ನೈರ್ಮಲ್ಯ ಕಾಪಾಡುವುದರಿಂದ ರೋಗಗಳ ತಡೆ ಸಾಧ್ಯ: ವೈದ್ಯಾಧಿಕಾರಿ ಡಾ.ಲೀಲಾವತಿ
ಬೆಂಗಳೂರು, ಸೆ.1: ನಮ್ಮ ಮನೆಯ ಸುತ್ತಮುತ್ತಲಿನ ಪರಿಸರ ನೈರ್ಮಲ್ಯ ಕಾಪಾಡಿಕೊಳ್ಳುವ ಮೂಲಕ ಡೆಂಗ್, ಚಿಕನ್ ಗುನ್ಯಾ ಸೇರಿದಂತೆ ಇನ್ನಿತರ ಗಂಭೀರ ಸ್ವರೂಪದ ರೋಗಗಳನ್ನು ತಡೆಗಟ್ಟಲು ಸಾಧ್ಯ ಎಂದು ವೈದ್ಯಾಧಿಕಾರಿ ಡಾ.ಲೀಲಾವತಿ ತಿಳಿಸಿದ್ದಾರೆ.
ಶನಿವಾರ ಜಾಲಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸೈಂಟ್ ಕ್ಲಾರೆಟ್ ಕಾಲೇಜು ಆಶ್ರಯದಲ್ಲಿ ಏರ್ಪಡಿಸಿದ್ದ ಡೆಂಗ್ ಜ್ವರ ಮತ್ತು ಕುಷ್ಟರೋಗ ನಿರ್ಮೂಲನೆ ಅರವಿನ ಜಾಥಾ ಉದ್ಘಾಟಿಸಿ ಮಾತನಾಡಿದ ಅವರು, ಪರಿಸರ ಮಾಲಿನ್ಯದಿಂದಲೇ ಅನೇಕ ರೋಗಗಳು ಬರುತ್ತವೆ.
ಆದುದರಿಂದ ಸ್ವಚ್ಛತೆ ಕಾಪಾಡುವ ಮೂಲಕ ಸೊಳ್ಳೆಗಳ ಉತ್ಪತ್ತಿ ತಡೆಗಟ್ಟಬೇಕು. ಅಲ್ಲದೆ, ಕುಷ್ಟ ರೋಗ ಸೇರಿದಂತೆ ಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿಯಿಂದ ಅವುಗಳನ್ನು ತಡೆಗಟ್ಟಲು ಸಾಧ್ಯ ಎಂದ ಅವರು, ವಿದ್ಯಾರ್ಥಿಗಳು ಈ ಬಗ್ಗೆ ಜನರಲ್ಲಿ ಅರಿವು ಮೂಡಿಸಬೇಕೆಂದು ಕರೆ ನೀಡಿದರು.
ಕಾಲೇಜಿನ ಫಾ.ರೆ.ಡಾ.ಸಾಬುಜಾರ್ಜ್, ಆರೋಗ್ಯಾಧಿಕಾರಿ ಅನಂತಕುಮಾರ್, ಎನ್ಸಿಸಿ ಯೋಜನಾಧಿಕಾರಿ ಮಾದೇಶ್, ಅರುಣ್ ಕುಮಾರಿ, ಶಶಿಕಲಾ ಸೇರಿದಂತೆ ಇನ್ನಿತರರು ಹಾಜರಿದ್ದರು.