ಇನ್ನು ನಿಮಗೂ ಟ್ರಾಫಿಕ್ ನಿಯಂತ್ರಿಸಬಹುದು: ಹೇಗೆ ಗೊತ್ತಾ ?
ಬೆಂಗಳೂರು, ಸೆ.18: ರಾಜಧಾನಿ ಬೆಂಗಳೂರಿನಲ್ಲಿ ದಿನೇ ದಿನೇ ಸಂಚಾರ (ಟ್ರಾಫಿಕ್) ದಟ್ಟಣೆ ಹೆಚ್ಚಾಗುತ್ತಿದೆ. ಆದರೆ, ಇದನ್ನು ನಿಯಂತ್ರಿಸಲು ಪೊಲೀಸ್ ಇಲಾಖೆ ಹೊಸ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರಿಗೆ ಒಂದು ಅವಕಾಶ ನೀಡಲು ನಿರ್ಧರಿಸಿದೆ.
ಹೌದು, ಬೆಂಗಳೂರು ವ್ಯಾಪ್ತಿಯ ಟ್ರಾಫಿಕ್ ವಾರ್ಡನ್ಗಳ ಸಂಖ್ಯೆಯನ್ನು ಹೆಚ್ಚಿಸಲು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಮುಂದಾಗಿದ್ದಾರೆ.
ಈ ಕುರಿತು ಸೋಮವಾರ ಟ್ವಿಟ್ ಮಾಡಿರುವ ಅವರು, ಬೆಂಗಳೂರಿನಲ್ಲಿ ಹಾಲಿ 390 ಟ್ರಾಫಿಕ್ ವಾರ್ಡನ್ಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಇದನ್ನು, 2,500ಕ್ಕೆ ಏರಿಕೆ ಮಾಡುವ ನಿರ್ಧಾರಕ್ಕೆ ಬರಲಾಗಿದೆ. ಹೀಗಾಗಿ, ಸ್ವಯಂ ಪ್ರೇರಿತವಾಗಿ ಸಂಚಾರ ದಟ್ಟಣೆ ನಿಯಂತ್ರಣ ಮಾಡಲು ಇಚ್ಛೆ ಪಡುವವರು ಹತ್ತಿರದ ಸಂಚಾರ ಪೊಲೀಸ್ ಠಾಣೆಗಳಿಗೆ ಭೇಟಿ ನೀಡಿ ಮಾಹಿತಿ ಪಡೆಯಬಹುದೆಂದು ಹೇಳಿದ್ದಾರೆ.
ಈ ಮೂಲಕ ಬೆಂಗಳೂರು ಸಂಚಾರ ದಟ್ಟಣೆ ನಿಯಂತ್ರಣಕ್ಕೆ ಹೊಸ ಹೆಜ್ಜೆ ಇಟ್ಟಿದ್ದು, ಆಸಕ್ತರು ಇದಕ್ಕೆ ಕೈಜೋಡಿಸಬಹುದು. ನಿಮಗೆ ಹೊಂದಾಣಿಕೆ ಆಗುವ ಸ್ಥಳ, ಸಮಯದಲ್ಲಿ, ಟ್ರಾಫಿಕ್ ನಿಯಂತ್ರಣ ಮಾಡಬಹುದು ಎಂದು ಆಯುಕ್ತರು ತಿಳಿಸಿದ್ದಾರೆ.