ಮಂಗಳೂರು: ಜೂ.5ರಿಂದ ವೈಜ್ಞಾನಿಕ ತ್ಯಾಜ್ಯ ವಿಲೇವಾರಿ ಕಾರ್ಯಕ್ರಮ
ಮಂಗಳೂರು, ಎ.30: ಸ್ವಚ್ಛ ಭಾರತ್ ಮಿಷನ್(ಗ್ರಾ) ಯೋಜನೆಯಡಿ ‘ಸ್ವಚ್ಛಮೇವ ಜಯತೆ’ ಎಂಬ ಘೋಷವಾಕ್ಯದಡಿ ಘನತ್ಯಾಜ್ಯ ವಿಲೇವಾರಿ ಕಾರ್ಯಕ್ರಮದ ಕುರಿತು ನಿರಂತರ ಅರಿವು ಮೂಡಿಸುವ ಹಿನ್ನೆಲೆ ಆಯ-ವ್ಯಯದಲ್ಲಿ ಘೋಷಣೆಯಾದಂತೆ ದ.ಕ. ಜಿಲ್ಲೆಯಾದ್ಯಂತ ಜೂ.5 ರಿಂದ 30ರವರೆಗೆ ವೈಜ್ಞಾನಿಕವಾಗಿ ತ್ಯಾಜ್ಯವಿಲೇ, ನಿರ್ವಹಣೆ ಕುರಿತು ಕಾರ್ಯಕ್ರಮ ನಡೆಯಲಿದೆ.
ಜಿಪಂ ಸಭಾಂಗಣದಲ್ಲಿ ಜಿಪಂ ಸಿಇಒ ಡಾ.ಆರ್.ಸೆಲ್ವಮಣಿ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆದ ಪೂರ್ವಭಾವಿ ಸಭೆಯಲ್ಲಿ, ಪಂಚಾಯತ್ ರಾಜ್ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಾರ್ಗದರ್ಶನದಂತೆ ತಾಪಂ, ಗ್ರಾಪಂ ಹಂತದಲ್ಲಿ ವಿವಿಧ ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಪ್ರತಿಯೊಂದು ಗ್ರಾಮದಲ್ಲೂ ಸ್ವಚ್ಛತೆಯ ವಾತಾವರಣವನ್ನು ನಿರ್ಮಾಣ ಮಾಡಬೇಕು ಎಂದು ಸಿಇಒ ತಿಳಿಸಿದರು.
ಮೇ 25 ರೊಳಗೆ ಜಿಪಂ/ತಾಪಂ/ಗ್ರಾಪಂ ಹಂತದಲ್ಲಿ ಶೌಚಾಲಯ ಬಳಕೆ, ಮಕ್ಕಳ ಮಲ ಸೂಕ್ತ ವಿಲೇವಾರಿ ಮತ್ತು ಘನತ್ಯಾಜ್ಯ ನಿರ್ವಹಣೆ ಕುರಿತಂತೆ ಪ್ರತಿ ಗ್ರಾಮದಲ್ಲಿ ಐದು ಗೋಡೆ ಬರಹಗಳನ್ನು ಬರೆಸಬೇಕು. ಸ್ವಚ್ಛಮೇವ ಜಯತೆ ಆಂದೋಲನದ ಮಾಹಿತಿಯನ್ನು ಒಳಗೊಂಡ ಪೋಸ್ಟರ್ಗಳನ್ನು ಮುದ್ರಣ ಮಾಡಿ ಗ್ರಾಪಂಗಳಿಗೆ ಹಂಚಿಕೆ ಮಾಡಬೇಕು ಎಂದು ತಿಳಿಸಿದರು. ಮಾಹಿತಿ ಕಾರ್ಯಕ್ರಮಗಳು: ಜೂ.5ರಿಂದ ಒಂದು ತಿಂಗಳುಗಳ ಕಾಲ ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 2ರಿಂದ 3 ಸ್ವಚ್ಛತಾ ರಥಗಳನ್ನು ನಿಯೋಜಿಸಿ ‘ಸ್ವಚ್ಛಮೇವ ಜಯತೆ’ ಆಂದೋಲನದ ಬಗ್ಗೆ ಗ್ರಾಮೀಣ ಸಮುದಾಯದಲ್ಲಿ ಜಾಗೃತಿ ಮೂಡಿಸಬೇಕು. ಜೂ.6ರಂದು