ಹೈದರಾಬಾದ್ ಯುವಕನ ಕೊಲೆ ಪ್ರಕರಣ: ಹಲವರ ವಿಚಾರಣೆ
ಮಲ್ಪೆ, ಎ. 29: ಕೊಳ ಎಂಬಲ್ಲಿ ದೊಣ್ಣೆಯಿಂದ ಹೊಡೆದು ಹೈದರಾಬಾದಿನ ಗುರುವೇಲು(35) ಎಂಬಾತನನ್ನು ಕೊಲೆಗೈದ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ತನಿಖೆ ಮುಂದುವರೆಸಿದ್ದು, ಈ ಕುರಿತು ಹಲರನ್ನು ವಿಚಾರಣೆಗೆ ಒಳಪಡಿಸಿದ್ದಾರೆ.
ಎ.27ರಂದು ಹೈದರಬಾದಿನಿಂದ ತನ್ನ ಗೆಳೆಯರೊಂದಿಗೆ ಮೀನುಗಾರಿಕೆ ಕೆಲಸಕ್ಕೆ ಮಲ್ಪೆಗೆ ಬಂದಿರುವ ಗುರುವೇಲು, ಸಹಪಾಠಿಗಳೊಂದಿಗೆ ಜಗಳವಾಡಿ ಬಂದರಿನಲ್ಲಿ ನಿಲ್ಲಿಸಿದ್ದ ಬೋಟಿನಿಂದ ನೀರಿಗೆ ಹಾರಿ ಹೋಗಿದ್ದ ಎನ್ನಲಾಗಿದೆ. ಅದರ ನಂತರ ನಾಪತ್ತೆಯಾಗಿದ್ದ ಗುರುವೇಲು ತಡರಾತ್ರಿ ವೇಳೆ ಕೊಲೆಗೀಡಾಗಿ ರುವುದು ತಿಳಿದು ಬಂದಿದೆ.
ಎ.28ರಂದು ನಸುಕಿನ ವೇಳೆ ಗುರುವೇಲು ಕೊಳದ ಹನುಮಾನ್ ವಿಠೋಭಾ ಭಜನಾ ಮಂದಿರದ ಎದುರು ಸಮುದ್ರದ ದಡದ ಕಲ್ಲುಗಳ ಬಳಿ ಮಲಗಿದ್ದ ಅಮಿತ್ ಎಂಬವರ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆಗೆ ಯತ್ನಿಸಿದ್ದನು. ನಂತರ ಅಲ್ಲಿ ಸೇರಿದ ವ್ಯಕ್ತಿಗಳು ತಮ್ಮ ರಕ್ಷಣೆಗಾಗಿ ಗುರುವೇಲು ಕೈಯಲ್ಲಿದ್ದ ಮರದ ಸೊಂಟೆಯನ್ನು ಎಳೆದುಕೊಂಡು ಅದರಿಂದಲೇ ಆತನ ತಲೆಗೆ ಹೊಡೆದರೆನ್ನಲಾಗಿದೆ.
ಇದರಿಂದ ತಲೆಗೆ ಗಂಭೀರವಾಗಿ ಗಾಯಗೊಂಡ ಗುರುವೇಲುರನ್ನು ಕೂಡಲೇ ಉಡುಪಿ ಅಜ್ಜರಕಾಡು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಗಂಭೀರ ಸ್ಥಿತಿ ಯಲ್ಲಿದ್ದ ಗುರುವೇಲು ಚಿಕಿತ್ಸೆ ಫಲಕಾರಿಯಾಗದೆ ಬೆಳಗಿನ ಜಾವ 6:30ರ ಸುವಾರಿಗೆ ಆಸ್ಪತ್ರೆಯಲ್ಲಿ ಮೃತಪಟ್ಟರು.
ಈ ಬಗ್ಗೆ ಕೊಲೆ ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಪೊಲೀಸರು, ಹಲವು ಮಂದಿಯ ವಿಚಾರಣೆ ನಡೆಸಿ ಹೇಳಿಕೆ ಪಡೆದು ಕೊಂಡಿದ್ದಾರೆ. ಅದೇ ರೀತಿ ಸಿಸಿ ಕ್ಯಾಮೆರಾ ಫುಟೇಜ್ಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿ ಈವರೆಗೆ ಯಾರನ್ನು ಬಂಧಿಸಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.