ಶಿವಮೊಗ್ಗದ ಪ್ರಗತಿಪರ ಹೋರಾಟಗಾರ ಈಸೂರು ಲೋಕೇಶ್ ನಿಧನ
ಶಿವಮೊಗ್ಗ, ಆ. 1: ಪ್ರಗತಿಪರ ಹೋರಾಟಗಾರ, ಎಡಪಂಥೀಯ ಚಿಂತಕ, ವಕೀಲ ಈಸೂರು ಲೋಕೇಶ್ (56) ರವರು ಗುರುವಾರ ಜಿಲ್ಲೆಯ ಸೊರಬ ತಾಲೂಕಿನ ಆನವಟ್ಟಿಯಲ್ಲಿ ವಿಧಿವಶರಾಗಿದ್ದಾರೆ. ಮೃತರು ಪತ್ನಿ, ಇಬ್ಬರು ಹೆಣ್ಣು ಮಕ್ಕಳು ಸೇರಿದಂತೆ ಬಂಧು-ಬಳಗವನ್ನು ಅಗಲಿದ್ದಾರೆ.
ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಗುರುವಾರ ಬೆಳಿಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾಗಿ ಮೃತಪಟ್ಟಿದ್ದಾರೆ ಎಂದು ಆಪ್ತ ಮೂಲಗಳು ಮಾಹಿತಿ ನೀಡಿವೆ. ಶುಕ್ರವಾರ ಬೆಳಿಗ್ಗೆ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಹೋರಾಟ: ಈಸೂರು ಲೋಕೇಶ್ರವರು ಹಲವು ಪ್ರಗತಿಪರ ಸಂಘಟನೆಗಳಲ್ಲಿ ಗುರುತಿಸಿಕೊಂಡಿದ್ದರು. ಜೊತೆಗೆ ಭಾರತ ಸಂವಿಧಾನ ರಕ್ಷಣಾ ವೇದಿಕೆ ಎಂಬ ಸಂಘಟನೆ ಕೂಡ ಸ್ಥಾಪಿಸಿದ್ದರು. ಇದರಡಿ ದಲಿತರು, ಬಡವರ ಪರ ಹಲವು ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರು. ಪ್ರಗತಿಪರ ಹೋರಾಟಗಳಲ್ಲಿ ಸದಾ ಮುಂಚೂಣಿಯಲ್ಲಿರುತ್ತಿದ್ದರು. ಹಲವು ಅನ್ಯಾಯ, ಅಕ್ರಮಗಳನ್ನು ಬಯಲಿಗೆಳೆದಿದ್ದರು. ವಿವಿಧ ಇಲಾಖೆಗಳಿಂದ ವಂಚನೆಗೊಳಗಾದವರ ಪರವಾಗಿ ನಿಂತುಕೊಂಡು ಹೋರಾಟ ನಡೆಸುತ್ತಿದ್ದರು.
ಇತ್ತೀಚಿನ ವರ್ಷಗಳಲ್ಲಿ ಅವರು ಕೃಷಿ, ವಕೀಲ ವೃತ್ತಿಯತ್ತ ಹೆಚ್ಚಿನ ಆಸಕ್ತಿವಹಿಸಿದ್ದರು.
ಈಸೂರು ಲೋಕೇಶ್ರವರ ಅಕಾಲಿಕ ನಿಧನಕ್ಕೆ ಪ್ರಗತಿಪರ ಹೋರಾಟಗಾರರು ಸೇರಿದಂತೆ ವಿವಿಧ ಸಂಘಸಂಸ್ಥೆಗಳು ತೀವ್ರ ಶೋಕ ವ್ಯಕ್ತಪಡಿಸಿವೆ.