ಮಂಗಳೂರು ಸ್ಪೋರ್ಟ್ಸ್ ಕ್ಲಬ್ಗೆ ಕ್ರಿಕೆಟ್ ಪ್ರಶಸ್ತಿ
ಮಣಿಪಾಲ, ಎ.29: ಸಿಂಡಿಕೇಟ್ ಬ್ಯಾಂಕ್ ಕ್ರಿಕೆಟ್ ತಂಡ ಮಾಜಿ ನಾಯಕ, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಮಾಜಿಅ ಧ್ಯಕ್ಷ ದಿ. ವಾಸು ಶೇರಿಗಾರ್ ಸ್ಮರಣಾರ್ಥ ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯು ಮಾಹೆ ಆಶ್ರಯದಲ್ಲಿ ಎಂಡ್ ಪಾಯಿಂಟ್ನಲ್ಲಿರುವ ಮಾಹೆ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜಿಸಿದ ಹಾರ್ಡ್ಬಾಲ್ ಕ್ರಿಕೆಟ್ ಟೂರ್ನಿಯ 16 ವರ್ಷದೊಳಗಿನ ಬಾಲಕರ ವಿಭಾಗ ದಲ್ಲಿ ಬೆಂಗಳೂರಿನ ಸ್ಪೋರ್ಟ್ಸ್ಗ್ರೂವ್ ಕ್ರಿಕೆಟ್ ಅಕಾಡಮಿ ತಂಡ, ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯನ್ನು 92 ರನ್ಗಳ ಅಂತರದಿಂದ ಸೋಲಿಸಿ ಪ್ರಶಸ್ತಿ ಗೆದ್ದುಕೊಂಡಿತು.
14 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಮಂಗಳೂರಿನ ಸ್ಪೋರ್ಟ್ಸ್ ಕ್ಲಬ್ ತಂಡ, ಬೆಂಗಳೂರಿನ ಸ್ಪೋರ್ಟ್ಸ್ಗ್ರೂವ್ ಕ್ರಿಕೆಟ್ ಅಕಾಡಮಿ ತಂಡವನ್ನು 3 ವಿಕೆಟ್ಗಳ ಅಂತರದಿಂದ ಪರಾಜಯಗೊಳಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತು.
16ರ ವಯೋವಿಭಾಗದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಸ್ಪೋರ್ಟ್ಸ್ ಗ್ರೂವ್ ತಂಡ, ರಯಾನ್ ಅವರ ಅಜೇಯ 108 ರನ್ಗಳ ನೆರವಿನಿಂದ 46 ಓವರುಗಳಲ್ಲಿ 222 ರನ್ ಗಳಿಸಿತು. ಉತ್ತರವಾಗಿ ಉಡುಪಿ ತಂಡ 36 ಓವರು ಗಳಲ್ಲಿ 129 ರನ್ಗಳಿಗೆ ಆಲೌಟಾಗಿ ಸೋಲೊಪ್ಪಿಕೊಂಡಿತು. ಫೌಝನ್ ಉತ್ತಮ ಬ್ಯಾಟ್ಸ್ಮನ್, ವಿಷ್ಣು- ಉತ್ತಮ ಫೀಲ್ಡರ್, ಸಂದೀಪ್ -ಸರಣಿ ಶ್ರೇಷ್ಠ ಮತ್ತು ಉತ್ತಮ ಬೌಲರ್ ಪ್ರಶಸ್ತಿ ಪಡೆದರು.
14 ವಯೋವಿಭಾಗದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಬೆಂಗಳೂರಿನ ಸ್ಪೋರ್ಟ್ಸ್ಗ್ರೂವ್ ತಂಡ 43 ಓವರುಗಳಲ್ಲಿ 204 ರನ್ ಗಳಿಸಿತು. ಉತ್ತರವಾಗಿ ಮಂಗಳೂರು ಸ್ಪೋರ್ಟ್ಸ್ ಕ್ಲಬ್ ತಂಡವು ಕೇವಲ 11 ರನ್ಗಳಿಸುವಷ್ಟರಲ್ಲಿ 3 ವಿಕೆಟ್ ಕಳೆದುಕೊಂಡರೂ ಬಳಿಕ ಚೇತರಿಸಿಕೊಂಡು ಮೂರು ವಿಕೆಟ್ಗಳ ಅಂತರದ ಜಯ ದಾಖಲಿಸಿತು. ಚೈತನ್ಯ-ಉತ್ತಮ ಬ್ಯಾಟ್ಸ್ಮನ್, ಅಭಿಷೇಕ್- ಉತ್ತಮ ಬೌಲರ್, ವಿಕ್ರಮ್- ಉತ್ತಮ ಫೀಲ್ಡರ್ ಪ್ರಶಸ್ತಿ ಪಡೆದರೆ ಮಂಗಳೂರು ತಂಡದ ಸಂದೀಪ್ ಸಣಿ ಶ್ರೇಷ್ಠ ಬಹುಮಾನ ಪಡೆದರು.
ಸಮಾರೋಪ ಸಮಾರಂಭದಲ್ಲಿ ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಉಪ ವೈದ್ಯಕೀಯ ಅಧೀಕ್ಷಕ ಡಾ.ಪದ್ಮರಾಜ್ ಹೆಗ್ಡೆ ಬಹುಮಾನ ವಿತರಿಸಿದರು. ದಿ. ವಾಸು ಶೇರಿಗಾರ್ ಒಡನಾಡಿ ಆಟಗಾರ ಮಂಜುನಾಥ ಮಲ್ಯ, ಉದ್ಯಮಿ ಮುನಿಯಾಲು ಉದಯ ಶೆಟ್ಟಿ, ರಮೇಶ್ ಶೇರಿಗಾರ್, ಮಾಹೆ ಕ್ರೀಡಾ ಕೌನ್ಸಿಲಿನ ಜತೆ ಕಾರ್ಯದರ್ಶಿ ಡಾ.ಶೋಭ, ಕ್ರೀಡಾ ನಿರ್ದೇಶಕ ಡಾ. ಉಪೇಂದ್ರ ನಾಯಕ್, ತರಬೇತುದಾರ ರೆನ್ ಟ್ರೆವೆರ್ ಮೊದಲಾದವರು ಉಪಸ್ಥಿತರಿದ್ದರು.
ಉಡುಪಿ ಜಿಲ್ಲಾ ಕ್ರಿಕೆಟ್ ಸಂಸ್ಥೆಯ ಕಾರ್ಯದರ್ಶಿ ಬಾಲಕೃಷ್ಣ ಪರ್ಕಳ ಸ್ವಾಗತಿಸಿದರು. ಬಾಲಕೃಷ್ಣ ಪ್ರಭು ವಂದಿಸಿದರು.