ಹಸಿವಿದ್ದಲ್ಲಿ ಸೃಜನಶೀಲತೆ ಬೆಳೆಯುತ್ತದೆ: ಶಾಸಕ ಉದಯ ಬಿ.ಗರುಡಾಚಾರ್
ವಿದ್ಯಾರ್ಥಿ ಪರಿಷತ್ಗೆ ಚಾಲನೆ
ಬೆಂಗಳೂರು, ಸೆ.14: ನಗರದ ಹಮೀದ್ ಶಾ ಕಾಂಪೌಂಡ್ನಲ್ಲಿರುವ ಅಬ್ಬಾಸ್ ಖಾನ್ ಮಹಿಳಾ ಕಾಲೇಜಿನಲ್ಲಿ ಪ್ರಸಕ್ತ ಸಾಲಿನ ವಿದ್ಯಾರ್ಥಿ ಪರಿಷತ್ಗೆ ಶಾಸಕ ಉದಯ ಬಿ.ಗರುಡಾಚಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿ ಪರಿಷತ್ ಅನ್ನುವುದು ವಿದ್ಯಾರ್ಥಿಗಳು ಮತ್ತು ಆಡಳಿತ ವರ್ಗದ ನಡುವೆ ಸೇತು ಬಂಧವಾಗಿ ಕಾರ್ಯ ನಿರ್ವಹಿಸುವಂತಾಗಬೇಕು. ಹೊರ ಜಗತ್ತಿನ ಸ್ಫೂರ್ತಿಗಿಂತ ನಮ್ಮಿಳಗಿನ ಸ್ಫೂರ್ತಿಯೇ ಅತ್ಯುತ್ತಮ ಮತ್ತು ವಿದ್ಯಾರ್ಥಿ ಪರಿಷತ್ತು ಸಾಮಾಜಿಕ ಚಟುವಟಿಕೆಯಲ್ಲಿ ಹೆಚ್ಚೆಚ್ಚು ಭಾಗಿಯಾಗಿ ಆ ಭಾಗದ ಜನರ ಅಭಿವೃದ್ಧಿಗೆ ಸಹಕಾರಿಯಾಗಲಿ ಎಂದು ಆಶಿಸಿದರು.
ದೇಶದ ಬಹುತೇಕ ವಿದ್ಯಾರ್ಥಿಗಳು ಉತ್ತಮ ಸ್ಥಾನ ಪಡೆಯಬೇಕು ಎಂದು ಬಯಸುತ್ತಾರೆ. ಆದರೆ, ಅದು ಸಾಧ್ಯವಾಗುವುದಿಲ್ಲ. ಶ್ರಮಪಟ್ಟರೆ ಫಲಿತಾಂಶ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ಸತತ ಪರಿಶ್ರಮ ಅಗತ್ಯವಿದೆ. ಎಲ್ಲರೂ ಧೈರ್ಯದಿಂದ ತಮ್ಮ ಗುರಿ ಸಾಧನೆಗಾಗಿ ಹೋರಾಡಬೇಕು ಎಂದು ಅವರು ಹೇಳಿದರು.
ಇಂದಿನ ವಿದ್ಯಾರ್ಥಿಗಳು ಪಠ್ಯಪುಸ್ತಕಗಳಷ್ಟೇ ಅಲ್ಲದೆ, ಪಠ್ಯೇತರ ಪುಸ್ತಕಗಳನ್ನು ಓದುವ ಹವ್ಯಾಸ ರೂಢಿಸಿಕೊಳ್ಳಬೇಕು. ಆಗ ಬದುಕಿನ ಮೌಲ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ. ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವೆ ಸಲ್ಲಿಸುವುದನ್ನು ಕಲಿಯಬೇಕು. ಎಲ್ಲರೂ ಸಮಾನರು ಎಂಬ ಭಾವನೆಯನ್ನು ರೂಪಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ವಿದ್ಯಾರ್ಥಿಗಳಲ್ಲಿ ಶೈಕ್ಷಣಿಕ ಅಭದ್ರತೆ, ಹಸಿವು, ದಾಹ ಇದ್ದಾಗ ಮಾತ್ರ ಸೃಜನಶೀಲತೆ ಬೆಳೆಯುತ್ತದೆ. ವಿದ್ಯಾರ್ಥಿಗಳು ಓದನ್ನು ಗಂಭೀರವಾಗಿ ಪರಿಗಣಿಸಬೇಕು. ಸಮಾಜದಲ್ಲಿನ ಎಲ್ಲರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದಾಗ ಮಾತ್ರ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿ ಪರಿಷತ್ ಎಲ್ಲರೊಂದಿಗೆ ಸಮತೋಲನ ಕಾಯ್ದುಕೊಳ್ಳುವಲ್ಲಿ ಸಹಕಾರಿಯಾಗಲಿ ಎಂದು ನುಡಿದರು.
