ಮಂಗಳೂರು: ‘ರಾಣಿ ಅಬ್ಬಕ್ಕ ಪಡೆ’ ರಚನೆ
ಮಂಗಳೂರು, ಎ. 30: ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಮಹಿಳೆ ಮತ್ತು ಮಕ್ಕಳ ಸುರಕ್ಷತಾ ದೃಷ್ಟಿಯಿಂದ 50 ಮಂದಿ ಮಹಿಳಾ ಪೊಲೀಸರನ್ನೊಳಗೊಂಡ ‘ರಾಣಿ ಅಬ್ಬಕ್ಕ ಪಡೆ’ ರಚನೆಯಾಗಿದ್ದು, ಮಂಗಳವಾರ ಪೊಲೀಸ್ ಕಮಿಷನರ್ ಡಾ. ಸಂದೀಪ್ ಪಾಟೀಲ್ ಚಾಲನೆ ನೀಡಿದರು.
ಕಾರ್ಯಕ್ರಮವನ್ನು ಹಸಿರು ನಿಶಾನೆ ತೋರಿಸಿ ಉದ್ಘಾಟಿಸಿ ಮಾತನಾಡಿದ ಕಮಿಷನರ್ ಡಾ. ಸಂದೀಪ್ ಪಾಟೀಲ್ ಅವರು, ಡಿಜಿ, ಐಜಿಪಿ ಅವರ ಸೂಚನೆ ಮೇರೆಗೆ ರಾಜ್ಯದ ಪ್ರತಿ ಜಿಲ್ಲೆಗಳಲ್ಲಿ ವಿಶೇಷ ಮಹಿಳಾ ಪಡೆ ರಚಿಸಲಾಗಿದೆ ಎಂದರು.
ನಗರದ ಮಹಿಳಾ ಪಡೆಗೆ 16ನೇ ಶತಮಾನದಲ್ಲಿ ಪೋರ್ಚುಗೀಸರ ವಿರುದ್ಧ ದಿಟ್ಟ ಹೋರಾಟ ಮಾಡಿದ ರಾಣಿ ಅಬ್ಬಕ್ಕ ಹೆಸರನ್ನಿಡಲಾಗಿದೆ. ಈ ಪಡೆಯನ್ನು ಒಬ್ಬರು ಎಸ್ಐ ದರ್ಜೆ ಮಹಿಳಾ ಅಧಿಕಾರಿ ನಿರ್ವಹಣೆ ಮಾಡಲಿದ್ದಾರೆ. ನಗರದಲ್ಲಿರುವ ಜನನಿಬಿಡ ಪ್ರದೇಶಗಳಾದ ಮಾಲ್ಗಳು, ಕಾಲೇಜುಗಳು, ಪಾರ್ಕ್ಗಳು, ಬೀಚ್ಗಳು, ರೈಲ್ವೆ ನಿಲ್ದಾಣ, ಸೆಂಟ್ರಲ್ ಮಾರ್ಕೆಟ್ ಸೇರಿದಂತೆ ಕೆಲವು ಪ್ರದೇಶದಲ್ಲಿ ಈ ಡೆಯ ಸಿಬ್ಬಂದಿ ನಿಯೋಜಿಸಲಾಗುವುದು. ಕಮಿಷನರೇಟ್ ವ್ಯಾಪ್ತಿಯಲ್ಲಿ 50ಪ್ರದೇಶಗಳನ್ನು ಗುರುತಿಸಲಾಗಿದ್ದು, ಒಂದೊಂದು ಪಾಯಿಂಟ್ಗಳಲ್ಲಿ 3ರಿಂದ 5ಮಂದಿ ಕಾರ್ಯನಿರ್ವಹಿಸಲಿದ್ದಾರೆ ಎಂದರು.
ಸಾರ್ವಜನಿಕ ಸ್ಥಳದಲ್ಲಿ ಮಹಿಳೆಯರ ಜತೆ ಅಸಭ್ಯ ವರ್ತನೆ, ಚುಡಾವಣೆ, ಮಹಿಳಾ ದೌರ್ಜನ್ಯಘಿ, ನೈತಿಕ ಪೊಲೀಸ್ಗಿರಿ, ಸರಗಳ್ಳತನ, ಚುಡಾವಣೆ ಸೇರಿದಂತೆ ಮತ್ತಿತರ ಪ್ರಕರಣಗಳನ್ನು ಹತ್ತಿಕ್ಕಲು ಈ ಪಡೆ ಕಾರ್ಯನಿರ್ವಹಿಸಲಿದೆ. ಪಿಎಸ್ಐ ಕಲಾಶ್ರೀ ಇದರ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ. ಯಾವುದೇ ಅಪರಾಧ ಘಟನೆಗಳು ನಡೆದಲ್ಲಿ ಸಂಬಂಧಪಟ್ಟ ಪೊಲೀಸ್ ಠಾಣೆಯಲ್ಲಿ ಆ ಪ್ರಕರಣ ದಾಖಲಾಗಲಿದೆ ಎಂದರು.
