ಓದಲು ಅಸಮರ್ಥರಾಗಿರುತ್ತಾರೆ. ಹಿಂದೆ ಬೀಡಿ ಕಾರ್ಮಿಕರ ಜನ್ಮ ದಿನಾಂಕವನ್ನು ಊಹೆಯ ಮೇರೆಗೆ ದಾಖಲೆಗೆ ಸೇರಿಸುತ್ತಿದ್ದರು.
ಹೆಚ್ಚಿನ ಕಾರ್ಮಿಕರಲ್ಲಿ ಹುಟ್ಟಿದ ದಿನಾಂಕದ ದಾಖಲೆಗಳು ಇರುವುದಿಲ್ಲ. ಕೆಲವು ಕಾರ್ಮಿಕರು ಬೀಡಿಯ ಪಾಸ್ಪುಸ್ತಕದ ದಾಖಲೆಗಳಲ್ಲಿ ಹೆಸರು ನೋಂದಾಯಿಸಿದ್ದರೂ ಕೂಡ ಆಧಾರ್ ಕಾರ್ಡ್, ಐಡಿ ಕಾರ್ಡ್, ರೇಶನ್ ಕಾರ್ಡ್ ಇತ್ಯಾದಿಗಳಲ್ಲಿ ಹೆಸರು, ಹುಟ್ಟಿದ ದಿನಾಂಕ ಮತ್ತಿತರ ಮಾಹಿತಿಯನ್ನು ವಿದ್ಯೆಯ ಕೊರತೆಯಿಂದ ದಾಖಲೆಗಳಲ್ಲಿ ಗೊಂದಲವುಂಟಾಗಿರುತ್ತದೆ. ಪ್ರಸ್ತುತ ಭವಿಷ್ಯ ನಿಧಿ ಇಲಾಖೆಯಿಂದ ದಿನಕ್ಕೊಂದು ಕಾನೂನು ಬಂದಿರುವುದರಿಂದ ಈ ಕೈಗಾರಿಕೆಯಲ್ಲಿ ದುಡಿಯುವ ಬೀಡಿ ಕಾರ್ಮಿಕರು ತುಂಬಾ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಬೀಡಿ ಕಾರ್ಮಿಕರ ಭವಿಷ್ಯನಿಧಿ ಜೋಡಣೆಗೆ ಆಧಾರ್, ಗಜೆಟೆಡ್ ಅಧಿಕಾರಿಗಳಿಂದ ಪ್ರಮಾಣಪತ್ರ ಮತ್ತು ಪಾನ್ಕಾರ್ಡ್ ಅಥವಾ ಜಂಟಿ ಡಿಕ್ಲರೇಶನ್ (ಬೀಡಿ ಕಂಪೆನಿಯ ಆಡಳಿತ ವರ್ಗ ಮತ್ತು ಬೀಡಿ ಕಾರ್ಮಿಕರ ಮಧ್ಯೆ ಆಗುವಂತಹ ಪ್ರಮಾಣ ಪತ್ರ) ಮಾಡಿಸಿ ತರುವಂತೆ ಭವಿಷ್ಯ ನಿಧಿ ಇಲಾಖೆಯಿಂದ ಸೂಚಿಸಲಾಗಿತ್ತು. ಅದರಂತೆ ಆಧಾರ್ ಕಾರ್ಡ್ ತಿದ್ದುಪಡಿಗಾಗಿ ಬೀಡಿ ಕಾರ್ಮಿಕರು ನೆಮ್ಮದಿ ಕೇಂದ್ರಕ್ಕೆ ತೆರಳಿದರೆ ಅಲ್ಲಿ ತಾಂತ್ರಿಕ ದೋಷ ಅಥವಾ ಸರಿಯಾಗಿ ಸ್ಪಂದನೆ ಸಿಗದೆ ವಾಪಸ್ ಆಗುತ್ತಾರೆ. ನಂತರ ಸರಕಾರ ಗಜೆಟೆಡ್ ಅಧಿಕಾರಿಗಳು ಪ್ರಮಾಣ ಪತ್ರ ನೀಡಲು ನಿರಾಕರಿಸುತ್ತಾರೆ. ಇಂತಹ ಸಮಸ್ಯೆ ಬಡ ಬೀಡಿ ಕಾರ್ಮಿಕರಿಗೆ ಸಮಸ್ಯೆಯಾದರೆ ಪರಿಹಾರವಾದರೂ ಏನು? ಎಂಬುದನ್ನು ಇಲಾಖೆ ತಿಳಿಸಬೇಕಾಗಿದೆ.