ಜೆಡಿಎಸ್ ಮುಖಂಡ ತನ್ವೀರ್ ಅಹಮದ್ ಮಾತನಾಡಿ, ದೇಶದ ಸರ್ವತೋಮುಖ ಅಭಿವೃದ್ಧಿಗಾಗಿ ನಾಡಿನ ಸಮಸ್ತ ನಾಗರಿಕರು ವಿದ್ಯಾವಂತರಾಗಬೇಕು. ಶಿಕ್ಷಣವೇ ಶಕ್ತಿಯಾಗಿದೆ. ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರಲ್ಲಿ ಶಿಕ್ಷಣದ ಮಹತ್ವ ಹೆಚ್ಚಾಗಿದೆ. ಮತ್ತು ಹೆಣ್ಣು ಮಕ್ಕಳು ವಿದ್ಯೆಯಲ್ಲಿ ಮುಂದುವರಿಯುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ ಎಂದು ಹೇಳಿದರು.
ಮಹಿಳಾ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾದ ಅಗತ್ಯವಿದೆ. ಹೆಣ್ಣು ಮಕ್ಕಳು ಶಿಕ್ಷಣ ಪಡೆದರೆ ದೇಶದ ಆದಾಯ, ಆರೋಗ್ಯ, ಬಡತನ ಇತ್ಯಾದಿ ಪಿಡುಗುಗಳು ನಿಯಂತ್ರಣದಲ್ಲಿರುತ್ತವೆ. ರಾಜ್ಯ ಹಾಗೂ ದೇಶದ ಪ್ರಗತಿಗೆ ಕಾರಣಕರ್ತರಾಗುತ್ತದೆ. ಮಹಿಳಾ ಶಿಕ್ಷಣಕ್ಕೆ ಆದ್ಯತೆ ನೀಡಿದ ರಾಷ್ಟ್ರಗಳಲ್ಲಿ ಹೆಚ್ಚು ಆರೋಗ್ಯವಂತ ಪ್ರಜೆಗಳಿರುವುದನ್ನು ಕಾಣಬಹುದು ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಜಿಯಾವುಲ್ಲಾ ಶರೀಫ್ ಸಾಹೇಬ್, ಉಪಾಧ್ಯಕ್ಷ ಜಾವೇದ್ ಪಾಟೀಲ್, ಪ್ರಧಾನ ಕಾರ್ಯದರ್ಶಿ ಡಾ.ಜಹೀರುದ್ಧೀನ್ ಅಹ್ಮದ್ ಮತ್ತಿತರರಿದ್ದರು. ಇದೇ ವೇಳೆ ಪದವಿ ಕಾಲೇಜಿನ ಪ್ರಾಂಶುಪಾಲರಾದ ಜುಬೇದಾ ಬೇಗಂರಿಗೆ ಒಕ್ಕಲಿಗರ ಸಂಘದ ಕೆಂಪೇಗೌಡ ಪ್ರಶಸ್ತಿ ನೀಡಿದ್ದಕ್ಕೆ ಹಾಗೂ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ.ಎಂ.ಎಸ್.ವೀಣಾರಿಗೆ ಸೇವಾ ರತ್ನ ಪ್ರಶಸ್ತಿ ನೀಡಿದ್ದಕ್ಕೆ ಅವರನ್ನು ಸನ್ಮಾನಿಸಲಾಯಿತು.