ಪ್ರತಿಯೊಬ್ಬ ವಿದ್ಯಾರ್ಥಿಯೂ ಗ್ರಂಥವಿದ್ದಂತೆ: ಪಲಿಮಾರು ಶ್ರೀ
ಉಡುಪಿ, ಎ.29: ಪ್ರತಿಯೊಬ್ಬ ವಿದ್ಯಾರ್ಥಿಯೂ ಒಂದೊಂದು ಗ್ರಂಥವಿ ದ್ದಂತೆ. ಅದನ್ನು ರಕ್ಷಿಸಿ ಬೆಳೆಸಬೇಕಾದುದು ನಮ್ಮೆಲ್ಲರ ಕರ್ತವ್ಯ. ಧರ್ಮವನ್ನು ರಕ್ಷಣೆ ಮಾಡಿದಲ್ಲಿ ನಮ್ಮನ್ನು ದೇವರು ರಕ್ಷಣೆ ಮಾಡುತ್ತಾನೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಪರ್ಯಾಯ ಪಲಿಮಾರು ಮಠದ ವತಿಯಿಂದ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಸೋಮವಾರ ನಡೆದ ವಿಪ್ರ ಬಾಲಕ ಬಾಲಕಿಯರ 16 ದಿನಗಳ ವಸಂತ ಧಾರ್ಮಿಕ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತಿದ್ದರು.
ಅದಮಾರು ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಮಾತನಾಡಿ, ವಿದುರ ನೀತಿಯಂತೆ ನಾವು ಬದುಕನ್ನು ನಡೆಸಿದಲ್ಲಿ ನಮ್ಮ ಕೋಪ, ಸಂತೋಷ, ನಾಚಿಕೆ ಮೊದಲಾದವುಗಳನ್ನು ಗೆಲ್ಲಲು ಸಾಧ್ಯ. ಅದನ್ನು ಬಾಲ್ಯದಲ್ಲಿಯೇ ಅಭ್ಯಾಸ ಮಾಡಲು ಇಂತಹ ಶಿಬಿರಗಳು ಅಗತ್ಯ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ವಿದ್ವಾಂಸ ಕೊರ್ಲಹಳ್ಳಿ ವೆಂಕಟೇಶ್ ಆಟಾರ್ಯ ಮಾತನಾಡಿದರು. ಮಠದ ವಿದ್ವಾಂಸ ಕಲ್ಮಂಜೆ ವಾಸುದೇವ ಉಪಾಧ್ಯಾಯ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.