ಪುಸ್ತಕದ ವಿನ್ಯಾಸಕ್ಕೆ ಕೃತಿಯ ವಸ್ತು ವಿಷಯವೇ ಆಧಾರ: ಪ್ರೊ.ಎಂ.ಎಚ್.ಕೃಷ್ಣಯ್ಯ
ಮುದ್ರಣದ ವಿವಿಧ ಆಯಾಮಗಳು ಒಂದು ಚರ್ಚೆ
ಬೆಂಗಳೂರು, ಜು.25: ಒಂದು ಕೃತಿಯಲ್ಲಿರುವ ವಸ್ತು-ವಿಷಯವನ್ನು ಆಧರಿಸಿ ಆ ಪುಸ್ತಕ ವಿನ್ಯಾಸ ಮಾಡಬೇಕಾಗುತ್ತದೆ. ಆಗ ಮಾತ್ರ ಕೃತಿಯೊಂದು ಓದುಗನನ್ನು ಸೆಳೆಯಲು ಸಾಧ್ಯವೆಂದು ಹಿರಿಯ ಸಾಹಿತಿ ಪ್ರೊ.ಎಂ.ಎಚ್.ಕೃಷ್ಣಯ್ಯ ತಿಳಿಸಿದ್ದಾರೆ.
ಗುರುವಾರ ಕನ್ನಡ ಪುಸ್ತಕ ಪ್ರಾಧಿಕಾರ ನಗರದ ನಯನ ಸಭಾಂಗಣದಲ್ಲಿ ಆಯೋಜಿಸಿದ್ದ ‘ಮುದ್ರಣದ ವಿವಿಧ ಆಯಾಮಗಳು ಕುರಿತು ಒಂದು ಚರ್ಚೆ’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪುಸ್ತಕದ ಮುದ್ರಣ, ವಿನ್ಯಾಸ ಎನ್ನುವುದು ಏಕರೂಪವಾಗಿ ಇರುವುದಿಲ್ಲ. ಕೃತಿಯಲ್ಲಿರುವ ವಸ್ತು, ವಿಷಯವನ್ನು ಆಧರಿಸಿದೆ ಎಂದು ತಿಳಿಸಿದರು.
ಪುಸ್ತಕಗಳ ಮುದ್ರಣ, ವಿನ್ಯಾಸ, ಅಕ್ಷರಗಳ ಜೋಡಣೆ, ಬಣ್ಣಗಳ ಬಳಕೆ ಇವೆಲ್ಲವು ಒಂದು ಕಲೆ ಇದ್ದಂತೆ. ಕಲಾ ಪ್ರಕಾರಕ್ಕೆ ಸಂಬಂಧಿಸಿದ ಕೃತಿಯ ವಿನ್ಯಾಸಕ್ಕೂ ವಿಜ್ಞಾನ, ಆರೋಗ್ಯಕ್ಕೆ ಸಂಬಂಧಿಸಿದ ಕೃತಿಯ ವಿನ್ಯಾಸಕ್ಕೂ ಬಹಳಷ್ಟು ವ್ಯತ್ಯಾಸ ಇರುತ್ತದೆ. ಇದೆಲ್ಲವನ್ನು ಸೂಕ್ಷ್ಮವಾಗಿ ಗಮನಿಸಿ ಪುಸ್ತಕ ವಿನ್ಯಾಸ ಮಾಡಿದರೆ ಓದುಗನನ್ನು ಸೆಳೆಯಬಹುದೆಂದು ಅವರು ಹೇಳಿದರು.
ದೇಶದಲ್ಲಿಯೇ ರಾಜ್ಯದಲ್ಲಿ ಮುದ್ರಣಗೊಳ್ಳುತ್ತಿರುವ ಪುಸ್ತಕಗಳು ಹೆಚ್ಚು ಸುಂದರವಾಗಿವೆ ಎಂದು ಇತರೆ ರಾಜ್ಯದ ಸಾಹಿತಿಗಳು ಅಭಿಪ್ರಾಯಿಸಿದ್ದಾರೆ. ನವ ಕರ್ನಾಟಕ ಪ್ರಕಾಶನವು ಮುದ್ರಿಸಿದ ಕರ್ನಾಟಕ ಕಲಾ ದರ್ಶನ ಕೃತಿಗೆ ಅತ್ಯುತ್ತಮ ವಿನ್ಯಾಸ ಪ್ರಶಸ್ತಿ ಬಂದಿರುವುದನ್ನು ನೆನೆಪು ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.
