ಮಣಿಪಾಲದಲ್ಲಿ ಸಂಸ್ಥಾಪಕರ ದಿನಾಚರಣೆ: ಅಜ್ಞಾನ, ದಾರಿದ್ರ, ರೋಗಗಳ ನಿವಾರಣೆಯಲ್ಲಿ ಡಾ.ಪೈ ಕೊಡುಗೆ
ಮಣಿಪಾಲ, ಎ.30: ಸ್ವಾತಂತ್ರ ದೊರೆತ ಸಂದರ್ಭದಲ್ಲಿ ಆಗಿನ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಗುರುತಿಸಿದ ದೇಶದ ದೊಡ್ಡ ಪಿಡುಗಾದ ಅಜ್ಞಾನ, ದಾರಿದ್ರ ಹಾಗೂ ರೋಗಗಳ ನಿವಾರಣೆಯಲ್ಲಿ ಮಣಿಪಾಲದ ಡಾ.ಟಿಎಂಎ ಪೈ ಅವರು ದೊಡ್ಡ ಕೊಡುಗೆಯನ್ನು ನೀಡಿದ್ದಾರೆ ಎಂದು ಪೇಜಾವರ ಮಠದ ಶ್ರೀವಿಶ್ವೇಶತೀರ್ಥ ಶ್ರೀಪಾದರು ಅಭಿಪ್ರಾಯ ಪಟ್ಟಿದ್ದಾರೆ.
ಮಣಿಪಾಲ ಅಕಾಡೆಮಿ ಆಫ್ ಜನರಲ್ ಎಜ್ಯುಕೇಶನ್ ಹಾಗೂ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ಗಳ ಜಂಟಿ ಆಶ್ರಯದಲ್ಲಿ ಮಣಿಪಾಲ ಫಾರ್ಚ್ಯೂನ್ ಇನ್ ಹೊಟೇಲ್ ವ್ಯಾಲಿವ್ಯೆನ ಚೈತ್ಯ ಹಾಲ್ನಲ್ಲಿ ಡಾ.ಟಿಎಂಎ ಪೈ ಅವರ 121ನೇ ಜನ್ಮದಿನದ ಸಂದರ್ಭದಲ್ಲಿ ನಡೆದ ಸಂಸ್ಥಾಪಕರ ದಿನಾಚರಣೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.
ಉಡುಪಿ ನಗರವೂ ಸೇರಿದಂತೆ ಜಿಲ್ಲೆ, ಹೊರಜಿಲ್ಲೆಗಳಲ್ಲಿ ಶಾಲಾ- ಕಾಲೇಜುಗಳನ್ನು ನಿರ್ಮಿಸುವ ಮೂಲಕ ಅಜ್ಞಾನವನ್ನೂ, ಸಿಂಡಿಕೇಟ್ ಬ್ಯಾಂಕ್ ಸೇರಿದಂತೆ ವಿವಿಧ ಉದ್ದಿಮೆಗಳನ್ನು ಸ್ಥಾಪಿಸುವ ಮೂಲಕ ದಾರಿದ್ರವನ್ನೂ, ಸುಸಜ್ಜಿತ ವೈದ್ಯಕೀಯ ಕಾಲೇಜು, ಆಸ್ಪತ್ರೆಗಳನ್ನು ಆರಂಭಿಸುವ ಮೂಲಕ ರೋಗರುಜಿನವನ್ನು ಹೋಗಲಾಡಿಸುವಲ್ಲಿ ಡಾ.ಪೈ ವಿಶೇಷ ಪಾತ್ರ ವಹಿಸಿದರು. ಇದು ಅವರ ಅತಿದೊಡ್ಡ ಸಾಧನೆ ಹಾಗೂ ದೇಶಕ್ಕೆ ಸಲ್ಲಿಸಿದ ಸೇವೆಯೂ ಆಗಿದೆ ಎಂದು ಪೇಜಾವರ ಶ್ರೀ ನುಡಿದರು.
ಐವತ್ತರ ದಶಕದಲ್ಲಿ ತಮ್ಮ ಮೊದಲ ಪರ್ಯಾಯ ಸಂದರ್ಭದಲ್ಲಿ ತಾವು ಆಯೋಜಿಸಿದ ಮಾಧ್ವ ತತ್ತ್ವಜ್ಞಾನ ಸಮ್ಮೇಳನಕ್ಕೆ ವಿಘ್ನಗಳು ಎದುರಾದಾಗ ಅದನ್ನು ನಿವಾರಿಸಿದ್ದ ಡಾ.ಪೈ ಅವರು. ಡಾ.ಪೈ ಅವರು ಉಡುಪಿಯಲ್ಲಿ ಎಂಜಿಎಂ ಕಾಲೇಜನ್ನು ಪ್ರಾರಂಬಿಸಿದಾಗ ಉದ್ಘಾಟನೆಗೆ ಪರ್ಯಾಯಶ್ರೀಗಳನ್ನು ಹೊರತು ಪಡಿಸಿ ಉಳಿದ ಏಳು ಮಂದಿ ಅಷ್ಟಮಠದ ಸ್ವಾಮೀಜಿಗಳನ್ನೂ ಕರೆಸಿದ್ದರು ಎಂದು ನೆನಪಿಸಿಕೊಂಡರು.