ಶಾಲಾ ಮಕ್ಕಳಿಂದ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳುವ ಮೂಲಕ ಜನರಲ್ಲಿ ಹಸಿಕಸ/ಒಣಕಸ ವಿಂಗಡಣೆ ಮತ್ತು ನಿರ್ವಹಣೆ, ಶೌಚಾಲಯ ಬಳಕೆ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ಜೂ.9ರಿಂದ 10ರವರೆಗೆ ಶಾಲಾ-ಕಾಲೇಜುಗಳಲ್ಲಿ ಸ್ವಚ್ಛತೆ ಕುರಿತು ಚರ್ಚಾ ಸ್ವರ್ಧೆ, ಪ್ರಬಂಧ ಸ್ಪರ್ಧೆ, 11ರಿಂದ 14ರವರೆಗೆ ಗ್ರಾಮೀಣ ಸಮುದಾಯಕ್ಕೆ ಎರಡು ಗುಂಡಿಯ ಉಪಯೋಗ ಮತ್ತು ಅದರ ಮಹತ್ವದ ಬಗ್ಗೆ ಮಾಹಿತಿ ನೀಡುವ ಕಾರ್ಯಕ್ರಮಗಳ ಆಯೋಜನೆ. 15ರಿಂದ 21ರವರೆಗೆ ವಿಶೇಷ ಕಾರ್ಯಾದೇಶ ವಿತರಣಾ ಅಭಿಯಾನ, 21ರಿಂದ 25ರವರೆಗೆ ಶೌಚಾಲಯ ಬಳಕೆ ಅಭಿಯಾನ ಮತ್ತು ವಿಶೇಷ ಕೈ ತೊಳೆಯುವ ಅಭಿಯಾನ ನಡೆಯಲಿದೆ.
ಜೂ.27ರಂದು ಗ್ರಾಪಂ ಹಂತದಲ್ಲಿ ‘ಸ್ವಚ್ಛಮೇವ ಜಯತೆ’ ಆಂದೋಲನದ ಪ್ರಯುಕ್ತ ವಿಶೇಷ ಗ್ರಾಮಸಭೆ ಆಯೋಜಿಸಿ, ಕುಡಿಯುವ ನೀರು, ನೈರ್ಮಲ್ಯ, ಘನತ್ಯಾಜ್ಯ ಮತ್ತು ದ್ರವತ್ಯಾಜ್ಯ ನಿರ್ವಹಣೆ, ಪ್ಲಾಸ್ಟಿಕ್ ನಿಷೇಧ ಕುರಿತು ಗ್ರಾಮೀಣ ಸಮುದಾಯದಲ್ಲಿ ಅರಿವು ಮೂಡಿಸುವ ಕಾರ್ಯಕ್ರಮ ನಡೆಯಲಿದೆ.
ಜೂ.30ರಂದು ಅರ್ಥಪೂರ್ಣವಾಗಿ ಸಮಾರೋಪ ಕಾರ್ಯಕ್ರಮ ನಡೆಸಲು ಹಾಗೂ ಈ ನಿಟ್ಟಿನಲ್ಲಿ ವಿಶೇಷ ಕಾರ್ಯಕ್ರಮ ಹಮ್ಮಿಕೊಂಡವರಿಗೆ ಪ್ರಶಸ್ತಿ ನೀಡುವ ಯೋಚನೆಯನ್ನು ಸಿಇಒ ವ್ಯಕ್ತಪಡಿಸಿದರು.
ಕೈತೊಳೆಯುವ ಅಭಿಯಾನವನ್ನು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಸುವ ಬಗ್ಗೆ ಶಿಕ್ಷಣ ಇಲಾಖೆ ಮುತುವರ್ಜಿ ವಹಿಸಬೇಕೆಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಸಿಇಒ ಸೂಚಿಸಿದರು. ಈ ಕಾರ್ಯಕ್ರಮದಲ್ಲಿ ಆಶಾ ಕಾರ್ಯಕರ್ತೆಯರ ಪಾತ್ರ ಮುಖ್ಯವಾದದ್ದು ಎಂದರು.
ಸಭೆಯಲ್ಲಿ ಉಪಕಾರ್ಯದರ್ಶಿ ಮಹೇಶ್ ಉಪಸ್ಥಿತರಿದ್ದರು.