ಪುಸ್ತಕವನ್ನು ಮುದ್ರಿಸುವ ಸಂಬಂಧದಲ್ಲಿ ಕರಡು ಪರಿಷ್ಕರಣೆ ಮಾಡಬೇಕಾದರೆ ಬಹಳ ಎಚ್ಚರಿಕೆ ವಹಿಸಬೇಕು. ಲೇಖಕರ ಬರವಣಿಗೆ ಶೈಲಿ, ವಾಕ್ಯಗಳನ್ನು ಬದಲಿಸದಂತೆ ಜಾಗ್ರತೆ ಇರಬೇಕು. ಲೇಖಕರು ಉದ್ದೇಶಪೂರ್ವಕವಾಗಿಯೆ ಕ್ರಿಯಾಪದವನ್ನು ವಾಕ್ಯದ ಮೊದಲ ಪದವಾಗಿ ಬಳಸಿರುತ್ತಾರೆ. ಕರಡು ಪರಿಷ್ಕರಣೆ ಮಾಡುವವರು ಇದೆಲ್ಲವನ್ನು ಅರ್ಥ ಮಾಡಿಕೊಳ್ಳುವಂತಹ ಸಾಮರ್ಥ್ಯ ಹೊಂದಿರಬೇಕು ಎಂದು ಅವರು ಹೇಳಿದರು.
ಕರ್ನಾಟಕ ಬರಹಗಾರರ ಮತ್ತು ಪ್ರಕಾಶಕರ ಸಂಸ್ಥೆಯ ಅಧ್ಯಕ್ಷ ನಿಡಸಾಲೆ ಪುಟ್ಟಸ್ವಾಮಯ್ಯ ಮಾತನಾಡಿ, ರಾಜ್ಯದಲ್ಲಿ ಲೇಖಕರಿದ್ದಾರೆ, ಮುದ್ರಕರೂ ಇದ್ದಾರೆ. ಆದರೆ, ಆ ಪುಸ್ತಕಗಳನ್ನು ಓದುಗರಿಗೆ ತಲುಪಿಸುವಂತಹ ಮಾರಾಟ ಜಾಲದ ಕೊರತೆ ಇದೆ. ಈ ಬಗ್ಗೆ ಹೆಚ್ಚಿನ ಚಿಂತನೆಯ ಅಗತ್ಯವಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಪುಸ್ತಕದ ವಿನ್ಯಾಸ ಕುರಿತು ಕೆ.ಎಲ್.ರಾಜಶೇಖರ್, ಪದ ದೋಷಗಳ ಕುರಿತು ಅಶ್ವತ್ಥ್ನಾರಾಯಣ, ಕರಡು ಪರಿಷ್ಕರಣೆ ಕುರಿತು ಮಾತನಾಡಿದರು. ಈ ವೇಳೆ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ರಾಜ್ಯದಲ್ಲಿ ಪ್ರಕಟಗೊಳ್ಳುವ ಪುಸ್ತಕಗಳು ಮಾರಾಟ ಮಾಡುವುದು ದೊಡ್ಡ ಸವಾಲಾಗಿದೆ. ಇಂತಹ ಸಂದರ್ಭದಲ್ಲಿ ಬೆಂಗಳೂರು ಕಸವನ್ನು ಸರಿಯಾಗಿ ನಿರ್ವಹಿಸಲು ಸಾಮರ್ಥ್ಯವಿಲ್ಲದ ಬಿಬಿಎಂಪಿ ನಗರ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಳ್ಳಲು ಮುಂದಾಗಿದೆ. ಆ ಮೂಲಕ ಇಡೀ ಗ್ರಂಥಾಲಯ ಇಲಾಖೆಯನ್ನೆ ನಗಣ್ಯ ಮಾಡಲು ಹೊರಟಿದೆ. ಇದರ ವಿರುದ್ಧ ಸಾಹಿತಿಗಳು, ಪ್ರಕಾಶಕರು ಸರಕಾರಕ್ಕೆ ಮನವರಿಕೆ ಮಾಡಿಕೊಟ್ಟು ಗ್ರಂಥಾಲಯಗಳನ್ನು ಉಳಿಸಿಕೊಳ್ಳಬೇಕಿದೆ.
-ನಿಡಸಾಲೆ ಪುಟ್ಟಸ್ವಾಮಯ್ಯ, ಅಧ್ಯಕ್ಷ, ಕರ್ನಾಟಕ ಬರಹಗಾರರ ಮತ್ತು ಪ್ರಕಾಶಕರು