ರಸ್ತೆ ಅಪಘಾತಕ್ಕೆ ಜ್ಯೋತಿಷಿ ಬಲಿ
ಬೆಂಗಳೂರು, ಆ.15: ಶರವೇಗವಾಗಿ ಸಾಗುತ್ತಿದ್ದ ವಾಹನವೊಂದು ಸ್ಕೂಟರ್ಗೆ ಢಿಕ್ಕಿ ಹೊಡೆದ ಪರಿಣಾಮ ಜ್ಯೋತಿಷಿಯೋರ್ವರು ಸಾವನ್ನಪ್ಪಿರುವ ಘಟನೆ ಇಲ್ಲಿನ ಪೀಣ್ಯ ಸಂಚಾರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಚಿಕ್ಕಬಾಣಾವಾರದ ನಿವಾಸಿ ಸುರೇಶ್(55) ಮೃತಪಟ್ಟಿದ್ದು, ಇವರು ಜ್ಯೋತಿಷ್ಯ ಅಂಗಡಿ ನಡೆಸುತ್ತಿದ್ದರು ಎಂದು ಹೇಳಲಾಗುತ್ತಿದೆ.
ನಗರದ 8ನೇ ಮೈಲಿಯ ಎಂಇಐ ಲೇಔಟ್ ಮನೆಗೆ ಸುರೇಶ್ ಚಿಕ್ಕಬಾಣಾವಾರದಿಂದ ಗುರುವಾರ ಸ್ಕೂಟರ್ನಲ್ಲಿ ಹೋಗುತ್ತಿದ್ದರು. ಮಾರ್ಗ ಮಧ್ಯೆ ಹೆಸರುಘಟ್ಟ ಮುಖ್ಯರಸ್ತೆ ಬೆಸ್ಕಾಂ ಕಚೇರಿ ಬಳಿ ಹಿಂದಿನಿಂದ ಬಂದ ಸಾಮಗ್ರಿ ಸಾಗಾಟ ಮಾಡುವ ವಾಹನ ಢಿಕ್ಕಿ ಹೊಡೆದಿದೆ. ಇದರ ಪರಿಣಾಮ ಕೆಳಗೆ ಬಿದ್ದ ಸುರೇಶ್ ಅವರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತಾದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಈ ಸಂಬಂಧ ಪ್ರಕರಣ ದಾಖಲಿಸಿರುವ ಪೀಣ್ಯ ಸಂಚಾರ ಠಾಣಾ ಪೊಲೀಸರು ಅಪಘಾತವೆಸಗಿದ ವಾಹನ ಜಪ್ತಿ ಮಾಡಿದ್ದು, ಪರಾರಿಯಾಗಿರುವ ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.
Next Story