ಕದ್ರಿ ಕ್ಷೇತ್ರ ಬ್ರಹ್ಮಕಲಶೋತ್ಸವಕ್ಕೆ ಸಕಲ ವ್ಯವಸ್ಥೆ: ಯು.ಟಿ.ಖಾದರ್
ಮಂಗಳೂರು, ಎ.30: ಕದ್ರಿ ಮಂಜುನಾಥ ದೇವಸ್ಥಾನದಲ್ಲಿ ಮೇ 2ರಿಂದ 12ರವರೆಗೆ ನಡೆಯಲಿರುವ ಬ್ರಹ್ಮಕಲಶಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸುರಕ್ಷತೆ, ಸ್ವಚ್ಛತೆ ಸೇರಿದಂತೆ ಸಕಲ ವ್ಯವಸ್ಥೆಗಳಿಗೆ ಸಂಬಂಧಪಟ್ಟ ಇಲಾಖೆಗಳಿಗೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ದೇವಸ್ಥಾನವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳನ್ನು ಸುಸಜ್ಜಿತ ಹಾಗೂ ಅಭಿವೃದ್ಧಿಗೊಳಿಸಲು ಸೂಚಿಸ ಲಾಗಿದೆ ಎಂದರು.
ಇದೇ ವೇಳೆ ದಾರಿದೀಪಗಳನ್ನು ಸುವ್ಯವಸ್ಥೆಗೊಳಿಸುವ ಜತೆಗೆ ಮೇ 2ರಿಂದ 12ರವರೆಗೆ ಈ ಪ್ರದೇಶದಲ್ಲಿ ವಿದ್ಯುತ್ ನಿಲುಗಡೆ ಮಾಡದಂತೆ ಮೆಸ್ಕಾಂಗೆ ಸಲಹೆ ನೀಡಲಾಗಿದೆ. ಆರೋಗ್ಯ ಇಲಾಖೆಯ ಮೂಲಕ ಮೆಡಿಕಲ್ ಕಿಯೋಸ್ಕ್, ಬೈಕ್ ಆ್ಯಂಬುಲೆನ್ಸ್, ವೈದ್ಯರನ್ನು ನಿಯೋಜಿಸುವ ಜತೆಗೆ ಅಗತ್ಯ ತುರ್ತು ಔಷಧಿ ಸಂಗ್ರಹಿಸಿಡಲು ತಿಳಿಸಲಾಗಿದೆ. ಹೆಚ್ಚುವರಿ ಪೊಲೀಸರ ನಿಯೋಜನೆ ಜತೆಗೆ ಮಫ್ತಿಯಲ್ಲಿ ಪೊಲೀಸರು ಹಾಗೂ ಗುಪ್ತಚರ ಇಲಾಖೆ ಕಣ್ಗಾವಲು ಇರಿಸುವ ಮೂಲಕ ಸುರಕ್ಷತೆಯನ್ನು ಖಾತರಿಪಡಿಸಲು ಪೊಲೀಸ್ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ. ಪಾರ್ಕಿಂಗ್ ವ್ಯವಸ್ಥೆಗೂ ಸೂಕ್ತ ಬಂದೋಬಸ್ತ್ ಮಾಡಲು ತಿಳಿಸಲಾಗಿದ್ದು, ಆಹಾರವಸ್ತುಗಳ ತಪಾಸಣೆಯ ಜತೆಗೆ ಸ್ವಚ್ಛತೆಯನ್ನು ಕಾಪಾಡಲು ತಿಳಿಸಲಾಗಿದೆ ಎಂದು ಸಚಿವರು ಹೇಳಿದರು.
ಕುಡಿಯುವ ನೀರಿನ ರೇಶನಿಂಗ್ ಅನಿವಾರ್ಯ
ಈ ವಾರದಿಂದ ಮಂಗಳೂರು ನಗರ ಪಾಲಿಕೆಗೆ ಕುಡಿಯುವ ನೀರಿನ ಪೂರೈಕೆಯಲ್ಲಿ ಎರಡು ದಿನಗಳ ಕಡಿತ ಮಾಡಲು ನಿರ್ಧರಿಸಲಾಗಿತ್ತು. ಇಂದಿನಿಂದ ಆರಂಭವಾಗಬೇಕಿದ್ದ ರೇಶನಿಂಗ್ ನಾಳೆಗೆ ಮುಂದೂಡಲಾಗಿದೆ. ಆದರೆ ಮುಂಗಾರು ಪೂರ್ವ ಮಳೆಯ ಬಗ್ಗೆ ಹವಾಮಾನ ಮುನ್ಸೂಚನೆ ಸ್ಪಷ್ಟವಾಗಿಲ್ಲದ ಕಾರಣ ಇದೀಗ ರೇಶನಿಂಗ್ ಅನಿವಾರ್ಯ. ಮೋಡವಿದ್ದ ಕಾರಣ ನಿನ್ನೆಯಾದರೂ ಮಳೆಯಾಗಬಹುದು ಎಂದು ಭಾವಿಸಲಾಗಿತ್ತು. ಆದರೆ ಇದೀಗ ಮುಂದಿನ ದಿನಗಳಲ್ಲಿ ನೀರಿಗೆ ಭಾರೀ ತಂದರೆ ಆಗದಂತೆ ನಾಳೆಯಿಂದಲೇ ರೇಶನಿಂಗ್ ಅನಿವಾರ್ಯವಾಗಿದೆ. ಜನರ ಸಹಕಾರದೊಂದಿಗೆ ತೊಂದರೆ ಆಗದ ರೀತಿಯಲ್ಲಿ ರೇಶನಿಂಗ್ ವ್ಯವಸ್ಥೆ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ತಿಳಿಸಿದರು.
