ಲಂಚ ಪಡೆಯುತ್ತಿದ್ದ ಪಿಎಸ್ಐ, ಕಾನ್ಸ್ಟೇಬಲ್ ಎಸಿಬಿ ಬಲೆಗೆ
ಹರಪನಹಳ್ಳಿ, ಆ.23: ಲಂಚ ಪಡೆಯುತ್ತಿದ್ದ ವೇಳೆ ಹಲುವಾಗಲು ಪೊಲೀಸ್ ಠಾಣೆಯ ಪಿಎಸ್ಐ ಸಿ.ಪ್ರಕಾಶ್ ಹಾಗೂ ಹೆಡ್ ಕಾನ್ಸ್ಟೇಬಲ್ ಮಡಿವಾಳ ರಾಜಪ್ಪ ಎಸಿಬಿ ಬಲೆಗೆ ಬಿದ್ದ ಘಟನೆ ನಡೆದಿದೆ.
10 ಸಾವಿರ ಲಂಚ ಪಡೆಯುತ್ತಿದ್ದ ವೇಳೆ ಬಳ್ಳಾರಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಎಸ್ಪಿ ಚಂದ್ರಕಾಂತ್ ಪೂಜಾರ್ ನೇತೃತ್ವದ ತಂಡ ದಾಳಿ ನಡೆಸಿದ್ದು, ಇಬ್ಬರನ್ನೂ ಬಂಧಿಸಿದ್ದಾರೆ.
ನಿಟ್ಟೂರು ಜಮೀನು ವಿಚಾರದ ವಿವಾದಕ್ಕೆ ಸಂಬಂಧಿಸಿದ ಪ್ರಕಾರಣದ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸುವ ವಿಷಯಕ್ಕೆ ಸಂಬಂಧಿಸಿದಂತೆ ತಾಲೂಕಿನ ನಿಟ್ಟೂರು ಗ್ರಾಮದ ಪರಶುರಾಮ ಕೆ. ಜಾದವ್ ಅವರಿಗೆ ಪಿಎಸ್ಐ ಸಿ.ಪ್ರಕಾಶ್ 10 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಪರಶುರಾಮ್ ಕೆ.ಜಾದವ್ ಅವರು ಬಳ್ಳಾರಿ ಎಸಿಬಿ ಅಧಿಕಾರಿಗಳಿಗೆ ದೂರು ನೀಡಿದ್ದರು.
ಗುರುವಾರ ರಾತ್ರಿ 9 ಗಂಟೆಗೆ ಹಲವಾಗಲು ಗ್ರಾಮದ ಅನ್ನಪೂರ್ಣಶ್ವರಿ ಹೋಟೆಲ್ ಬಳಿ ರಾಜಪ್ಪ ಲಂಚ ಸ್ವೀಕರಿಸುತ್ತಿದ್ದಾಗ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ವಿಚಾರಣೆ ನಡೆದಾಗ ರಾಜಪ್ಪ ಅವರು ಪಿಎಸ್ಐ ಹೆಸರನ್ನು ಹೇಳಿದ್ದಾರೆ. ಹೀಗಾಗಿ ಪ್ರಕಾಶ್ ಹಾಗೂ ರಾಜಪ್ಪ ಇಬ್ಬರನ್ನೂ ಎಸಿಬಿ ಪೊಲೀಸರು ಬಂಧಿಸಿದ್ದಾರೆ.