ಏತ ನೀರಾವರಿ ಯೋಜನೆ: ಗುತ್ತಿಗೆದಾರನ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಹಣ ವಸೂಲಿಗೆ ಸಚಿವರ ಸೂಚನೆ
ಶಿವಮೊಗ್ಗ, ಸೆ.24: ಶಿವಮೊಗ್ಗ ತಾಲೂಕಿನ ಬೂದಿಗೆರೆ ಏತ ನೀರಾವರಿ ಯೋಜನೆ ಕಾಮಗಾರಿ ಸಮರ್ಪಕವಾಗಿ ನಿರ್ವಹಿಸದ ಗುತ್ತಿಗೆದಾರರನ್ನು ಕಪ್ಪು ಪಟ್ಟಿಗೆ ಸೇರ್ಪಡೆಗೊಳಿಸಬೇಕು. ಅವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಿ, ಸರ್ಕಾರ ಅವರಿಗೆ ಬಿಡುಗಡೆ ಮಾಡಿದ ಹಣ ವಸೂಲಿ ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಸೂಚಿಸಿದ್ದಾರೆ.
ಅವರು ಮಂಗಳವಾರ ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ತ್ರೈಮಾಸಿಕ ಅಭಿವೃದ್ದಿ ಪ್ರಗತಿ ಪರಿಶೀಲನಾ ಸಭೆಯಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನೆ ನಡೆಸಿದರು.
2007-08 ರಲ್ಲಿ ಯೋಜನೆ ಆರಂಭವಾಗಿದ್ದು 8.28 ಕೋಟಿ ರೂ. ವೆಚ್ಚವಾಗಿದೆ. ನಂತರ ಟೆಂಡರ್ ರದ್ದಾಗಿತ್ತು. 2ನೇ ಏಜೆನ್ಸಿ ನಿಗದಿಗೊಳಿಸಿ 5.43 ಕೋಟಿ ರೂ. ನಿಗದಿಗೊಳಿಸಲಾಗಿದ್ದು, 3.04 ಕೋಟಿ ರೂ. ಖರ್ಚಾಗಿತ್ತು. ಈ ಗುತ್ತಿಗೆದಾರರನ್ನು ಕೂಡ ಬದಲಾಯಿಸಲಾಗಿತ್ತು. ಇದೀಗ ಪೈಪ್ಲೈನ್ ಬದಲಾಯಿಸಲು 6.59 ಕೋಟಿ ರೂ.ಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಸಣ್ಣ ನೀರಾವರಿ ಇಲಾಖೆ ಅಧಿಕಾರಿ ಸಭೆಗೆ ಮಾಹಿತಿ ನೀಡಿದರು.
ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದರೂ ಹಣ ಬಿಡುಗಡೆ ಮಾಡಲಾಗಿದೆ. ಅಪಾರ ಹಣ ವ್ಯಯಿಸಿದರೂ ಕೆಲಸ ಪೂರ್ಣಗೊಂಡಿಲ್ಲ. ಈ ಕಾರಣದಿಂದ ಗುತ್ತಿಗೆದಾರರನ್ನು ಕಪ್ಪುಪಟ್ಟಿಗೆ ಸೇರ್ಪಡೆಗೊಳಿಸಿ. ಅವರಿಂದ ಹಣ ವಸೂಲಿಗೊಳಿಸಿ. ಜೊತೆಗೆ ಕ್ರಿಮಿನಲ್ ಕೇಸ್ ಕೂಡ ದಾಖಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಕಾರ್ಯಪಡೆ ರಚನೆ: ಶಾಸಕರ ಕಾರ್ಯಪಡೆ ಮಾದರಿಯಲ್ಲಿ ಪ್ರತಿ ಜಿಲ್ಲಾ ಪಂಚಾಯತ್ ಅಧ್ಯಕ್ಷರ ನೇತೃತ್ವದಲ್ಲಿ ಕಾರ್ಯಪಡೆ ರಚನೆ ಕುರಿತು ಈಗಾಗಲೇ ತೀರ್ಮಾನ ಕೈಗೊಳ್ಳಲಾಗಿದೆ. ಪ್ರತಿ ಕಾರ್ಯಪಡೆಗೆ ತಲಾ ಒಂದು ಕೋಟಿ ರೂ. ಅನುದಾನ ಒದಗಿಸಲಾಗುವುದು. ಜಿಲ್ಲಾ ಪಂಚಾಯತ್ ಸ್ಥಾಯಿ ಸಮಿತಿ ಸದಸ್ಯರು ಇದರ ಸದಸ್ಯರಾಗಿರುವರು ಎಂದು ಸಚಿವರು ತಿಳಿಸಿದರು.
ಡಿಸಿಸಿ ಬ್ಯಾಂಕ್ಗೆ ಸೂಚನೆ: ಡಿಸಿಸಿ ಬ್ಯಾಂಕುಗಳು ರೈತರು ಪರಿಹಾರದ ಹಣವನ್ನು ಪಡೆಯಲು ಪ್ರತ್ಯೇಕ ಖಾತೆ ತೆರೆಯಲು ಒತ್ತಡ ಹೇರಬಾರದು. ಖಾತೆಯಲ್ಲಿ ಕನಿಷ್ಟ 2 ಸಾವಿರ ರೂ. ಇರಬೇಕೆಂದು ಶರತ್ತು ವಿಧಿಸುತ್ತಿದ್ದು, ರಾಷ್ಟ್ರೀಕೃತ ಬ್ಯಾಂಕುಗಳ ರೀತಿ ಜೀರೋ ಬ್ಯಾಲೆಂನ್ಸ್ ಖಾತೆಗೆ ಅವಕಾಶ ನೀಡಬೇಕು. ಸರ್ಕಾರ ನೀಡುವ ಪರಿಹಾರದ ಮೊತ್ತದಲ್ಲಿ ಶೇ.13ರಷ್ಟನ್ನು ಮುರಿಯಲಾಗುತ್ತಿರುವ ದೂರಿನ ಬಗ್ಗೆ ಪರಿಶೀಲನೆ ನಡೆಸಬೇಕು. ಈ ಎಲ್ಲಾ ವಿಷಯಗಳ ಕುರಿತು ಪರಿಶೀಲನೆ ನಡೆಸಿ ಜಿಲ್ಲಾಧಿಕಾರಿ ಅವರಿಗೆ ಒಂದು ವಾರದ ಒಳಗಾಗಿ ವರದಿಯನ್ನು ಸಲ್ಲಿಸುವಂತೆ ಡಿಆರ್ಸಿಎಸ್ ಅಧಿಕಾರಿಗೆ ಸಚಿವರು ಸೂಚನೆ ನೀಡಿದರು.
