ನಾವು ಅತೃಪ್ತರಲ್ಲ. ಪದವಿ ,ದುಡ್ಡಿಗಾಗಿ ನಮ್ಮನ್ನು ಮಾರಿಕೊಂಡಿಲ್ಲ : ಎಚ್ .ವಿಶ್ವನಾಥ್
ಮೈಸೂರು, ಆ.4: ಸಮ್ಮಿಶ್ರ ಸರಕಾರ ಪತನಕ್ಕೆ ನಾವು ಕಾರಣರಲ್ಲ. ಇದಕ್ಕೆ ಮೈತ್ರಿ ಪಕ್ಷಗಳ ನಾಯಕರೇ ಕಾರಣ. ನಾವು ಅತೃಪ್ತರಲ್ಲ. ಪದವಿ ,ದುಡ್ಡಿಗಾಗಿ ನಮ್ಮನ್ನು ಮಾರಿಕೊಂಡಿಲ್ಲ ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ ಹೇಳಿದ್ದಾರೆ.
ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಮತ ನೀಡಿ ಗೆಲ್ಲಿಸಿದ ಮತದಾರರಲ್ಲಿ ನಾನು ಕ್ಷಮೆಯಾಚಿಸುತ್ತೇನೆ.
ಕಾಂಗ್ರೆಸ್, ಜೆಡಿಎಸ್ ಪಕ್ಷಗಳು ಶಾಸಕರಿಗೆ ಗೌರವ ಕೊಡಲಿಲ್ಲ, ಹೀಗಾಗಿ ಶಾಸಕರು ರಾಜೀನಾಮೆ ನೀಡಬೇಕಾಯಿತು. ದೇವೇಗೌಡರಲ್ಲೂ ಕ್ಷಮೆ ಯಾಚಿಸುತ್ತೇನೆ. ದೇವೇಗೌಡರು ನನಗೆ ಕರೆದು ಅವಕಾಶ ಕೊಟ್ಟರು. ನನ್ನನ್ನು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಮಾಡಿದರು. ಆದರೆ, ಪರಿಸ್ಥಿತಿ ಹಾಗೂ ಸನ್ನಿವೇಶದ ಹಿನ್ನಲೆಯಲ್ಲಿ ಶಾಸಕ ಸ್ಥಾನ ಹಾಗೂ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ.
ನನಗೆ ಜೆಡಿಎಸ್ ಅಧ್ಯಕ್ಷನಾಗಿದ್ದರೂ, ಬ್ಲಾಕ್ ಅಧ್ಯಕ್ಷರುಗಳನ್ನು ನೇಮಕ ಮಾಡಲು ಸಾಧ್ಯವಾಗಲಿಲ್ಲ. ಇದರಿಂದ ಅವಮಾನವಾಯಿತು. ಮನನೊಂದು ರಾಜೀನಾಮೆ ನೀಡಿದ್ದೇನೆ ಎಂದು ಹೇಳಿದರು.
ಮಾಜಿ ಸಿಎಂ ಕುಮಾರಸ್ವಾಮಿ ನಮ್ಮ ಸ್ನೇಹಿತರು. ಕುಮಾರಸ್ವಾಮಿ ಸಿಎಂ ಥರ ಕಾಣಿಸುತ್ತಿಲ್ಲ. ಸಿದ್ದರಾಮಯ್ಯ ನಮ್ಮ ಮುಖ್ಯ ಮಂತ್ರಿ ಎಂದು ಅವರ ಶಿಷ್ಯರು ಹೇಳಿದ್ದರು. ಇದು ಸರಕಾರದ ಪತನಕ್ಕೆ ಕಾರಣವಾಗಿತ್ತು. .ರಾಜ್ಯದ ಇತಿಹಾಸದಲ್ಲೇ ಶಾಸಕರು ಈ ರೀತಿ ರಾಜೀನಾಮೆ ನೀಡಿದ್ದು ಇದೇ ಮೊದಲು .
ಸದನದಲ್ಲಿ ನಾವಿಲ್ಲದಿದ್ದರೂ ನಮ್ಮ ಬಗ್ಗೆ ಮಾತನಾಡಲು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವಕಾಶ ನೀಡಿ ಸದನದ ಸಂಪ್ರದಾಯವನ್ನು ಉಲ್ಲಂಘಿಸಿದ್ದಾರೆ. ಸದನ ಕೇವಲ ನಿಂದನೆಗೆ ಸೀಮಿತವಾಯಿತು ಎಂದು ವಾಗ್ದಾಳಿ ನಡೆಸಿದರು.
ರಾಹುಲ್ ಪ್ರಚಾರಕ್ಕೆ ಬಂದಾಗ ಅವರ ಭೇಟಿಗೆ ಯತ್ನಿಸಿದೆ. ಆದರೆ ಅವಕಾಶ ನೀಡಲಿಲ್ಲ. ಸಿದ್ದರಾಮಯ್ಯರಿಂದ ಕಾಂಗ್ರೆಸ್ ನಲ್ಲೂ ನನಗೆ ತೊಂದರೆಯಾಗಿತ್ತು. ಇಲ್ಲೂ ತೊಂದರೆಯಾಯಿತು ಎಂದರು.