ಕುಡಿಯುವ ನೀರಿನ ವಿಷಯದಲ್ಲಿ ರಾಜಕೀಯ ಬೇಡ ಎಂದು ಹೇಳಿದ ಅವರು, ಸಚಿವನಾಗಿ ನಾನಾಗಿಯೇ ಮಂಗಳೂರು ದಕ್ಷಿಣ ಹಾಗೂ ಮಂಗಳೂರು ಉತ್ತರ ಶಾಸಕರಿಗೆ ಕರೆ ಮಾಡಿ ನೀರಿನ ವಿಚಾರದಲ್ಲಿ ಮಾತನಾಡಿದ್ದೇನೆ. ಆದರೆ ಅವರಾಗಿ ನನಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿಲ್ಲ. ನಾನು ಮಾತ್ರ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದೇನೆ ಅವರೇ ತೆಗೆದುಕೊಂಡಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ರವರ ಹೇಳಿಕೆಗೆ ಸಚಿವ ಯು.ಟಿ.ಖಾದರ್ ಪ್ರತಿಕ್ರಿಯಿಸಿದರು.
ಕುಡಿಯುವ ನೀರಿಗೆ ಸಂಬಂಧಿಸಿ ತುಂಬೆ ವೆಂಟೆಂಡ್ ಡ್ಯಾಂನ ನೀರು ನಿಲ್ಲಿಸುವ ಸಾಮರ್ಥ್ಯವನ್ನು 6ರಿಂದ 7 ಮೀಟರ್ಗೆ ಹೆಚ್ಚಿಸಲು 115 ಕೋಟಿ ರೂ.ಗಳನ್ನು ತರಲು ಆಗಿಲ್ಲವೇ ಎಂದು ಶಾಸಕರು ಪ್ರಶ್ನಿಸಿದ್ದಾರೆ. ಆದರೆ ಸಿದ್ಧರಾಮಯ್ಯ ನೇತೃತ್ವದ ಸರಕಾರ ಇರುವ ಅವಧಿಯಲ್ಲಿಯೇ ತುಂಬೆ ನೂತನ ಅಣೆಕಟ್ಟು ಪೂರ್ಣಗೊಂಡು ಆರು ಮೀಟರ್ ನೀರು ನಿಲ್ಲಿಸುವ ವ್ಯವಸ್ಥೆ ಮಾಡಿರುವುದು. ಏಳು ಮೀಟರ್ ನಿಲ್ಲಿಸಲು ಮುಳುಗಡೆಯಾಗುವ ತಾತ್ಕಾಲಿಕ ವಾರ್ಷಿಕ ನಷ್ಟದ ಬಗ್ಗೆ ಕ್ರಮ ಆಗಬೇಕಾಗಿದೆ. ಶಾಸಕರಾಗಿದ್ದು ಕಳೆದ ಒಂದು ವರ್ಷದಲ್ಲಿ ಅವರು ನಗರಾಭಿವೃದ್ಧಿ ಸಚಿವನಾಗಿರುವ ನನ್ನ ಬಳಿಕ ಈ ಬಗ್ಗೆ ಒಂದು ಮಾತು ಚರ್ಚಿಸಿಲ್ಲ. ಯಡಿಯೂರಪ್ಪನವರ ಕಾಲದಲ್ಲಿ ತುಂಬೆ ನೂತನ ಅಣೆಕಟ್ಟು ನಿರ್ಮಾಣಕ್ಕೆ ಮಂಜೂರಾತಿ ದೊರಕಿದ್ದು ಮಾತ್ರ. ಹಣ ದೊರಕಿರುವುದು ಕಾಂಗ್ರೆಸ್ ಅವಧಿಯಲ್ಲಿ, ಯಡಿಯೂರಪ್ಪನವರು ಮಂಗಳೂರಿಗೆ ಮೋನೊೀ ರೈಲು ತರುವುದಾಗಿ ಹೇಳಿದ್ದರು. ತಂದಿದ್ದಾರೆಯೇ? ನಾವು ಸುಮ್ಮನೆ ರಾಜಕೀಯ ಮಾಡಲು ಹೋಗುವುದಿಲ್ಲ. ಜವಾಬ್ಧಾರಿಯುತ ಸ್ಥಾನದಲ್ಲಿರುವಾಗ ಜವಾಬ್ಧಾರಿಯಿಂದ ಮಾತನಾಡಬೇಕು. ಚರ್ಚೆ ಮಾಡಲು ಹೊರಟರೆ ಅವರಿಗೇ ಮುಖಭಂಗವಾಗಬಹುದು ಎಂದು ಯು.ಟಿ.ಖಾದರ್ ಸುದ್ದಿಗಾರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ರಾಜಕೀಯ ಬಿಟ್ಟು ಮಳೆಗಾಗಿ ಪ್ರಾರ್ಥಿಸುವ