ಪ್ರಸ್ತುತ ಬೀಡಿ ಕಾರ್ಮಿಕರ ಪಿಎಫ್ಗೆ ಆಧಾರ್ ಜೋಡನೆ ಮಾಡಿಸಿ ಅರ್ಜಿಯೊಂದಿಗೆ ಮೂಲ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡು ನೀಡಲು ಭವಿಷ್ಯನಿಧಿ ಇಲಾಖೆಯಿಂದ ಸೂಚನೆ ನೀಡಲಾಗಿದೆ. ಕಾರ್ಮಿಕರ ಆಧಾರ್ ಕಾರ್ಡಿನಲ್ಲಿ 3 ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಆದರೆ ತಿದ್ದುಪಡಿಗೆ ಅವಕಾಶವಿರುವುದಿಲ್ಲ. ಅದನ್ನು ಸರಿಪಡಿಸಬೇಕಾದರೆ ಬೆಂಗಳೂರಿಗೆ ತೆರಳಿ ಸರಿಪಡಿಸಲು ಸೂಚನೆ ನೀಡುತ್ತಾರೆ. ಇದು ಬೀಡಿ ಕಾರ್ಮಿಕರಿಗೆ ಅಸಾಧ್ಯವಾದ ಸಂಗತಿಯಾಗಿದೆ.
ಭವಿಷ್ಯ ನಿಧಿಯಲ್ಲಿ ನೋಂದಣಿ ಆಗಿರುವ ಬೀಡಿ ಕಾರ್ಮಿಕರ ಹೆಣ್ಣು ಮಕ್ಕಳ ವಿವಾಹದ ಸಂದರ್ಭ, ಸಣ್ಣ ಪುಟ್ಟ ಮನೆ ನಿರ್ಮಿಸಲು, ವಿದ್ಯಾಭ್ಯಾಸ, ವೈದ್ಯಕೀಯ ಖರ್ಚು ಹಾಗೂ ಆರ್ಥಿಕ ಕೊರತೆ ನೀಗಿಸಲು ಭವಿಷ್ಯನಿಧಿಯಲ್ಲಿರುವ ಹಣ ಪಡೆದುಕೊಳ್ಳಲು ಅರ್ಜಿ ಹಾಕುತ್ತಾರೆ. ಅರ್ಜಿ ಹಾಕಿದ ಹೆಚ್ಚಿನ ಕಾರ್ಮಿಕರು ದಾಖಲೆಯ ಗೊಂದಲದಿಂದ ಹಣ ಬಿಡುಗಡೆಯಾಗದೆ ಕಷ್ಟ ಅನುಭವಿಸಬೇಕಾಗಿದೆ. ಈ ಕಾರ್ಮಿಕರು ದಾಖಲೆ ಸರಿಪಡಿಸಬೇಕಾದರೆ ತಿಂಗಳುಗಟ್ಟಲೇ ಸರಕಾರಿ ಕಚೇರಿಗೆ ಅಲೆದಾಡಬೇಕಾಗಿದೆ. ಕಾರ್ಮಿಕರ ಭವಿಷ್ಯ ನಿಧಿ ನೋಂದಣಿ ಸಂಖ್ಯೆಗೆ ಅನುಗುಣವಾಗಿ ಅವರ ಕಷ್ಟವನ್ನು ಇಲಾಖೆ ಸರಿಪಡಿಸಬೇಕಾಗಿದೆ.
