ರಾಜ್ಯದಲ್ಲಿ ಮರೆಯಾಗುತ್ತಿರುವ ಜನೌಷಧಿ ಕೇಂದ್ರಗಳು !
ಬೆಂಗಳೂರು, ಜು.29: ಸಿಲಿಕಾನ್ ಸಿಟಿ ಸೇರಿದಂತೆ ರಾಜ್ಯದ ಹಲವು ಕಡೆಗಳಲ್ಲಿ ತೆರೆದಿದ್ದ ಜನೌಷಧಿ ಕೇಂದ್ರಗಳು ಬೀಗ ಹಾಕಿದ್ದು, ಬಡ ರೋಗಿಗಳಿಗೆ ಸಂಜೀವಿನಿಯಾಗಬೇಕಿದ್ದ ಕೇಂದ್ರಗಳಿಂದು ಮೂಲೆಗುಂಪಾಗುತ್ತಿವೆ.
ರಾಜ್ಯದಲ್ಲಿ 170 ಕ್ಕೂ ಅಧಿಕ ಜನೌಷಧ ಕೇಂದ್ರಗಳನ್ನು ತೆರೆಯಲಾಗಿದ್ದು, ಈ ಮೂಲಕ ಕಡಿಮೆ ಬೆಲೆಯಲ್ಲಿ ಬಡವರಿಗೆ ಔಷಧಿಗಳನ್ನು ಒದಗಿಸಬೇಕು ಎಂಬುದು ಇದರ ಉದ್ದೇಶವಾಗಿದೆ. ಆದರೆ, ಇದೀಗ ಕೇಂದ್ರಗಳಿಗೆ ಬೀಗ ಜಡಿದಿದ್ದರಿಂದ ಜನರಿಗೆ ಆರೋಗ್ಯ ಕಾಪಾಡಬಲ್ಲವೇ ಎಂಬ ಅನುಮಾನ ಕಾಡುತ್ತಿವೆ.
ಸಮಾಜದಲ್ಲಿ ಎಲ್ಲರಿಗೂ ಕಡಿಮೆ ದರದಲ್ಲಿ ಆರೋಗ್ಯ ಸೇವೆ ಸಿಗಬೇಕು ಎಂಬ ಉದ್ದೇಶದಿಂದ ಸ್ಥಾಪಿಸಲ್ಪಟ್ಟ ಈ ಕೇಂದ್ರಗಳು ಧೂಳು ಹಿಡಿದಿರುವುದು ಆಡಳಿತ ವರ್ಗದ ನಿರ್ಲಕ್ಷದಿಂದ ಎನ್ನಲಾಗಿದೆ. ಸರಕಾರವೇ ಜನೌಷಧಿ ಮಳಿಗೆ ತೆರೆಯಲು ಸ್ಥಳ, ಔಷಧ ಖರೀದಿಗೆ ಸಹಾಯ, ಕಟ್ಟಡ ಸೇರಿದಂತೆ ಎಲ್ಲ ರೀತಿಯ ಸೌಲಭ್ಯಗಳು ನೀಡಿದ್ದರೂ ಇವುಗಳನ್ನು ನಿರ್ವಹಿಸುವಲ್ಲಿ ವಿಫಲವಾಗಿರುವುದು ದುರಂತ.
ಜನೌಷಧಿ ಕೇಂದ್ರಗಳು ಮುಚ್ಚಲು ಕಾರಣ: ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆರೊಗ್ಯ ಇಲಾಖೆ, ಎಂಎಸ್ಐಎಲ್(ಜನೌಷಧ ಕೇಂದ್ರದ ಬಹುಪಾಲು ಗುತ್ತಿಗೆ ಹೊಂದಿರುವ ಸಂಸ್ಥೆ) ಸೇರಿ ಹಲವು ಆಸಕ್ತ ಸಂಸ್ಥೆ, ಅರ್ಹ ಫಾರ್ಮಾಸಿಸ್ಟ್ಗಳಿಂದ ನಿರ್ವಹಣೆಗೊಳಪಟ್ಟಿರುವ ಜನೌಷಧ ಕೇಂದ್ರಗಳು ಪ್ರಾರಂಭದಲ್ಲಿ ಸಾರ್ವಜನಿಕರಿಗೆ ಉತ್ತಮ ರೀತಿಯಲ್ಲಿ ಸೇವೆ ನೀಡಿದವು.
