ಮೈಸೂರಿನ ಎಲ್ಲಾ ತಾಲೂಕುಗಳಲ್ಲಿ ಹೈ ಅಲರ್ಟ್: ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ
ಮೈಸೂರು,ಆ.8: ಕೇರಳದ ವಯನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಗಡಿಭಾಗದಲ್ಲಿರುವ ಕಬಿನಿ ಜಲಾಶಯ ಭರ್ತಿ ಹಂತಕ್ಕೆ ತಲುಪಿದೆ. ಇಂದು ಬೆಳಗ್ಗೆ ಕಬಿನಿಯಲ್ಲಿ 80 ಸಾವಿರ ಕ್ಯೂಸೆಕ್ ಹೊರಹರಿವು ಇದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ತಿಳಿಸಿದರು.
ನಗರದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿ, ಸುದೀರ್ಘವಾಗಿ ಭಾರೀ ಮಳೆ ಆಗಿರುವುದರಿಂದ ಕಬಿನಿ ಜಲಾಶಯದ ಒಳಹರಿವು ಹೆಚ್ಚಿದೆ. ಇಂದು ಬೆಳಗ್ಗೆ ಹತ್ತು ಗಂಟೆಯ ಸುಮಾರಿಗೆ 60 ಸಾವಿರ ಕ್ಯೂಸೆಕ್ ಹೊರಹರಿವಿದ್ದು, ಈಗ 20 ನಿಮಿಷಗಳ ನಂತರ 80 ಸಾವಿರ ಕ್ಯೂಸೆಕ್ ಹೊರಹರಿವಿದೆ ಎಂದು ತಿಳಿದು ಬಂದಿದೆ ಎಂದರು.
ನಂಜನಗೂಡು ದಾಟಿ ಹೋಗಲು ನಾಲ್ಕು ಗಂಟೆ ಬೇಕು. ಇನ್ನೂ ಸಮಯವಿದ್ದು ಜನರ ಸುರಕ್ಷತೆಗೆ ಸಹಕರಿಸಿ ಎಂದರು. ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಲೋಕೋಪಯೋಗಿ ಇಲಾಖೆ, ಅಗ್ನಿಶಾಮಕ ದಳ ತೋಟಗಾರಿಕಾ ಇಲಾಖೆ ಎಲ್ಲವೂ ಸಹಕರಿಸಲಿದ್ದು, ಎಲ್ಲರಿಗೂ ಸೂಚನೆ ನೀಡಿದ್ದೇನೆ ಎಂದರು.
ಕಬಿನಿಯಲ್ಲಿ ಸದ್ಯಕ್ಕೆ 55 ಸಾವಿರ ಕ್ಯೂಸೆಕ್ ನೀರು ಒಳಹರಿವಿದೆ. ಇನ್ನೂ ಹೆಚ್ಚಾಗಲಿದೆ. ಹಾರಂಗಿಯಲ್ಲಿ 45 ಸಾವಿರ ಕ್ಯೂಸೆಕ್ ಒಳಹರಿವಿದೆ. ಇದು ಪಿರಿಯಾಪಟ್ಟಣ, ಕೆ.ಆರ್.ನಗರಕ್ಕೆ ಎಫೆಕ್ಟ್ ಆಗಲಿದೆ. ಎರಡೂ ಕಡೆಯು ಸುರಕ್ಷಿತ ಸ್ಥಳಕ್ಕೆ ಜನರನ್ನು ಸ್ಥಳಾಂತರ ಮಾಡಲಾಗುತ್ತಿದೆ. ಪರಿಹಾರ ವ್ಯವಸ್ಥೆ ಮಾಡಲಿದ್ದೇವೆ. ಗಂಜಿಕೇಂದ್ರ ಕೂಡ ಪ್ರಾಂಭಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.
ವರಮಹಾಲಕ್ಷ್ಮಿ ಹಬ್ಬವಿದ್ದು, ಎರಡು ದಿನ ರಜೆ ಇರುವ ಕಾರಣ ಪ್ರವಾಸಿಗರು ಬರಬಹುದು. ಯಾರೂ ಕೂಡ ನೀರಿಗಿಳಿಯದಂತೆ ಎಚ್ಚರಿಕೆ ನೀಡಿ. ನಂಜನಗೂಡು ದೇವಸ್ಥಾನದ ಸುತ್ತಮುತ್ತ ನೀರು ನುಗ್ಗುವ ಸಾಧ್ಯತೆಯಿದೆ. ಅಲ್ಲಿನ ಪರಿಸ್ಥಿತಿ ನಿಭಾಯಿಸಲು ಸೂಚನೆ ನೀಡಿದ್ದೇನೆ. ನಂಜನಗೂಡು ಪಟ್ಟಣ, ಹಳೇ ಬೀದಿಯಲ್ಲಿಯೂ ಕ್ರಮಕ್ಕೆ ಸೂಚಿಸಿದ್ದೇನೆ. ಸುತ್ತೂರು ಸೇತುವೆ ಕೂಡ ಮುಳುಗಡೆಯಾಗುವ ಸಾಧ್ಯತೆಯಿದೆ. ತುಂಬುಸೋಗೆ ಸೇರಿದಂತೆ, ಹಲವು ಕಡೆ ನೀರು ತುಂಬಬಹುದು, ಜಾಸ್ತಿ ನಿಗಾ ವಹಿಸಿ, ಜನರಿಗೆ ಪ್ರವಾಹದ ಮುನ್ಸೂಚನೆ ಇರುವ ಕಡೆ ಹೋಗದಂತೆ ರಿಕ್ಷಾ, ಜೀಪ್ ನಲ್ಲಿ ಮೈಕ್ ಅಳವಡಿಸಿ ಪಿಡಿಒ ಮತ್ತು ಗ್ರಾಮಲೆಕ್ಕಿಗರಿಗೆ ಪ್ರಚಾರ ಆರಂಭಿಸಲು ಸೂಚನೆ ನೀಡಿದ್ದೇನೆ. ಕನ್ನಡ ಮತ್ತು ಇಂಗ್ಲಿಷ್ ನಲ್ಲಿ ಬ್ಯಾನರ್ ಅಳವಡಿಸಲು ತಿಳಿಸಿದ್ದೇನೆ ಎಂದು ಹೇಳಿದರು.