ಈ ದೇಶದಲ್ಲಿ ಪ್ರತಿಯೊಬ್ಬ ನಾಗರಿಕರಿಗೂ ಗ್ರಾಪಂ ಹಿಡಿದು ಸುಪ್ರಿಂ ಕೋರ್ಟ್ ಹಾಗೂ ಸರಕಾರಿ ಇಲಾಖೆಗೆ ಯಾವುದೇ ದಾಖಲೆ ನೀಡುವುದಕ್ಕಿಂತ ಆಧಾರ್ ಕಾರ್ಡು ಮಹತ್ವ ಪಡೆದುಕೊಂಡಿದೆ. ಅಂತಹದರಲ್ಲಿ ಭವಿಷ್ಯನಿಧಿ ಇಲಾಖೆ ಆಧಾರ್ ಕಾರ್ಡಿಗೆ ಮಾನ್ಯತೆ ನೀಡದೆ ಅವಮಾನಿಸುವುದು ಖಂಡನೀಯ.
ದೇಶದಲ್ಲಿ ಸಾವಿರಾರು ಕಾರ್ಮಿಕ ವರ್ಗ ಹಾಗೂ ಖಾಸಗಿ ಸಂಸ್ಥೆಗಳಿವೆ. ಆದರೆ ಬೀಡಿ ಸುತ್ತುವ ಕಾರ್ಮಿಕರಿಗೆ ವಿದ್ಯಾರ್ಹತೆಯ ಕೊರತೆ ಇದೆ. ಇದೊಂದು ಗುಡಿ ಕೈಗಾರಿಕೆಯಾಗಿದೆ. ಇಂತಹ ಕಾರ್ಮಿಕ ವರ್ಗಕ್ಕೆ ಸಹಕಾರಿ ಮಾಡುವುದು ಭವಿಷ್ಯ ನಿಧಿ ಇಲಾಖೆಯ ಕರ್ತವ್ಯ ಕೂಡಾ ಆಗಿದೆ. ಹಾಗಾಗಿ ಕಾರ್ಮಿಕ ಇಲಾಖೆಯ ಅಧಿಕಾರಿಗಳು ಕೂಲಂಕಷವಾಗಿ ಪರಿಶೀಲಿಸಿ ಬೀಡಿ ಕಾರ್ಮಿಕರ ಭವಿಷ್ಯನಿಧಿ ದಾಖಲೆಗೆ ಸಂಬಂಧಿಸಿದ ಆಧಾರ್ ಕಾರ್ಡ್ ಅಥವಾ ಜಂಟಿ ಡಿಕ್ಲಟರೇಶನ್ ಈ ಎರಡರಲ್ಲಿ ಒಂದನ್ನು ಮಾನ್ಯ ಮಾಡಬೇಕಾಗಿದೆ. ಒಂದು ವೇಳೆ ಇಲಾಖೆಯು ಸ್ಪಂದಿಸದೇ ಇದ್ದಲ್ಲಿ ದ.ಕ.ಜಿಲ್ಲೆಯ ಎಲ್ಲಾ ಬೀಡಿ ಕಾರ್ಮಿಕರು ಒಗ್ಗೂಡಿ ಉಗ್ರ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ಕರಾವಳಿ ಬೀಡಿ ವರ್ಕರ್ಸ್ ಯೂನಿಯನ್ನ (ಎಚ್ಎಂಎಸ್) ಗೌರವಾಧ್ಯಕ್ಷ ಎಂ. ಸುರೇಶ್ಚಂದ್ರ ಶೆಟ್ಟಿ, ಅಧ್ಯಕ್ಷ ಮುಹಮ್ಮದ್ ರಫಿ, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಎಸ್ ಜಂಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.