ಮಣಿಪಾಲದ ಕೆಎಂಸಿಯ ಉದ್ಘಾಟನೆಯ ವೇಳೆಗೆ ತಾವು ಪರ್ಯಾಯ ಪೀಠದಲ್ಲಿದ್ದುದರಿಂದ ಡಾ.ಪೈಗಳ ತೀವ್ರ ಒತ್ತಾಯದ ಹೊರತಾಗಿಯೂ ಸಂಪ್ರದಾಯ ಪಾಲನೆಯ ಕಾರಣಕ್ಕಾಗಿ ತಮಗೆ ಹೋಗಲಾಗಿರಲಿಲ್ಲ. ಆದರೆ ತಮ್ಮ ಐದನೇ ಪರ್ಯಾಯ ಸಂದರ್ಭದಲ್ಲಿ ಅನಾರೋಗ್ಯಕ್ಕೆ ತುತ್ತಾಗುವ ಮೂಲಕ ಶ್ರೀಕೃಷ್ಣನೇ ತಮ್ಮನ್ನು ಮಣಿಪಾಲ ಆಸ್ಪತ್ರೆಗೆ ಕಳುಹಿಸಿಕೊಟ್ಟ ಎಂದು ತಮಾಷೆಯಾಗಿ ಹೇಳಿದರು.
ಇದೇ ಸಂದರ್ಭಗಳಲ್ಲಿ ಮಣಿಪಾಲ ಸಮೂಹ ಸಂಸ್ಥೆಗಳ ಉದ್ಯೋಗಿಗಳಿಗೆ ವಿವಿಧ ಪ್ರಶಸ್ತಿ, ಹಿರಿಯ ಉದ್ಯೋಗಿಗಳಿಗೆ ಸನ್ಮಾನ, ಸ್ಕಾಲರ್ಶಿಪ್, ನಗದು ಬಹುಮಾನಗಳನ್ನು ವಿತರಿಸಲಾಯಿತು. ಕೆಎಂಸಿ ಆಸ್ಪತ್ರೆಯ ದಾದಿಯರಿಗೆ ಉತ್ತಮ ನರ್ಸಿಂಗ್ ಪ್ರಶಸ್ತಿ, ಅಂಗನವಾಡಿ ನೌಕರರಿಗೂ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು.
ಮಂಗಳೂರು ಕೆಎಂಸಿಯ ನಿವೃತ್ತ ಡೀನ್ ಡಾ.ಸಿ.ಆರ್.ಕಾಮತ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಿದ್ದರು. ಅಕಾಡೆಮಿಯ ರಿಜಿಸ್ಟ್ರಾರ್ ಡಾ.ರಂಜನ್ ಪೈ, ಉಪಾದ್ಯಕ್ಷ ಸತೀಶ್ ಯು.ಪೈ, ಮಾಹೆ ಟ್ರಸ್ಟ್ನ ಟ್ರಸ್ಟಿ ವಸಂತಿ ಪೈ, ಡಾ.ಟಿಎಂಎ ಪೈ ಫೌಂಡೇಷನ್ನ ಕಾರ್ಯದರ್ಶಿ ಟಿ.ಅಶೋಕ್ ಪೈ ಉಪಸ್ಥಿತರಿದ್ದರು.
ಅಕಾಡೆಮಿಯ ಅಧ್ಯಕ್ಷ ಹಾಗೂ ಮಾಹೆಯ ಪ್ರೊ ಚಾನ್ಸಲರ್ ಡಾ.ಎಚ್. ಎಸ್.ಬಲ್ಲಾಳ್ ಸ್ವಾಗತಿಸಿದರೆ, ಮಾಹೆಯ ರಿಜಿಸ್ಟ್ರಾರ್ ಡಾ.ನಾರಾಯಣ ಸಭಾಹಿತ್ ವಂದಿಸಿದರು. ವಾಗ್ಷಾದ ಹಿರಿಯ ಪ್ರಾಧ್ಯಾಪಕ ನರೇಶ್ ಪಿ.ನಾಯಕ್ ಕಾರ್ಯಕ್ರಮ ನಿರೂಪಿಸಿದರು.