ಅವಿಭಜಿತ ಜಿಲ್ಲೆಯ 197 ಪತ್ತಿನ ಸಹಕಾರ ಸಂಘಗಳ ಗಣಕೀಕರಣಕ್ಕೆ ಸಂಕಲ್ಪ: ಡಿಸಿಸಿ ಬ್ಯಾಂಕ್ ಅಧ್ಯಕ್ಷ ಗೋವಿಂದಗೌಡ
ಕೋಲಾರ, ಸೆ.28: ಪಾರದರ್ಶಕ ಆಡಳಿತ ಹಾಗೂ ನಂಬಿಕೆ ಗಟ್ಟಿಗೊಳಿಸುವ ನಿಟ್ಟಿನಲ್ಲಿ ಅವಿಭಜಿತ ಜಿಲ್ಲೆಯ ಎಲ್ಲಾ 197 ಪತ್ತಿನ ಸಹಕಾರ ಸಂಘಗಳನ್ನು ಒಂದು ತಿಂಗಳೊಳಗೆ ಗಣಕೀಕರಣಕ್ಕೆ ಸಂಕಲ್ಪ ಮಾಡಿ ಎಂದು ಕೋಲಾರ, ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಕರೆ ನೀಡಿದರು.
ಶನಿವಾರ ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳ ಪತ್ತಿನ ಸಹಕಾರ ಸಂಘಗಳ ಗಣಕೀಕರಣ ಮಾಡುವ ಕುರಿತಂತೆ ಕರೆಯಲಾಗಿದ್ದ ಸಂಘಗಳ ಕಾರ್ಯದರ್ಶಿಗಳು ಮತ್ತು ಡಿಸಿಸಿ ಬ್ಯಾಂಕ್ ಶಾಖೆ ವ್ಯವಸ್ಥಾಪಕರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು. 'ಜಿಲ್ಲೆಯ 213 ಸಹಕಾರ ಸಂಘಗಳ ಪೈಕಿ 197 ಸಂಘಗಳು ಆರ್ಥಿಕವಾಗಿ ಸುಸ್ಥಿತಿಯಲ್ಲಿದ್ದು, ವಹಿವಾಟು ನಡೆಸುತ್ತಿವೆ. ಈ ಸೊಸೈಟಿಗಳ ಮೂಲಕ ಡಿಸಿಸಿ ಬ್ಯಾಂಕ್ ಸಾಲವನ್ನು ರೈತರು, ಮಹಿಳಾ ಸಂಘಗಳಿಗೆ ವಿತರಿಸಿದೆ ಎಂದರು.
ಗಣಕೀಕರಣ ಮಾಡುವ ಸಂಬಂಧ ಸೊಸೈಟಿಗಳ ಕಟ್ಟಡಗಳ ಮೂಲಭೂತ ಸೌಲಭ್ಯಗಳು ಮುತ್ತು ಸುಸ್ಥಿತಿಯ ಕುರಿತು ಬ್ಯಾಂಕಿನ ಎಲ್ಲಾ ಶಾಖೆಗಳ ವ್ಯವಸ್ಥಾಪಕರಿಂದ ಅವರು ಮಾಹಿತಿ ಸಂಗ್ರಹಿಸಿದರು. ಅದರಂತೆ 197 ಸಂಘಗಳ ಪೈಕಿ 166 ಸಂಘಗಳಿಗೆ ಸ್ವಂತ ಕಟ್ಟಡವಿದೆ, 31 ಸೊಸೈಟಿಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ, 168 ಸೊಸೈಟಿಗಳಿಗೆ ಸೂಕ್ತ ಮೂಲಭೂತ ಸೌಲಭ್ಯಗಳಿದ್ದು, ಗಣಕೀಕರಣ ಮಾಡಲು ಸಜ್ಜಾಗಿವೆ. ಉಳಿದ ಸೊಸೈಟಿ ಕಟ್ಟಡಗಳ ದುರಸ್ತಿ ಮಾಡಿಸಲು ಕ್ರಮವಹಿಸಿ ಎಂದು ಸೂಚಿಸಿದರು.
