ಅಧಿಕಾರಿಗಳ ವರ್ಗಾವಣೆಯಲ್ಲಿ ಶಾಸಕರ ಶಿಫಾರಸು: ಮಾಜಿ ಸಿಎಂ ಸಿದ್ದರಾಮಯ್ಯ ಸೇರಿ ಹಲವರಿಗೆ ಹೈಕೋರ್ಟ್ ನೋಟಿಸ್
ಬೆಂಗಳೂರು, ಆ.20: ಪೊಲೀಸ್ ಅಧಿಕಾರಿಗಳ ವರ್ಗಾವಣೆಯಲ್ಲಿ ರಾಜಕಾರಣಿಗಳ ಶಿಫಾರಸು ವಿಚಾರವನ್ನು ಎಸ್ಐಟಿ ತನಿಖೆ ಕೋರಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಸಂಬಂಧ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಸೇರಿ 24 ರಾಜಕೀಯ ಮುಖಂಡರಿಗೆ ಹೈಕೋರ್ಟ್ ನೋಟಿಸ್ ಜಾರಿಗೊಳಿಸಿದೆ.
ಕಾಂಗ್ರೆಸ್ ಶಾಸಕರ ಶಿಫಾರಸ್ಸಿನಂತೆ ನಡೆಸಲಾದ ಪೊಲೀಸರ ವರ್ಗಾವಣೆ ವಿರುದ್ಧ ಪೊಲೀಸ್ ಮಹಾ ಸಂಘದ ಅಧ್ಯಕ್ಷ ವಿ.ಶಶಿಧರ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಮುಹಮ್ಮದ್ ನವಾಝ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು.
ಹಿಂದಿನ ಮೈತ್ರಿಸರಕಾರದ ಆಡಳಿತ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಮುಖಂಡರ ಶೀಫಾರಸ್ಸಿನಂತೆ ಪೊಲೀಸ್ ಇಲಾಖೆಯಲ್ಲಿ ವರ್ಗಾವಣೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ, ದಿನೇಶ್ ಗುಂಡೂರಾವ್, ರಾಮಲಿಂಗರೆಡ್ಡಿ ಸೇರಿ 24 ಜನ ಶಾಸಕರಿಗೆ ನೋಟಿಸ್ ಜಾರಿ ಮಾಡಿತು.
ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಪೊಲೀಸ್ ಇಲಾಖೆಯಲ್ಲಿ ರಾಜಕಾರಣಿಗಳ ಶಿಫಾರಸ್ಸಿನಂತೆ ವರ್ಗಾವಣೆ ಮಾಡಿರುವುದು ಸಂವಿಧಾನ ಬಾಹಿರ ಕ್ರಮವಾಗಿದೆ, ಪೊಲೀಸರ ವರ್ಗಾವಣೆಯನ್ನ ಪೊಲೀಸ್ ಮಂಡಳಿಯ ತೀರ್ಮಾನದಂತೆ ವರ್ಗಾವಣೆ ನಡೆಯಬೇಕು ಆದರೆ ಕಾಂಗ್ರೆಸ್ ಶಾಸಕರ ಶಿಫಾರಸ್ಸಿನಂತೆ ವರ್ಗಾವಣೆ ಮಾಡಿರುವುದು ಸಂವಿಧಾನ ಬಾಹಿರವಾಗಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು. ಸುಪ್ರೀಂಕೋರ್ಟ್ ಹಾಗೂ ಹೈಕೋರ್ಟ್ ಹಿಂದಿನ ತೀರ್ಪಿನಲ್ಲಿ ಪೊಲೀಸ್ ಮಹಾಮಂಡಳಿಯ ತೀರ್ಮಾನದಂತೆ ವರ್ಗಾವಣೆ ನಡೆಯಬೇಕೆಂಬ ಸೂಚನೆ ಇದ್ದರೂ ಅದನ್ನ ಪಾಲಿಸಲಾಗಿಲ್ಲ ಎಂದು ವಾದಿಸಿ ಈ ಅರ್ಜಿಗೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ನಡೆಸಬೇಕು ಹಾಗೂ ಕಾಂಗ್ರೆಸ್ ಶಾಸಕರ ಶಿಫಾರಸ್ಸಿನಂತೆ ನಡೆದ ವರ್ಗಾವಣೆ ರದ್ದು ಪಡಿಸಬೇಕೆಂದು ಪೀಠಕ್ಕೆ ತಿಳಿಸಿದರು. ಈ ವೇಳೆ ಪ್ರತಿವಾದಿಗಳಿಗೆ ಹಾಗೂ ರಾಜ್ಯ ಸರಕಾರಕ್ಕೆ ಈ ಪ್ರಕರಣ ಕುರಿತು ನೋಟಿಸ್ ಜಾರಿ ಮಾಡಿದ ನ್ಯಾಯಪೀಠವು ಎರಡು ವಾರದಲ್ಲಿ ಆಕ್ಷೇಪಣೆ ಸಲ್ಲಿಸಲು ಸೂಚಿಸಿ, ನೋಟಿಸ್ ಜಾರಿಗೊಳಿಸಿತು.