ಸುತ್ತ ಮುತ್ತಲಿನ ಜನರಿಗೆ ಸ್ಥಳದಿಂದ ಸುರಕ್ಷಿತ ಸ್ಥಳಗಳ ಕಡೆ ಹೊರಡುವಂತೆ ಸೂಚನೆ ನೀಡಲಾಗಿದೆ. ಎಲ್ಲಾ ತಾಲೂಕುಗಳಿಗೆ ಹೈ ಅಲರ್ಟ್ ಘೋಷಿಸಿದ್ದೇನೆ. ಮಳೆ ಹಿನ್ನೆಲೆ ಶಾಲಾ ಕಾಲೇಜುಗಳಿಗೆ ಶುಕ್ರವಾರ ರಜೆ ಘೋಷಣೆ ಮಾಡಲಾಗಿದೆ. ವಸತಿ, ಊಟ, ಸ್ವೇಟರ್, ಛತ್ರಿ ಸೇರಿದಂತೆ ಜನರಿಗೆ ಅಗತ್ಯಗಳನ್ನು ಒದಗಿಸಲು ಅಧಿಕಾರಿಗಳಿಗೆ ಸೂಚಿಸಿದ್ದೇನೆ. ನಾಲ್ಕು ಬೋಟ್ ವ್ಯವಸ್ಥೆ ಮಾಡಲಾಗಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮಾತನಾಡಿ, ಗುಂಡ್ಲುಪೇಟೆ ರಸ್ತೆ ಸಂಚಾರ ಬದಲಾವಣೆಗೆ ವ್ಯವಸ್ಥೆ ಮಾಡಲಾಗಿದೆ. ರಸ್ತೆಗಳಲ್ಲಿ ಅಗತ್ಯವಾದ ದೀಪಗಳ ವ್ಯವಸ್ಥೆ ಮಾಡಲಾಗಿದ್ದು, ರೇನ್ ಕೋಟ್, ಜಾಕೇಟ್ ಗಳನ್ನು ನೀಡಲಾಗಿದೆ. ಜನರ ಸುರಕ್ಷತೆಗಾಗಿ ಹೆಚ್ಚುವರಿ ಹೋಂ ಗಾರ್ಡ್ ಹಾಕಲಾಗಿದೆ. ನಂಜನಗೂಡು ದೇವಸ್ಥಾನಕ್ಕೆ ಹೆಚ್ಚು ಜನ ಆಗಮನ ಹಿನ್ನಲೆ ಹೆಚ್ಚು ಜನ ದೇವಸ್ಥಾನಕ್ಕೆ ಹೋಗದಂತೆ ಕಮೀಷನರ್ ಮನವಿ ಮಾಡಿದ್ದಾರೆ. ಯಾರೂ ನದಿ ಪಕ್ಕದಲ್ಲಿ ನಿಂತು ಫೋಟೋ ತೆಗೆದುಕೊಳ್ಳಬಾರದು. ತುಂಬಿದ ಸೇತುವೆ ಮೇಲೆ ಹುಡುಗರು ಈಜಲು ಮುಂದಾಗುತ್ತಾರೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಸಿಬ್ಬಂದಿ ಹಾಗೂ ಈಜುಗಾರರನ್ನ ನೇಮಿಸಲು ಮುಂದಾಗುತ್ತೇವೆ ಎಂದರು. ಈ ಸಂದರ್ಭ ಅಗ್ನಿಶಾಮಕ ಅಧಿಕಾರಿ ಈಶ್ವರ್ ನಾಯಕ್ ಉಪಸ್ಥಿತರಿದ್ದರು.
ಸಹಾಯಕ್ಕಾಗಿ ಜಿಲ್ಲಾ ಮತ್ತು ತಾಲೂಕು ಕಂಟ್ರೋಲ್ ರೂಂಗಳಾದ ಜಿಲ್ಲಾಧಿಕಾರಿ ಕಚೇರಿ 0821-2423800/1077, ತಾಲೂಕು ಕಚೇರಿ ಮೈಸೂರು 0821-2414812, ನಂಜನಗೂಡು ತಾಲೂಕು 08221-223108, ತಿ.ನರಸೀಪುರ 08227-260210/631911901, ಹುಣಸೂರು 08222-252040, ಕೆ.ಆರ್.ನಗರ 08223-262371, ಹೆಚ್.ಡಿ.ಕೋಟೆ 08228-255325, ಪಿರಿಯಾಪಟ್ಟಣ 08223-274007, ಚೆಸ್ಕಾಂ ಮೈಸೂರು 0821-2461030/1912, ಅಗ್ನಿಶಾಮಕ ಇಲಾಖೆ 0821-2540970 ಸಂಪರ್ಕಿಸಬಹುದು.