ಅತಿವೃಷ್ಟಿಯಿಂದ ಜಿಲ್ಲೆಯಲ್ಲಿ ಅಡಿಕೆ ಬೆಳೆಗೆ ಅತಿ ಹೆಚ್ಚಿನ ಹಾನಿ ಉಂಟಾಗಿದ್ದು, ಕೊಳೆ ರೋಗ ಪರಿಹಾರಕ್ಕಾಗಿ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಶಾಸಕ ಅರಗ ಜ್ಞಾನೇಂದ್ರ ಅವರು ಮನವಿ ಮಾಡಿದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಜ್ಯೋತಿ ಎಸ್.ಕುಮಾರ್, ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೈಶಾಲಿ, ಎಸ್ಪಿ ಶಾಂತರಾಜ್, ಶಾಸಕರಾದ ಹರತಾಳು ಹಾಲಪ್ಪ, ಅರಗ ಜ್ಞಾನೇಂದ್ರ, ಅಶೋಕ ನಾಯ್ಕ, ಕುಮಾರ ಬಂಗಾರಪ್ಪ, ಸ್ಥಾಯಿ ಸಮಿತಿ ಸದಸ್ಯರು, ಅಧಿಕಾರಿಗಳು ಉಪಸ್ಥಿತರಿದ್ದರು.
ಬಹುಗ್ರಾಮ ಕುಡಿಯುವ ನೀರು ಯೋಜನೆ ಪೂರ್ಣಕ್ಕೆ ಸೂಚನೆ
ಜಿಲ್ಲೆಯಲ್ಲಿ ಹಲವು ವರ್ಷಗಳಿಂದ ಕುಂಟುತ್ತಾ ನಡೆಯುತ್ತಿರುವ ಎಲ್ಲಾ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸುವಂತೆ ಸಚಿವರು ಸೂಚಿಸಿದರು. ಜಿಲ್ಲೆಯಲ್ಲಿ 2012 ರಲ್ಲಿ ಆರಂಭವಾದ 7 ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಒಂದು ಮಾತ್ರ ಪೂರ್ಣಗೊಂಡಿದೆ. ಒಂದು ಕಾಮಗಾರಿ ಟೆಂಡರ್ ಹಂತದಲ್ಲಿದ್ದು, ಉಳಿದ ಐದು ಕಾಮಗಾರಿಗಳನ್ನು ಆದಷ್ಟು ಬೇಗನೆ ಪೂರ್ಣಗೊಳಿಸಿ ಜನವರಿ ಒಳಗಾಗಿ ಜನರಿಗೆ ನೀರು ಒದಗಿಸಲು ಕ್ರಮ ಕೈಗೊಳ್ಳಬೇಕು ಎಂದರು.
ನೆರೆ ಪರಿಹಾರ: ನೆರೆ ಪರಿಹಾರ ಕಾರ್ಯವನ್ನು ಚುರುಕುಗೊಳಿಸಲಾಗಿದ್ದು, ಇದುವರೆಗೆ 5563 ನೆರೆ ಪೀಡಿತ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ಒದಗಿಸಲಾಗಿದೆ. 26360 ರೈತರು ಬೆಳೆ ಹಾನಿ ಪರಿಹಾರಕ್ಕಾಗಿ ಅರ್ಜಿ ಸಲ್ಲಿಸಿದ್ದು, ಇವರಿಗೆ ಆದಷ್ಟು ಬೇಗನೆ ಪರಿಹಾರ ವಿತರಿಸಲಾಗುವುದು. 4231 ಮನೆ ಹಾನಿ ಪ್ರಕರಣಗಳಲ್ಲಿ 1348 ಪ್ರಕರಣಗಳಲ್ಲಿ ಜಿಪಿಎಸ್ ಪೂರ್ಣಗೊಂಡಿದ್ದು, ಒಂದೆರಡು ದಿನಗಳಲ್ಲಿ ಸುಮಾರು 700ಮಂದಿಗೆ ಪ್ರಥಮ ಹಂತದಲ್ಲಿ ಪರಿಹಾರ ಮೊತ್ತವನ್ನು ನೀಡಲಾಗುವುದು. ಅನಧಿಕೃತವಾಗಿ ನಿರ್ಮಿಸಿದ್ದ ಮನೆಗಳ ಪ್ರಕರಣದಲ್ಲಿ ಅವರಿಂದ ಅಫಿದಾವಿಟ್ ಪಡೆದುಕೊಂಡು ಎಕ್ಸ್ಗ್ರೇಷಿಯಾ ನೀಡಲು ಸರ್ಕಾರ ಸೂಚನೆ ನೀಡಿದೆ ಎಂದು ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಅವರು ತಿಳಿಸಿದರು.