ಈಗ ನೀರಿನ ವಿಷಯದಲ್ಲಿ ರಾಜಕೀಯ ಮಾತನಾಡುವುದು ಬಿಟ್ಟು, ಬೇಗ ಮಳೆ ಬರಲಿ ಎಂದು ಪ್ರಾರ್ಥಿಸೋಣ. ಈ ರೀತಿ ರಾಜಕೀಯ ಮಾಡಿದರೆ ದೇವರು ಕೂಡಾ ಮುನಿಸಿಯಾನು. ಮುಂಗಾರು ಮಳೆ ಜೂನ್ 15ರ ನಂತರ ಸುರಿದ ಉದಾಹರಣೆಯೂ ಇರುವುದರಿಂದ ನಾವು ಮುಂದಿನ ದಿನಗಳಲ್ಲಿ ಎದುರಿಸ ಬೇಕಾದ ಅಪಾಯಕ್ಕೆ ಅವಕಾಶ ನೀಡದೆ ಇರುವ ನೀರನ್ನು ಮಿತವ್ಯಯವಾಗಿ ಬಳಸಲು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಚಿವ ಯು.ಟಿ.ಖಾದರ್ರವರು ಶಾಸಕ ವೇದವ್ಯಾಸ ಕಾಮತ್ರವರ ಆರೋಪಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಬಾಡಿಗೆಗೆ ನೀಡುವಾಗ ಇರಲಿ ಎಚ್ಚರ
ನೆರೆಯ ಶ್ರೀಲಂಕಾದಲ್ಲಿನ ಬಾಂಬ್ ದಾಳಿ ಹಿನ್ನೆಲೆಯಲ್ಲಿ ದ.ಕ. ಜಿಲ್ಲೆಯಲ್ಲಿಯೂ ಎಚ್ಚರಿಕೆ ವಹಿಸಲು ಸೂಚಿಸಲಾಗಿದೆ. ಈ ನಡುವೆ ಜನಸಾಮಾನ್ಯರು ತಮ್ಮ ಮನೆಗಳಲ್ಲಿ ಅಪರಿಚಿತರಿಗೆ ಮನೆ ಅಥವಾ ಕಟ್ಟಡ ಅಥವಾ ರೂಂಗಳನ್ನು ಬಾಡಿಗೆ ನೀಡುವ ಸಂದರ್ಭ ಅವರ ಪೂರ್ವಾಪರ ತಿಳಿದುಕೊಂಡು ಮಾಹಿತಿಯನ್ನು ಪೊಲೀಸ್ ಠಾಣೆಗಳಿಗೆ ನೀಡಬೇಕು. ಈ ಬಗ್ಗೆ ಪೊಲೀಸ್ ಇಲಾಖೆಗೂ ನಿರ್ದೇಶಿಸಲಾಗಿದೆ ಎಂದು ಸಚಿವ ಯು.ಟಿ.ಖಾದರ್ ತಿಳಿಸಿದರು.
ನಾನು ಸ್ವಿಮ್ಮಿಂಗ್ ಕಲಿತಿದ್ದು ದೇವಳದ ಈಜುಕೊಳದಲ್ಲಿ
ಕದ್ರಿ ಮಂಜುನಾಥ ದೇವಳದ ಕೆರೆ ಪವಿತ್ರವಾದುದ್ದು. ನಾನು ಬಾಲಕನಿದ್ದಾಗ ಇಲ್ಲಿಯೇ ಸಮೀಪದಲ್ಲಿ ನಮ್ಮ ಮನೆ ಇದ್ದುದರಿಂದ ನಾನು ನನ್ನ ಸ್ನೇಹಿತರ ಜತೆ ಇಲ್ಲಿ ಬಂದು ಸ್ವಿಮ್ಮಿಂಗ್ ಕಲಿತಿದ್ದೆ.
- ಯು.ಟಿ.ಖಾದರ್, ನಗರಾಭಿವೃದ್ಧಿ ಸಚಿವ, ಕರ್ನಾಟಕ ಸರಕಾರ.