ಬ್ಯಾಂಕಿನ ಅಭಿವೃದ್ದಿ ಸಹಿಸದವರು ನಾನಾ ರೀತಿ ಮಾತನಾಡಿಕೊಳ್ಳುತ್ತಾರೆ. ನಮ್ಮಿಂದ ಒಂದು ಸಣ್ಣ ತಪ್ಪಾದರೂ ಅದು ಬೃಹದಾಕಾರವಾಗಿ ಘನತೆಗೆ ಕುತ್ತಾಗುತ್ತದೆ. ಈ ಕಾರಣದಿಂದ ಗಣಕೀಕರಣ ಅಗತ್ಯವಾಗಿದೆ. ಪ್ರತಿದಿನದ ಒಂದೊಂದು ರೂಪಾಯಿ ವಹಿವಾಟು ಅಪ್ಡೇಟ್ ಆಗುವುದರಿಂದ ನಮ್ಮ ಬಗ್ಗೆ ಮಾತನಾಡಿಕೊಳ್ಳುವವರ ಬಾಯಿಗೆ ಬೀಗ ಹಾಕಿದಂತಾಗುತ್ತದೆ ಎಂದರು.
ಆಡಿಟ್ ಮಾಡದಿದ್ದರೆ ಸಂಘ ಸೂಪರ್ಸೀಡ
ಅದೇ ರೀತಿ ಸಂಘದ ಲೆಕ್ಕ ಪರಿಶೋಧನೆ, ನಗದು ಪುಸ್ತಕ ಬರೆಯುವ ಕಾರ್ಯದಲ್ಲಿ ಲೋಪವಾಗದಂತೆ ಕ್ರಮವಹಿಸಿ, ಸೂಪರ್ವೈಸರ್ ಗಳು ಸೊಸೈಟಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಎಂದು ತಾಕೀತು ಮಾಡಿದ ಅವರು, 197 ಸೊಸೈಟಿಗಳ ಪೈಕಿ 153 ಸೊಸೈಟಿಗಳು ಮಾತ್ರ ಆಡಿಟ್ ಮುಗಿದಿದೆ ಎಂದರು. ಆಡಿಟ್ ಆಗದಿರುವ ಸೊಸೈಟಿಗಳ ಕಾರ್ಯದರ್ಶಿಗಳು ಮತ್ತು ಬ್ಯಾಂಕ್ ಶಾಖಾ ವ್ಯವಸ್ಥಾಪಕರನ್ನು ತರಾಟೆಗೆ ತೆಗೆದುಕೊಂಡ ಅವರು, ವಾರದೊಳಗೆ ಆಡಿಟ್ ಮಾಡಿಸಿ ವರದಿ ನೀಡದಿದ್ದರೆ ಅಂತಹ ಸೊಸೈಟಿಗಳ ಆಡಳಿತ ಮಂಡಳಿಯನ್ನು ರದ್ದುಗೊಳಿಸಲು ಸಹಕಾರ ಸಂಘಗಳ ನಿಬಂಧಕರಿಗೆ ಶಿಫಾರಸ್ಸು ಮಾಡುವಂತೆ ಬ್ಯಾಂಕ್ ನಿರ್ದೇಶಕರಿಗೆ ಸೂಚಿಸಿದರು.
