ಧಾರ್ಮಿಕ ವಿಧಿವಿಧಾನಗಳೊಂದಿಗೆ ಕೆಫೆ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ ಅಂತ್ಯಕ್ರಿಯೆ
ಚಿಕ್ಕಮಗಳೂರು, ಜು.31: ಉದ್ಯಮಿ ವಿ.ಜಿ.ಸಿದ್ದಾರ್ಥ ಅವರ ಅಂತ್ಯಕ್ರಿಯೆ ಅವರ ಹುಟ್ಟೂರು ಮೂಡಿಗೆರೆ ತಾಲೂಕಿನ ಚಟ್ನಳ್ಳಿ ಗ್ರಾಮದಲ್ಲಿ ಬುಧವಾರ ಒಕ್ಕಲಿಗ ಸಮುದಾಯದ ವಿಧಿವಿಧಾನಗಳೊಂದಿಗೆ ನೆರವೇರಿತು.
ಬುಧವಾರ ಮಧ್ಯಾಹ್ನ ಚಿಕ್ಕಮಗಳೂರು ನಗರಕ್ಕಾಗಮಿಸಿದ್ದ ಸಿದ್ದಾರ್ಥ ಅವರ ಪಾರ್ಥಿವ ಶರೀರವನ್ನು ಕಾಫಿ ಡೇ ಕಂಪೆನಿ ಆವರಣದಲ್ಲಿ ಸಾರ್ವಜನಿಕರ ಅಂತಿಮ ದರ್ಶನದ ಬಳಿಕ ಸಂಜೆ 5.30ಕ್ಕೆ ಸ್ವಗ್ರಾಮ ಚಟ್ನಳ್ಳಿಯಲ್ಲಿರುವ ಚೇತನಹಳ್ಳಿ ಎಸ್ಟೇಟ್ಗೆ ಕೊಂಡೊಯ್ಯಲಾಯಿತು. ಸಂಜೆ 6ರ ಸಮಯದಲ್ಲಿ ಸಿದ್ದಾರ್ಥ ಅವರ ತಂದೆಯ ಮನೆಯ ಸಮೀಪದಲ್ಲೇ ಸಿದ್ದಾರ್ಥ ಮೃತ ದೇಹದ ಅಂತ್ಯ ಸಂಸ್ಕಾರವನ್ನು ಕುಟುಂಬಸ್ಥರು ಹಾಗೂ ಪ್ರಮುಖ ರಾಜಕಾರಣಿಗಳ ಸಮ್ಮುಖದಲ್ಲಿ ನಡೆಸಲಾಯಿತು.
ಸಿದ್ದಾರ್ಥ ಅವರ ಹಿರಿಯ ಮಗ ಅಮಥ್ರ್ಯ ಅವರು ಸಿದ್ದಾರ್ಥ ಅವರು ಒಕ್ಕಲಿಗ ಸಮುದಾಯದಂತೆ ಅಂತಿಮ ಧಾರ್ಮಿಕ ವಿಧಿವಿಧಾನಗಳನ್ನು ಪೂರೈಸಿ ಬಳಿಕ ಚಿತೆಗೆ ಅಗ್ನಿ ಸ್ಪರ್ಶ ಮಾಡಿದರು. ಈ ವೇಳೆ ಸಿದ್ದಾರ್ಥ ಅವರ ಪತ್ನಿ ಮಾಳವಿಕ, ತಾಯಿ ವಾಸಂತಿ, ಇಬ್ಬರು ಪುತ್ರರು ಹಾಗೂ ಕಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.
ಅಂತ್ಯ ಸಂಸ್ಕಾರದ ವೇಳೆ ಚಟ್ನಳ್ಳಿ ಗ್ರಾಮ ಸೇರಿದಂತೆ ಮೂಡಿಗೆರೆ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸಾವಿರಾರು ಮಂದಿ ಸ್ಥಳದಲ್ಲಿ ಜಮಾಯಿಸಿದ್ದರು. ಮಾಜಿ ಸಚಿವರಾದ ಡಿ.ಕೆ.ಶಿವಕುಮಾರ್, ಟಿ.ಬಿ.ಜಯಚಂದ್ರ, ಮೋಟಮ್ಮ, ಎಚ್.ಕೆ.ಪಾಟೀಲ್, ಕಿಕೆಟಿಗ ಅನಿಲ್ ಕುಂಬ್ಳೆ, ಎಸ್.ಎಂ.ಕೃಷ್ಣ, ರಮಾನಾಥ್ ರೈ, ಸಿ.ಟಿ.ರವಿ, ನಿವೃತ್ತ ಐಪಿಎಸ್ ಅಧಿಕಾರಿ ಅಣ್ಣಾಮಲೈ ಸೇರಿದಂತೆ ಜಿಲ್ಲೆಯ ನೂರಾರು ಜನಪ್ರತಿನಿಧಿಗಳು, ಗಣ್ಯರು, ಶಾಸಕರು ಅಂತ್ಯಕ್ರಿಯೆಗೆ ಸಾಕ್ಷಿಯಾದರು.
ಸಿದ್ದಾರ್ಥ ಅವರ ತಂದೆ ಹಾಗೂ ಸ್ವಾತಂತ್ರ್ಯ ಹೋರಾಟಗಾರ ಗಂಗಯ್ಯ ಹೆಗ್ಡೆ ಅವರು ಸಿದ್ದಾರ್ಥ ಅವರ ಅಂತ್ಯಕ್ರಿಯೆ ವೇಳೆ ಉಪಸ್ಥಿತರಿರಲಿಲ್ಲ. ಅನಾರೋಗ್ಯಕ್ಕೀಡಾಗಿದ್ದ ಅವರನ್ನು ಕುಟುಂಬಸ್ಥರು ಈ ಹಿಂದೆಯೇ ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ಅವರಿನ್ನೂ ಚೇತಸಿಕೊಳ್ಳದ ಹಿನ್ನೆಲೆಯಲ್ಲಿ ಗಂಗಯ್ಯ ಹೆಗ್ಡೆ ಅಂತ್ಯಕ್ರಿಯೆಯಲ್ಲಿ ಭಾಗಿಯಾಗಲು ಸಾಧ್ಯವಾಗಿರಲಿಲ್ಲ.