ಈ ಸಂದರ್ಭ ಮಂಗಳೂರು ನಗರ ಕಾನೂನು ಮತ್ತು ಸುವ್ಯವಸ್ಥಾ ವಿಭಾಗದ ಉಪಪೊಲೀಸ್ ಆಯುಕ್ತ ಹನುಮಂತರಾಯ, ನಗರ ಸಂಚಾರ ಮತ್ತು ಅಪರಾಧ ವಿಭಾಗ ಉಪಪೊಲೀಸ್ ಆಯುಕ್ತ ಲಕ್ಷ್ಮೀಗಣೇಶ್ ಉಪಸ್ಥಿತರಿದ್ದರು.
ಮಹಿಳೆಯರಿಗೆ, ಮಕ್ಕಳಿಗೆ ಭದ್ರತೆ ಈ ಯೋಜನೆಯ ಮುಖ್ಯ ಉದ್ದೇಶ
ಮಹಿಳೆಯರ ವಿರುದ್ಧ ಯಾವುದೇ ಅಹಿತಕರ ಘಟನೆ ನಡೆದ ಸಂದರ್ಭದಲ್ಲಿ ಪುರುಷ ಪೊಲೀಸರಿಗೆ ದೂರು ನೀಡಲು ಬಹಳಷ್ಟು ಸಂತ್ರಸ್ತರು ಹಿಂದೇಟು ಹಾಕುತ್ತಾರೆ. ಈ ನಿಟ್ಟಿನಲ್ಲಿ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಸಾರ್ವಜನಿಕ ಸ್ಥಳಗಳಲ್ಲಿ ಸುರಕ್ಷತೆಯನ್ನು ಮತ್ತಷ್ಟು ಖಾತ್ರಿ ಪಡಿಸುವ ನಿಟ್ಟಿನಲ್ಲಿ ಈ ಮಹಿಳಾ ಪಡೆ ಕಾರ್ಯ ನಿರ್ವಹಿಸಲಿದೆ ಎಂದು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ.
ಪೊಲೀಸ್ ಬಸ್ನಲ್ಲೇ ಈ ಸಿಬ್ಬಂದಿಗಳನ್ನು ಸಂಬಂಧಪಟ್ಟ ಪ್ರದೇಶಕ್ಕೆ ಬೆಳಗ್ಗೆ ಕರೆದೊಯ್ದು, ರಾತ್ರಿ ವೇಳೆ ಪಿಕಪ್ ಮಾಡಲಾಗುವುದು. ನಿಗದಿತ ಜಾಗದಲ್ಲಿ ಅಬ್ಬಕ್ಕ ರಾಣಿ ಪಡೆ ಸಿಬ್ಬಂದಿ ಕರ್ತವ್ಯನಿರ್ವಹಿಸಲಿದ್ದು ಯುವತಿಯರಿಗೆ, ಮಹಿಳೆಯರಿಗೆ, ಮಕ್ಕಳಿಗೆ ಯಾವುದೇ ತೊಂದರೆ ಕೂಡಲೇ ಸ್ಪಂದಿಸಲಿದ್ದಾರೆ.
ಯಾವುದೇ ದೊಡ್ಡ ಮಟ್ಟದ ಘಟನೆಗಳು ಆದಲ್ಲಿ ಪಿಎಸ್ ಅಥವಾ ಆಯಾಯ ಠಾಣೆಯ ಮುಖ್ಯಸ್ಥರು, ಅದಕ್ಕಿಂತ ವೆುೀಲ್ಪಟ್ಟದ ಅಧಿಕಾರಿಗಳಿಗೆ ತಿಳಿಸಬೇಕು. ಅಪರಾಧ ಸಂಬಂಧಿತ ಪ್ರಕರಣಗಳು ನಡೆದಾಗ ಆಯಾಯ ಪೊಲೀಸ್ ಠಾಣಾ ವ್ಯಾಪ್ತಿಗೆ ಈ ಪ್ರಕರಣಗಳು ಬರಲಿದೆ.