ಎಸೆಸೆಲ್ಸಿ ಫಲಿತಾಂಶ : ಪುತ್ತೂರಿನ ಸಿಂಚನ ಲಕ್ಷ್ಮೀ ರಾಜ್ಯಕ್ಕೆ ದ್ವಿತೀಯ
ಪುತ್ತೂರು: ಮಾರ್ಚ್ ತಿಂಗಳಲ್ಲಿ ನಡೆದ 2018-19ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶ ಇಂದು ಪ್ರಕಟಗೊಂಡಿದ್ದು, ಪುತ್ತೂರು ವಿವೇಕಾನಂದ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಸಿಂಚನ ಲಕ್ಷ್ಮೀ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಧ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಸಿಂಚನ ಲಕ್ಷ್ಮೀ ಪುತ್ತೂರು ತಾಲೂಕಿನ ಮುಂಡೂರು ಬಂಗಾರಡ್ಕ ನಿವಾಸಿಯಾಗಿರುವ ಕೃಷಿಕ ಮುರಳೀಧರ ಭಟ್ ಹಾಗೂ ಶೋಭಾ ಎಂ.ಬಿ ದಂಪತಿಯ ಪುತ್ರಿ.
ಸಣ್ಣ ಪ್ರಾಯದಲ್ಲಿಯೇ ಕುತ್ತಿಗೆಯಲ್ಲಿ ಎಲುಬಿನ ಹೆಚ್ಚುವರಿ ಬೆಳವಣಿಗೆಯಾಗಿದ್ದು, ಇದನ್ನು ಸರಿಪಡಿಸಲು ಕೊಯಂಬತ್ತೂರಿನಲ್ಲಿ ಸರ್ಜರಿಗಾಗಿ ತುಂಬಾ ಸಮಯ ಎಸೆಸೆಲ್ಸಿ ತರಗತಿ ಬಿಟ್ಟು ಆಸ್ಪತ್ರೆಯಲ್ಲಿದ್ದು ಚಿಕಿತ್ಸೆ ಮಾಡಿಸಿಕೊಳ್ಳಬೇಕಾಗಿ ಬಂದಿತ್ತು.
''ಹುಟ್ಟಿನಿಂದಲೇ ಸ್ಕೋಲಿಯೋಸಿಸ್ ಎಂಬ ಖಾಯಿಲೆಗೆ ಒಳಗಾಗಿದ್ದ ಸಿಂಚನ ಇದರ ಪರಿಣಾಮವಾಗಿ ಬೆನ್ನುಹುರಿಯ ಎಳುಬು ಬೆಳವಣಿಗೆಯಲ್ಲಿ ಸಮಸ್ಯೆ ಕಾಡುತ್ತಿತ್ತು. ಮಗುವಿಗೆ ಒಂದು ವರ್ಷವಾದಾಗ ಇದರ ಬಗ್ಗೆ ಅರಿವಿಗೆ ಬಂದಿದೆ. ಎರಡು ವರ್ಷವಾದಾಗ ಕುತ್ತಿಗೆಯೂ ವಾಲಲು ಆರಂಭವಾಗಿತ್ತು. ಚಿಕ್ಕ ಮಗುವಾಗಿರುವ ಕಾರಣ ಎಂಆರ್ ಐ ಸ್ಕ್ಯಾನ್ ಮಾಡಲು ನಾವು ಮುಂದಾಗಲಿಲ್ಲ. 5 ನೇ ತರಗತಿಗೆ ಬಂದಾಗ ಆಕೆಯ ಕೈಯಲ್ಲೂ ನೋವು ಕಾಣಿಸಿಕೊಂಡಿದ್ದು ಇದರ ಬಗ್ಗೆ ಕೆಲವರ ಸಲಹೆಗಳನ್ನು ಪಡೆದುಕೊಂಡು ಏಷ್ಯಾದ ಪ್ರಮುಖ ಅರ್ಥೋ ವೈದ್ಯಕೀಯ ಸಂಸ್ಥೆ ಕೊಯಮತ್ತೂರಿನ ಗಂಗಾ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದೆವು. ಅಲ್ಲಿನ ತಜ್ಞ ವೈದ್ಯರ ಮೂಲಕ ಪ್ರತಿ 6 ತಿಂಗಳಿಗೆ ಒಂದು ಬಾರಿಯಂತೆ ಆಕೆ 9ನೆ ತರಗತಿ ತಲುಪುವ ತನಕ 6 ಬಾರಿ ಬೆನ್ನುಹುರಿಯ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ. ಪ್ರತಿ ಬಾರಿ ಶಸ್ತ್ರ ಚಿಕಿತ್ಸೆ ಮಾಡುವಾಗಲೂ ಬೆನ್ನು ಮೂಳೆಯನ್ನು ಎಳೆದು ಎತ್ತರಿಸಿ ಕೂರಿಸಿ ಕಸಿ ಮಾಡಬೇಕಾಗಿತ್ತು. ಪ್ರತಿ ಬಾರಿ ಆಪರೇಷನ್ ಆದ ಬಳಿಕ ಕುತ್ತಿಗೆಗೆ ಪ್ಲಾಸ್ಟರ್ ಹಾಕಲಾಗುತ್ತಿತ್ತು. ಚಿಕಿತ್ಸೆಗಾಗಿ ಸುಮಾರು 25 ಲಕ್ಷ ರೂ. ಹೆಚ್ಚು ಖರ್ಚಾಗಿದ್ದರೂ ನಾವು ಯಾರಲ್ಲೂ ಸಹಾಯ ಪಡೆದುಕೊಂಡಿರಲಿಲ್ಲ. ಈಗ ದೈಹಿಕವಾಗಿ ಬೆಳವಣಿಗೆಯಲ್ಲಿ ಗಿಡ್ಡವಾಗಿರುವುದನ್ನು ಬಿಟ್ಟರೆ ಆರೋಗ್ಯವಾಗಿದ್ದಾಳೆ.
- ಶೋಭಾ ಎಂ.ಬಿ, ಸಿಂಚನಾಲಕ್ಷ್ಮೀ ತಾಯಿ
ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 624 ಅಂಕ ಪಡೆದು ರಾಜ್ಯದಲ್ಲಿ ದ್ವಿತೀಯ ಸ್ಥಾನ ಪಡೆದ ಸಿಂಚನ ಲಕ್ಷ್ಮೀ ಅವರನ್ನು ಶಾಸಕ ಸಂಜೀವ ಮಠಂದೂರು ಶಾಲೆಯಲಿ ಭೇಟಿಯಾಗಿ ಅಭಿನಂದಿಸಿದರು.
ಕ್ಷೇತ್ರ ಶಿಕ್ಷಣ ಪರಿವೀಕ್ಷಣಾಧಿಕಾರಿ ಸುಂದರ ಗೌಡ, ಮುಖ್ಯಗುರು ಸತೀಶ್ ಕುಮಾರ್ ರೈ ಸಿಂಚನ ಲಕ್ಷ್ಮೀ ಅವರ ತಾಯಿ ಶೋಭಾ ಉಪಸ್ಥಿತರಿದ್ದರು.