ಬಡವರ ಹಣ ನುಂಗಿದವರ ರಕ್ಷಿಸುವ ಪ್ರಶ್ನೆಯೇ ಇಲ್ಲ: ಸಿಎಂ ಕುಮಾರಸ್ವಾಮಿ
ಐಎಂಎ ಬಹುಕೋಟಿ ವಂಚನೆ ಪ್ರಕರಣ
ಬೆಂಗಳೂರು, ಜು. 22: ‘ಬಡವರ ದುಡ್ಡು ನುಂಗಿದವರಿಗೆ ರಾಜ್ಯದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಯಾವುದೇ ಕಾರಣಕ್ಕೂ ರಕ್ಷಣೆ ನೀಡುವುದಿಲ್ಲ’ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ವಿಧಾನಸಭೆಯಲ್ಲಿ ಸ್ಪಷ್ಟಪಡಿಸಿದ್ದಾರೆ.
ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತ ಪ್ರಸ್ತಾವದ ಮೇಲಿನ ಚರ್ಚೆ ವೇಳೆ ಬಿಜೆಪಿ ಸದಸ್ಯ ಸಿ.ಟಿ.ರವಿ ಮಾಡಿದ ಟೀಕೆಗೆ ಮಧ್ಯಪ್ರವೇಶಿಸಿದ ಕುಮಾರಸ್ವಾಮಿ, ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಈಗಾಗಲೇ ಸಿಟ್ ತನಿಖಾ ತಂಡ ಕಂಪೆನಿ ವ್ಯವಸ್ಥಾಪಕರನ್ನು ಬಂಧಿಸಿದೆ. ಜಾರಿ ನಿರ್ದೇಶನಾಲಯ(ಇಡಿ) ತನಿಖೆ ನಡೆಸಲಿ, ಸತ್ಯಾಂಶ ಹೊರಬರಬೇಕು ಎಂದ ಅವರು, ಕೇಂದ್ರ ಆದಾಯ ತೆರಿಗೆ ಇಲಾಖೆ ಸೂಚನೆ ಹಿನ್ನೆಲೆಯಲ್ಲಿ ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೆ ಐಎಂಎ ಪ್ರಕರಣ ಸಂಬಂಧ ಸಮಗ್ರ ತನಿಖೆಗೆ ಸ್ಪಷ್ಟ ನಿರ್ದೇಶನ ನೀಡಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಐಎಂಎ ಕಂಪೆನಿ ನಮ್ಮ ಆಡಳಿತಾವಧಿಯಲ್ಲಿ ಆರಂಭಗೊಂಡಿಲ್ಲ. 10-12 ವರ್ಷಗಳ ಹಿಂದೆಯೇ ಪ್ರಾರಂಭವಾಗಿದೆ. ಆ ಸಂಸ್ಥೆ 250 ಕೋಟಿ ರೂ.ತೆರಿಗೆ ಪಾವತಿಸಿದ್ದಕ್ಕೆ ಕೇಂದ್ರ ಸರಕಾರ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದೆ ಎಂದು ತಮ್ಮ ಕಚೇರಿಯಲ್ಲಿ ಪ್ರಧಾನಿ ಭಾವಚಿತ್ರ ಹಾಕಿದ್ದಾರೆಂಬುದನ್ನು ನೋಡಿದ್ದೇನೆ ಎಂದು ಹೇಳಿದರು.
ಐಎಂಎ ಪ್ರಕರಣದ ಬಗ್ಗೆ ಸಿಟ್ ಅಧಿಕಾರಿಗಳು ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತಿದ್ದು, ಅವರಿಗೆ ಮುಕ್ತ ತನಿಖೆಗೆ ನಿರ್ದೇಶನ ನೀಡಲಾಗಿದೆ. ಐಎಂಎ ವ್ಯವಸ್ಥಾಪಕರು ನನಗೆ ಯಾವುದೇ ರೀತಿಯಲ್ಲಿಯೂ ವೈಯಕ್ತಿಕ ಪರಿಚಯವಿಲ್ಲ ಎಂದು ಹೇಳಿದರು.
ನಾನು ಸಿಎಂ ಗೃಹ ಕಚೇರಿ ಕೃಷ್ಣಾದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಸಚಿವ ಕೃಷ್ಣ ಬೈರೇಗೌಡ ಪ್ರಸ್ತಾಪಿಸಿದ ಶಾಸಕರೊಬ್ಬರು ರಂಝಾನ್ ಸಂದರ್ಭದಲ್ಲಿ ಇಫ್ತಾರ್ ಕೂಟಕ್ಕೆ ಬಲವಂತವಾಗಿ ಕರೆದುಕೊಂಡು ಹೋಗಿದ್ದರು. ಅದೇ ನನ್ನ ಮೊದಲ ಭೇಟಿ ಎಂದು ಹೇಳಿದರು.
ತಪ್ಪಿತಸ್ಥರನ್ನು ನೇಣಿಗೇರಿಸಿ: ಆರಂಭಕ್ಕೆ ಮಾತನಾಡಿದ ಬಿಜೆಪಿಯ ಸಿ.ಟಿ.ರವಿ, 40 ಸಾವಿರ ಬಡ ಕುಟುಂಬಗಳ ಹಣ ವಂಚನೆ ಆರೋಪದಲ್ಲಿನ ತಪ್ಪಿತಸ್ಥರನ್ನು ನೇಣಿಗೇರಿಸಲಿ. ಅವರ ಪಾಪದ ಹಣದಲ್ಲಿ ಚುನಾವಣೆಗೆ ಕೆಲವರು ಬಳಸಿಕೊಂಡಿದ್ದಾರೆ ಎಂದು ದೂರಿದರು.
ರಾಜ್ಯದ ಆಡಳಿತ ನಡೆಸುವವರು ಗುಪ್ತಚರ ಇಲಾಖೆ ಹೊಂದಿದವರೇ ಪ್ರಕರಣದ ಆರೋಪಿತ ವ್ಯಕ್ತಿಯೊಂದಿಗೆ ಬಿರಿಯಾನಿ ತಿಂದಿದ್ದಾರೆ. ಇದು ಯಾರೆಂಬುದು ದೇಶಕ್ಕೆ ಗೊತ್ತಾಗಬೇಕು. ಆರೋಪಿಗೆ ಸರಕಾರ ನಿಮ್ಮೊಂದಿಗೆ ಇದೆ ಬನ್ನಿ ಎಂದು ಆಹ್ವಾನ ನೀಡಿದ್ದಾರೆಂದು ಅವರು ಹೇಳಿದರು.