ಮುಖ್ಯಮಂತ್ರಿ ಚಿಕಿತ್ಸೆ ಪಡೆಯುತ್ತಿದ್ದಾರೆಯೇ ಹೊರತು ಮೋಜು ಮಾಡುತ್ತಿಲ್ಲ: ಸಚಿವ ಸಾ.ರಾ. ಮಹೇಶ್
ಉಡುಪಿ, ಎ.30: ಮುಖ್ಯಮಂತ್ರಿ ಕುಮಾರಸ್ವಾಮಿ ಐದು ದಿನಗಳ ಚಿಕಿತ್ಸೆಗಾಗಿ ಉಡುಪಿಯ ಮೂಳೂರಿಗೆ ಆಗಮಿಸಿದ್ದು, ಶ್ರೀಲಂಕಾದಲ್ಲಿ ನಡೆದ ಸ್ಫೋಟದ ಹಿನ್ನೆಲೆಯಲ್ಲಿ ಎರಡೇ ದಿನದಲ್ಲಿ ಚಿಕಿತ್ಸೆ ಮೊಟಕುಗೊಳಿಸಿ ಬೆಂಗಳೂರಿಗೆ ಹೋಗಿದ್ದು ಮತ್ತೆ ಇಲ್ಲಿಗೆ ಬಂದಿದ್ದಾರೆಯೇ ಹೊರತು ಮೋಜು ಮಾಡುವುದಕ್ಕಲ್ಲ ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ತಿಳಿಸಿದ್ದಾರೆ.
ಮುಖ್ಯಮಂತ್ರಿ ಜೊತೆ ಮೂಳೂರು ಹೆಲ್ತ್ ರೆಸಾರ್ಟ್ನಲ್ಲಿ ತಂಗಿದ್ದ ಸಚಿವ ಸಾರಾ ಮಹೇಶ್ ಇಂದು ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ದರ್ಶನ ಮಾಡಿದರು. ಬಳಿಕ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಹಿರಿಯರಾದ ಯಡಿಯೂರಪ್ಪ ಕೂಡ ಮುಖ್ಯಮಂತ್ರಿ ಆಗಿದ್ದರು. ಮುಖ್ಯಮಂತ್ರಿಗಳು ಕೆಲವೊಮ್ಮೆ ಎರಡು ಗಂಟೆ ರಾತ್ರಿಯವರೆಗೂ ಬ್ಯುಸಿಯಾಗಿ ಇರುತ್ತಾರೆ. ಈ ವಿಚಾರ ಯಡಿಯೂರಪ್ಪರಿಗೂ ಗೊತ್ತಿದೆ. ರಾಜಕಾರಣಿಗಳಿಗೂ ವೈಯಕ್ತಿಕ ಜೀವನ ಎಂಬುದು ಇದೆ. ಹೀಗಿರುವಾಗ ಅವರ ದೈನಂದಿನ ಜೀವನ ಮತ್ತು ಆರೋಗ್ಯ ಕೂಡ ಮುಖ್ಯವಾಗಿರುತ್ತದೆ ಎಂದರು.
ಮುಖ್ಯಮಂತ್ರಿಗಳು ರೆಸಾರ್ಟ್ಗೆ ಮೋಜು ಮಾಡಲು ಬಂದಿದ್ದಾರೆ ಎಂಬ ಯಡಿಯೂರಪ್ಪ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಸಚಿವರು, ಹಾಗಾದರೆ ಆಯುರ್ವೇದ ಚಿಕಿತ್ಸೆ ಪಡೆಯುವುದು ಮೋಜ ಎಂದು ಪ್ರಶ್ನಿಸಿದರು.
ಸಚಿವರಾದವರಿಗೆ ಜವಾಬ್ದಾರಿ ಇದೆ. ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ. ಅಧಿಕಾರಿಗಳ ಜೊತೆ ಸಂಪರ್ಕ ಇಟ್ಟುಕೊಂಡು ಸಮಸ್ಯೆ ಆಗದಂತೆ ನೋಡಿ ಕೊಳ್ಳುತ್ತಿದ್ದೇವೆ. ಆದರೆ ಅಧಿಕಾರಿಗಳ ಸಭೆ ನಡೆಸುವ ಬಗ್ಗೆ ಬಿಜೆಪಿಯವರೆ ಚುನಾವಣಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಹೀಗಾಗಿ ಸಭೆ ಕರೆಯುವುದಕ್ಕೂ ನೀತಿ ಸಂಹಿತೆ ಅಡ್ಡಿಯಾಗುತ್ತಿದೆ. ಆದರೂ ನಾವು ನಮ್ಮ ಇತಿಮಿತಿಯಲ್ಲಿ ಜವಾಬ್ದಾರಿಯನ್ನು ನಿರ್ಹಿಸುತ್ತಿದ್ದೇವೆ ಎಂದು ಹೇಳಿದರು.