ಸಮಾಜದಲ್ಲಿ ಇನ್ನೂ ಗುಲಾಮಗಿರಿ ಇದೆ: ಸಿದ್ದರಾಮಯ್ಯ
ಬೆಂಗಳೂರು, ಜು. 27: ‘ಸಮಾಜದಲ್ಲಿ ಇನ್ನೂ ಗುಲಾಮಗಿರಿ ಮನೆ ಮಾಡಿಕೊಂಡಿದೆ. ಈಗಲೂ ಅದರಿಂದ ಹೊರಗಡೆ ಬರಲು ಸಾಧ್ಯವಾಗುತ್ತಿಲ್ಲ. ನಮ್ಮ ನಡವಳಿಕೆಗಳ ಮೂಲಕ ಆಗಾಗ ಗುಲಾಮಗಿರಿಯನ್ನು ತೋರಿಸಿಕೊಳ್ಳುತ್ತಾ ಇರುತ್ತೇವೆ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
‘ಉದಾಹರಣೆಗೆ, ಮೇಲ್ವರ್ಗದವರನ್ನು ಕಂಡರೆ ಏನ್ ಸ್ವಾಮಿ ಅಂತ ಮಾತನಾಡಿಸ್ತಾರೆ, ಕೆಳವರ್ಗದವರನ್ನು ಕಂಡರೆ ಏನ್ ಲಾ ಅಂತ ಮಾತನಾಡಿಸ್ತಾರೆ. ಇದೇ ಗುಲಾಮಗಿರಿ’ ಎಂದು ಸಿದ್ದರಾಮಯ್ಯ ತಮ್ಮ ಟ್ವಿಟ್ಟರ್ ಖಾತೆ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.
‘ಸಂವಿಧಾನದ ಆಶಯಗಳ ವಿರುದ್ಧವಾಗಿ ಕೆಲಸ ಮಾಡುವವರು ಇಡೀ ಸಮಾಜದ ವಿರೋಧಿಗಳು. ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ನಂತರ ನಾನು ಪ್ರಮಾಣ ವಚನ ಸ್ವೀಕರಿಸಿದ್ದೆ. ನಾನೇನು ತೋರಿಕೆಗೆ ಮಾಲಾರ್ಪಣೆ ಮಾಡಿದವನಲ್ಲ. ಅದಕ್ಕೂ ಕೆಲವರು ಟೀಕೆಗಳನ್ನು ಮಾಡಿದ್ರು, ಇಂಥ ಟೀಕೆಗಳಿಂದ ಸಮಾಜದ ಸ್ವಾಸ್ಥ್ಯ ಕೆಡುತ್ತದೆ’ ಎಂದು ಮತ್ತೊಂದು ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಬಸವ ಧರ್ಮ ಸ್ವತಂತ್ರ ಧರ್ಮ ಎನ್ನುವುದರಲ್ಲಿ ಯಾವುದೇ ಸಂಶಯ ಇಲ್ಲ. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಮುಖ್ಯಮಂತ್ರಿ ಆಗಿದ್ದಾಗ ನಾನು ಈ ಅಭಿಪ್ರಾಯ ವ್ಯಕ್ತಪಡಿಸಿರಲಿಲ್ಲ, ಕಾರಣ ಆಗ ಎಲ್ಲರ ಅಭಿಪ್ರಾಯವನ್ನು ನಾನು ಪರಿಗಣಿಸಬೇಕಿತ್ತು.
-ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