ನೀರಿನ ಅಭಾವ: ದೇವರ ಮೊರೆ ಹೋದ ಉಡುಪಿ ನಗರಸಭೆ
ಉಡುಪಿ, ಎ.29: ಉಡುಪಿ ನಗರಕ್ಕೆ ನೀರು ಪೂರೈಸುವ ಸ್ವರ್ಣ ನದಿಯ ಬಜೆ ಅಣೆಕಟ್ಟಿನಲ್ಲಿ ನೀರಿನ ಮಟ್ಟ ತೀವ್ರ ಕುಸಿತ ಕಂಡ ಹಿನ್ನೆಲೆಯಲ್ಲಿ ಉಡುಪಿ ನಗರಸಭೆಯು ಮಳೆಗಾಗಿ ದೇವರ ಮೊರೆ ಹೋಗಿದೆ.
ಸಕಾಲಕ್ಕೆ ಮಳೆ ಬಾರದೆ ನೀರಿನ ಸಮಸ್ಯೆ ಎದುರಾಗಿದ್ದು, ಉತ್ತಮ ಮಳೆ ಬಂದು ಜನರ ತಾಪವನ್ನು ನೀಗಿಸುವಂತೆ ಉಡುಪಿ ರಥಬೀದಿ ಯಲ್ಲಿರುವ ಶ್ರೀಅನಂತೇಶ್ವರ ಹಾಗೂ ಶ್ರೀಚಂದ್ರ ವೌಳೀಶ್ವರ ದೇವಸ್ಥಾನದಲ್ಲಿ ಸಹಸ್ರ ಎಳನೀರು ಅಭಿಷೇಕವನ್ನು ನೀಡಿ ಪ್ರಾರ್ಥಿಸಲಾಯಿತು.
ಪರ್ಯಾಯ ಪಲಿಮಾರು ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿಯ ಉಪಸ್ಥಿತಿ ಯಲ್ಲಿ ಉಡುಪಿ ನಗರಸಭೆ ಆಯುಕ್ತ ಆನಂದ ಕಲ್ಲೋಳಿಕರ್ ಆಶಯದಂತೆ ಈ ಪ್ರಾರ್ಥನೆಯನ್ನು ನೆರವೇರಿಸಲಾಯಿತು.
ಇಂದು ಬಜೆ ಅಣೆಕಟ್ಟಿನಲ್ಲಿ 2.19 ಮೀಟರ್ ನೀರಿನ ಸಂಗ್ರಹವಿದ್ದು, ಇದು ನಾಲ್ಕೈದು ದಿನಗಳಿಗೆ ಮಾತ್ರ ಸಾಕಾಗಲಿದೆ. ಕಳೆದ ವರ್ಷ ಈ ದಿನ ಬಜೆಯಲ್ಲಿ 3.48 ಮೀಟರ್ ನೀರಿನ ಸಂಗಹ ಇತ್ತು. ನೀರಿನ ಸಂಗ್ರಹದ ಮಟ್ಟ 1.80 ಮೀಟರ್ಗೆ ಇಳಿದರೆ ನೀರು ಪೂರೈಕೆ ಅಸಾಧ್ಯ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Next Story