ಉಪ ನಗರ ರೈಲು ಸೇವೆ ಹೆಚ್ಚಳಕ್ಕೆ ಕೇಂದ್ರ ಸಚಿವ ಸುರೇಶ್ ಅಂಗಡಿ ನಿರ್ದೇಶನ
ಬೆಂಗಳೂರು, ಆ.27: ವೈಟ್ಫೀಲ್ಡ್-ಬೆಂಗಳೂರು ನಗರದ ನಡುವಿನ ಉಪ ನಗರ ರೈಲು ಸೇವೆ ಹೆಚ್ಚಿಸುವಂತೆ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ನೈಋತ್ಯ ರೈಲ್ವೆ ಇಲಾಖೆ ಕೈಗೊಂಡಿರುವ ಕಾಮಗಾರಿಗಳು, ಪ್ರಯಾಣಿಕರ ಸುರಕ್ಷತಾ ಕ್ರಮಗಳು ಮತ್ತು ಇನ್ನಿತರ ವ್ಯವಸ್ಥೆಗಳ ಕುರಿತು ಸಚಿವರು ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಈ ವೇಳೆ ಮಾತನಾಡಿ, ಪ್ರಯಾಣಿಕರ ಅನುಕೂಲಕ್ಕೆ ತಕ್ಕಂತೆ ಇಲಾಖೆ ಕೆಲಸ ಮಾಡಬೇಕಿದೆ. ಬೆಂಗಳೂರು ನಗರದ ಸಂಚಾರದಟ್ಟಣೆ ಕಡಿಮೆ ಮಾಡಲು ಉಪನಗರ ರೈಲು ಯೋಜನೆಯನ್ನು ಸಂಪೂರ್ಣ ಜಾರಿ ಮಾಡಬೇಕಿದೆ. ಈಗಾಗಲೇ ಆರಂಭವಾಗಿರುವ ಬೆಂಗಳೂರು-ವೈಟ್ಫೀಲ್ಡ್ ನಡುವಿನ ಉಪನಗರ ರೈಲು ಸೇವೆಯನ್ನು ಪ್ರಯಾಣಿಕರ ಅನುಕೂಲವಾಗುವ ರೀತಿಯಲ್ಲಿ ಕ್ರಮ ಹೆಚ್ಚಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.
ಇದೇ ವೇಳೆ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿ ಕೆ.ಸಿ. ಸ್ವಾಮಿ, ನೈಋತ್ಯ ರೈಲ್ವೆ ಕೈಗೊಂಡಿರುವ ಪ್ರಮುಖ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. 36 ಕಿ.ಮಿ. ಉದ್ದದ ಯಲಹಂಕ-ಮಾಕಳಿದುರ್ಗ ಮಾರ್ಗದಲ್ಲಿ ದ್ವಿಪಥ ಕಾಮಗಾರಿ ಕೈಗೊಳ್ಳಲಾಗಿದ್ದು, ಈ ವರ್ಷ ಪೂರ್ಣಗೊಳ್ಳಲಿದೆ ಎಂದು ತಿಳಿಸಿದರು.