ಕಡೂರು: ನಿಂತಿದ್ದ ಲಾರಿಗೆ ಬಸ್ ಢಿಕ್ಕಿ; ಯುವತಿ ಸಹಿತ ಇಬ್ಬರು ಮೃತ್ಯು
ಆರು ಮಂದಿಗೆ ಗಂಭೀರ ಗಾಯ
ಚಿಕ್ಕಮಗಳೂರು, ಸೆ.24: ಕೆಎಸ್ಸಾರ್ಟಿಸಿ ಬಸ್ಸೊಂದು ನಿಂತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದ ಪರಿಣಾಮ ಲಾರಿ ಚಾಲಕ ಸೇರಿದಂತೆ ಬಸ್ನಲ್ಲಿದ್ದ ಯುವತಿಯೋರ್ವಳು ಮೃತಪಟ್ಟಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ರಾತ್ರಿ ವರದಿಯಾಗಿದೆ.
ಮೃತ ಲಾರಿ ಚಾಲಕನನ್ನು ಶಿವಮೊಗ್ಗ ಮೂಲದ ಸರವಣ(40) ಹಾಗೂ ಬಸ್ಸಿನಲ್ಲಿದ್ದ ಬೇಲೂರು ತಾಲೂಕಿನ ಹಗರೆ ಗ್ರಾಮದ ರುಚಿತಾ(22) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಸ್ನಲ್ಲಿ ಪ್ರಯಾಣಿಸುತ್ತಿದ್ದ 7 ವರ್ಷದ ಬಾಲಕ ಸೇರಿದಂತೆ ಆರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆಂದು ತಿಳಿದುಬಂದಿದೆ.
ಘಟನೆ ವಿವರ: ಚಿಕ್ಕಮಗಳೂರಿನಿಂದ ಕೊಪ್ಪಳ ಜಿಲ್ಲೆಯ ಯಲಬುರ್ಗಕ್ಕೆ ಸೋಮವಾರ ರಾತ್ರಿ ಹೊರಟಿದ್ದ ಕೆಎಸ್ಸಾರ್ಟಿಸಿ ಬಸ್ ಕಡೂರು ತಾಲೂಕಿನ ಸಖರಾಯಪಟ್ಟಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಹುಲಿಕೆರೆ ಕ್ರಾಸ್ನ ರಾಷ್ಟ್ರೀಯ ಹೆದ್ದಾರಿ-173ರಲ್ಲಿ ರಸ್ತೆ ಬದಿಯಲ್ಲಿ ಡೀಸೆಲ್ ಖಾಲಿಯಾಗಿ ನಿಂತಿದ್ದ ಲಾರಿಗೆ ಹಿಂಬದಿಯಿಂದ ಢಿಕ್ಕಿ ಹೊಡೆದಿದೆ. ಲಾರಿಗೆ ಬಸ್ ಢಿಕ್ಕಿಯಾದ ಸಂದರ್ದಲ್ಲಿ ಕ್ಯಾನ್ವೊಂದರಿಂದ ಲಾರಿಯ ಇಂಧನ ಟ್ಯಾಂಕ್ಗೆ ಡೀಸೆಲ್ ಸುರಿಯುತ್ತಿದ್ದ ಲಾರಿ ಚಾಲಕ ಸರವಣನ ತಲೆಗೆ ಲಾರಿ ಬಡಿದ ಪರಿಣಾಮ ಆತನ ತಲೆ ಛಿದ್ರವಾಗಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆಂದು ತಿಳಿದು ಬಂದಿದೆ.
ಇನ್ನು ಬಸ್ಸಿನ ಮುಂಭಾಗದಲ್ಲಿ ಕುಳಿತಿದ್ದವರ ಪೈಕಿ ಕಡೂರು ತಾಲೂಕು ಕಚೇರಿಯ ಸರ್ವೆ ಇಲಾಖೆಯ ಉದ್ಯೋಗಿ, ಬೇಲೂರು ತಾಲೂಕಿನ ರುಚಿತಾ ಹಾಗೂ 7 ವರ್ಷದ ಬಾಲಕ ಸೇರಿದಂತೆ 7 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಗಾಯಾಳುಗಳನ್ನು ಕೂಡಲೇ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ರುಚಿತಾ ಚಿಕಿತ್ಸೆ ಪಲಿಸದೇ ಮೃತಪಟ್ಟಿದ್ದಾರೆ. ಉಳಿದಂತೆ 7 ವರ್ಷದ ಬಾಲಕ ಸೇರಿ ಗಂಭೀರವಾಗಿ ಗಾಯಗೊಂಡಿದ್ದ 6 ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಘಟನೆಯಲ್ಲಿ ಬಸ್ ಚಾಲಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಅಪಘಾತ ಸಂಬಂಧ ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.