ದಿನದ 24 ಗಂಟೆಯೂ ತೆರೆಯಬೇಕೆಂಬ ನಿಯಮ ದಿನ ಕಳೆದಂತೆ ದಿನದಲ್ಲಿ ಒಂದು ತಾಸು, ವಾರಕ್ಕೊಮ್ಮೆ ನಂತರ ಸಂಪೂರ್ಣ ಬಂದ್ ಆಗುವ ಹಂತ ತಲುಪಿದೆ. ಜನೌಷಧ ಕೇಂದ್ರಗಳಿಗೆ ಸರಿಯಾದ ಸಮಯಕ್ಕೆ ಔಷಧಗಳು ಪೂರೈಕೆಯಾಗುತ್ತಿಲ್ಲ. ಹೃದಯ ಸಂಬಂಧಿ ಕಾಯಿಲೆಗಳು, ಮಧುಮೇಹಕ್ಕೆ ಬೇಕಾದ ಎಲ್ಲ ಬಗೆಯ ಔಷಧಗಳ ಕೊರತೆ ಅಧಿಕವಾಗಿದೆ. ರಾಜ್ಯ ಸರಕಾರದ ಆದೇಶವಿದ್ದರೂ ಕೆಲ ವೈದ್ಯರು ಜನರಿಕ್ ಔಷಧಗಳನ್ನೇ ರೋಗಿಗಳಿಗೆ ಬರೆದು ಕೊಡುವುದಿಲ್ಲ ಎಂಬ ಆಪಾದನೆಗಳು ಕೇಳಿಬಂದಿವೆ.
ವೈದ್ಯಾಧಿಕಾರಿಗಳ ಜವಾಬ್ದಾರಿ: ಜನೌಷಧ ಕೇಂದ್ರದ ಪ್ರಸ್ತುತ ಸ್ಥಿತಿಯನ್ನು ತಡವಾಗಿಯಾದರೂ ಅರಿತ ಆರೋಗ್ಯ ಇಲಾಖೆ ಜು.16 ರಂದು ಸುತ್ತೊಲೆ ಹೊರಡಿಸಿ ಆಯಾ ಆಸ್ಪತ್ರೆಗಳ ಆವರಣದಲ್ಲಿ ಪ್ರಾರಂಭಿಸಿರುವ ಔಷಧ ಕೇಂದ್ರಗಳ ಸಂಪೂರ್ಣ ಮೇಲ್ವಿಚಾರಣೆ ಆಡಳಿತ ವೈದ್ಯಾಧಿಕಾರಿಗಳದ್ದಾಗಿರುತ್ತದೆ ಎಂದು ಆದೇಶಿಸಿದೆ.
ಔಷಧ ಕೇಂದ್ರಗಳಲ್ಲಿ ಜನೌಷಧಗಳಲ್ಲದೆ ಬೇರಾವುದೇ ಬ್ರಾಂಡೆಡ್ ಔಷಧಗಳನ್ನು ಮಾರಾಟ ಮಾಡುವಂತಿಲ್ಲ. ಈ ಬಗ್ಗೆ ವಾರಕ್ಕೊಮ್ಮೆ ತಪಾಸಣೆ ನಡೆಸಿ ಆರೊಗ್ಯ ಇಲಾಖೆ ಆಯುಕ್ತರ ಕಚೇರಿಗೆ ವರದಿ ನೀಡಬೇಕು. ಜನೌಷಧಿಗಳ ದಾಸ್ತಾನು ಲಭ್ಯತೆ, ದರಗಳ ಪರಿಶೀಲನೆ ನಡೆಸುವುದು, ಯಾವುದೇ ಲೋಪದೋಷಗಳು ಕಂಡುಬಂದಲ್ಲಿ ಕ್ರಮ ಜರುಗಿಸಿ ವರದಿ ನೀಡಬೇಕೆಂದು ಹೇಳಲಾಗಿದೆ.