ಸುವರ್ಣ ತ್ರಿಭುಜ ಬೋಟು ನಾಪತ್ತೆ ಪ್ರಕರಣ: ಶಾಸಕರೊಂದಿಗೆ ಸಮುದ್ರಕ್ಕೆ ತೆರಳಿದ ಕುಟುಂಬಸ್ಥರು
ಉಡುಪಿ, ಎ.29: ನಾಪತ್ತೆಯಾದ ಸುವರ್ಣ ತ್ರಿಭುಜ ಬೋಟು ಅವಘಡಕ್ಕೆ ತುತ್ತಾದ ಸ್ಥಳವನ್ನು ಪರಿಶೀಲಿಸಲು ಉಡುಪಿ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಮೀನುಗಾರರ ಕುಟುಂಬ ಇಂದು ಸಮುದ್ರಕ್ಕೆ ತೆರಳಿದೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಇತ್ತೀಚೆಗೆ ಉಡುಪಿಗೆ ಆಗಮಿಸಿ ನಾಪತ್ತೆಯಾದ ಮೀನುಗಾರರ ಮನೆಗೆ ಭೇಟಿ ನೀಡಿದ ಸಂದರ್ಭ ಕುಟುಂಬದ ಸದಸ್ಯರು, ನಾವು ಕೂಡ ಬೋಟ್ ಮೂಲಕ ಸಮುದ್ರಕ್ಕೆ ಹೋಗಲು ಅವಕಾಶ ನೀಡಬೇಕು ಮತ್ತು ನಾಪತ್ತೆಯಾದ ಸ್ಥಳವನ್ನು ನಾವು ಕೂಡ ಪರಿಶೀಲಿಸ ಬೇಕೆಂದು ಮನವಿ ಮಾಡಿದ್ದರು.
ಅದೇ ರೀತಿ ಕುಟುಂಬಸ್ಥರ ಮನವಿಯ ಮೇರೆಗೆ ಶಾಸಕ ಕೆ.ರಘುಪತಿ ಭಟ್ ನೇತೃತ್ವದಲ್ಲಿ ಇಂದು ಮುಂಜಾನೆ 4 ಗಂಟೆಗೆ ಭಾರತೀಯ ಭೂಸೇನೆಯ ಅಧಿಕಾರಿಗಳ ಜೊತೆಗೆ ಮತ್ತು ನಾಪತ್ತೆಯಾದ ಮೀನುಗಾರರ ಕುಟುಂಬದ ಜೊತೆಗೆ ಸಮುದ್ರದಲ್ಲಿ ಘಟನೆ ನಡೆದಿದೆ ಎನ್ನಲಾದ ಸ್ಥಳಕ್ಕೆ ಪರಿಶೀಲನೆಗೆ ತೆರಳಿದ್ದಾರೆ.
ಈ ಸಂದರ್ಭದಲ್ಲಿ ಆಳಸಮುದ್ರ ತಾಂಡೇಲರ ಸಂಘದ ಅಧ್ಯಕ್ಷ ರವಿರಾಜ್ ಸುವರ್ಣ, ನಾಪತ್ತೆಯಾದ ಮೀನುಗಾರರ ಕುಟುಂಬದ ಗಂಗಾಧರ ಸಾಲ್ಯಾನ್, ನಿತ್ಯಾನಂದ ಕೋಟ್ಯಾನ್ ಹಾಜರಿದ್ದರು.