ನೇಣು ಬಿಗಿದು ದಂಪತಿ ಆತ್ಮಹತ್ಯೆ
ಮಂಡ್ಯ, ಜು.18: ತಾವು ಕೆಲಸ ಮಾಡುತ್ತಿದ್ದ ಕೋಳಿ ಫಾರಂನಲ್ಲೇ ದಂಪತಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಶೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಮೂಲತಃ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ಯಳಂದೂರು ಗ್ರಾಮದ ನಿವಾಸಿಗಳಾದ ಮಂಜು(55), ಪತ್ನಿ ಇಂದ್ರಮ್ಮ(45) ನೇಣಿಗೆ ಶರಣಾದ ದಂಪತಿ.
ಇವರ ಓರ್ವ ಪುತ್ರಿಗೆ ಮದುವೆಯಾಗಿದ್ದು, ಪುತ್ರ ಯಳಂದೂರಿನಲ್ಲೇ ವಾಸವಾಗಿದ್ದಾರೆ. ಶೆಟ್ಟಹಳ್ಳಿ ಗ್ರಾಮದ ಸಿದ್ದೇಗೌಡರಿಗೆ ಸೇರಿದ ಕೋಳಿ ಫಾರಂನಲ್ಲಿ ಕೆಲಸ ನಿರ್ವಹಿಸಿಕೊಂಡಿದ್ದ ಈ ದಂಪತಿ ಗುರುವಾರ ಮುಂಜಾನೆ ತಾವಿದ್ದ ಫಾರಂ ಹೌಸ್ನಲ್ಲೇ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ.
ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಕೆ.ಎಂ.ದೊಡ್ಡಿ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
Next Story