ಡಿಸಿಎಂ ಅಶ್ವಥ್ ನಾರಾಯಣ್ ಸದ್ಯದಲ್ಲೇ ನೀರು ಕುಡಿಯಲಿದ್ದಾರೆ: ಕಾಂಗ್ರೆಸ್ ವಕ್ತಾರ ಶ್ರೀಪಾದ ರೇಣು
ಬೆಂಗಳೂರು, ಸೆ.5: ಉಪ್ಪು ತಿಂದವರು ನೀರು ಕುಡಿಯಲೇಬೇಕೆಂದು ಡಿ.ಕೆ.ಶಿವಕುಮಾರ್ ವಿರುದ್ಧ ಹೇಳಿಕೆ ನೀಡಿದ್ದ ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್, ಬಿಬಿಎಂಪಿ ಕಡತದ ಬೆಂಕಿ ಪ್ರಕರಣದಲ್ಲಿ ಸದ್ಯದಲ್ಲೇ ನೀರು ಕುಡಿಯಲಿದ್ದಾರೆಂದು ಕಾಂಗ್ರೆಸ್ ವಕ್ತಾರ ಶ್ರೀಪಾದ ರೇಣು ಎಚ್ಚರಿಸಿದ್ದಾರೆ.
ಆಪರೇಷನ್ ಕಮಲದ ಪ್ರಮುಖ ರೂವಾರಿ ಉಪ ಮುಖ್ಯಮಂತ್ರಿ ಡಾ ಅಶ್ವಥ್ ನಾರಾಯಣ್, ತಾವೇ ಗಾಜಿನ ಮನೆಯಲ್ಲಿದ್ದು ಬೇರೆಯವರ ಮನೆಗೆ ಕಲ್ಲು ತೂರುತ್ತಿದ್ದಾರೆ. 17 ಜನ ಅನರ್ಹ ಶಾಸಕರನ್ನು ಮುಂಬೈಯಲ್ಲಿ ಪಂಚತಾರಾ ಹೊಟೇಲ್ ನಲ್ಲಿ ತಿಂಗಳುಗಟ್ಟಲೆ ಇಡಲು ಹಾಗೂ ಅವರ ಎಲ್ಲಾ ಅವಶ್ಯಕತೆಗಳನ್ನು ಪೂರೈಸಲು ಹಣ ಎಲ್ಲಿಂದ ಬಂತು. ಹಾಗೆಯೇ, ಇದಕ್ಕೆ ಆದ ಖರ್ಚುಗಳ ಬಗ್ಗೆ ದಾಖಲೆಯನ್ನು ನೀಡುತ್ತಾರೆಯೇ?. ಕೇವಲ 8 ವರ್ಷಗಳ ಅವಧಿಯಲ್ಲಿ ತಮ್ಮ ಆಸ್ತಿಯಲ್ಲಿ ಸಾಕಷ್ಟು ಹೆಚ್ಚಳವಾಗಿರುವುದರ ಬಗ್ಗೆ ಉಪಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ್ ಸರಿಯಾದ ದಾಖಲೆಗಳನ್ನ ನೀಡಬೇಕು. ತಾವು ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ನಡೆದ ಕಡತಗಳಿಗೆ ಬೆಂಕಿ ಪ್ರಕರಣದಲ್ಲಿ ಪ್ರಮುಖ ಆರೋಪಿ ಎನ್ನುವುದರ ಬಗ್ಗೆ ನೆನೆಪಿಸಿಕೊಳ್ಳಬೇಕು.
ಕೇಂದ್ರದ ಬಿಜೆಪಿ ಸರಕಾರ ಕಾಂಗ್ರೆಸ್ ನಾಯಕರಿಗೆ ಕಿರುಕುಳ ನೀಡುತ್ತಿರುವುದನ್ನು ಮುಂದುವರೆಸಿದೆ. ಕಾಲ ಚಕ್ರ ತಿರುಗುತ್ತಲೇ ಇರುತ್ತದೆ ಎಂಬುದನ್ನು ಅಶ್ವಥ್ ನಾರಾಯಣ್ ನೆನಪು ಮಾಡಿಕೊಳ್ಳಬೇಕು. ಉಪ್ಪುತಿಂದವರು ನೀರು ಕುಡಿಯಲೇಬೇಕು ಎನ್ನುವ ನಿಮ್ಮ ಹೇಳಿಕೆ ನಿಮಗೂ ಮುಂಬರುವ ಕಾಲಘಟ್ಟದಲ್ಲಿ ಅನ್ವಯವಾಗಲಿದೆ ಎಂದು ಶ್ರೀಪಾದ ರೇಣು ಪತ್ರಿಕಾ ಹೇಳಿಕೆಯಲ್ಲಿ ಎಚ್ಚರಿಕೆ ನೀಡಿದ್ದಾರೆ.