ಪಾರದರ್ಶಕತೆಗೆ ಒತ್ತು
ಗಣಕೀಕರಣ ಮಾಡುವುದರಿಂದ ಆಯಾದಿನದ ವಹಿವಾಟು ಆಯಾ ದಿನವೇ ಕ್ಷಣಗಳಲ್ಲಿ ಆನ್ಲೈನ್ನಲ್ಲಿ ಅಪ್ಡೇಟ್ ಆಗುವುದರಿಂದ ಅವ್ಯವಹಾರಗಳಿಗೆ ಕಡಿವಾಣ ಬೀಳುತ್ತದೆ. ಬ್ಯಾಂಕಿನಲ್ಲಿ ವ್ಯವಹರಿಸುವ ಗ್ರಾಹಕರು,ರೈತರು,ಮಹಿಳೆಯರಲ್ಲಿ ನಂಬಿಕೆ ಬಲಗೊಳ್ಳುತ್ತದೆ ಎಂದ ಅವರು, ಸೊಸೈಟಿಗಳಲ್ಲೇ ಪಾಸ್ಬುಕ್ ಎಂಟ್ರಿ ಇರುವುದರಿಂದ ಬ್ಯಾಂಕಿಂಗ್ ವ್ಯವಹಾರವೇ ಅಲ್ಲಿರುತ್ತದೆ ಎಂದರು. ಮಹಿಳಾ ಸಂಘಗಳ ಪ್ರತಿ ಕಂತು ಪಾವತಿಗೂ ಅವರಿಗೆ ದಾಖಲೆ ಸಿಗುತ್ತದೆ, ಅವ್ಯವಹಾರಕ್ಕೆ ಕಡಿವಾಣ ಬೀಳುತ್ತದೆ, ಸೊಸೈಟಿಗಳ ಗಣಕೀರಣದಲ್ಲಿ ರಾಜ್ಯದಲ್ಲೇ ನಾವು ಮೊದಲನೆಯವರಾಗೋಣ ಎಂದರು.
ಠೇವಣಿ ಹೆಚ್ಚಿಸಲು ಶ್ರಮವಹಿಸಲು ಕರೆ
ನಮ್ಮ ಆಡಳಿತ ಮಂಡಳಿ ಬಂದ ನಂತರ 15 ಕೋಟಿಯಿದ್ದ ಠೇವಣಿಯನ್ನು 300 ಕೋಟಿಗೆ ಹೆಚ್ಚಿಸಿದ್ದೇವೆ ಎಂದ ಅವರು, ವಾಣಿಜ್ಯ ಬ್ಯಾಂಕುಗಳ ಮೇಲೆ ಜನರ ನಂಬಿಕೆ ಕಡಿಮೆಯಾಗುತ್ತಿದ್ದು, ಜನತೆ ಡಿಸಿಸಿ ಬ್ಯಾಂಕಿನತ್ತ ಬರುತ್ತಿದ್ದಾರೆ. ಇಂತಹ ಸಮಯವನ್ನು ನಾವು ಬಳಸಿಕೊಂಡು ಠೇವಣಿ ಹೆಚ್ಚಿಸಲು ಕ್ರಮವಹಿಸಬೇಕು ಎಂದು ಕಿವಿಮಾತು ಹೇಳಿದರು.
ಎಂಪಿಸಿಎಸ್ಗಳಿಗೆ ಹಣ-ಮೊಬೈಲ್ ಸೇವೆ
ಪ್ರತಿ ತಾಲೂಕಿನಲ್ಲೂ ಹಾಲು ಉತ್ಪಾದಕರ ಸಹಕಾರ ಸಂಘಗಳ ಆಡಳಿತ ಮಂಡಳಿಗಳ ಸಭೆ ಕರೆದು ಎಪಿಎಂಸಿ, ಟಿಎಪಿಸಿಎಂಎಸ್ಗಳ ನಿರ್ದೇಶಕರು ಹಾಜರಿರುವಂತೆ ನೋಡಿಕೊಂಡು ಪ್ರತಿ ಸಂಘದ ಖಾತೆಯನ್ನು ಡಿಸಿಸಿ ಬ್ಯಾಂಕಿನಲ್ಲಿ ಮಾಡುವಂತೆ ಮಾಡಿ ಎಂದರು. ಹಾಲು ಸಂಘಗಳಿಗೆ ಹಣವನ್ನು ಆಯಾ ಸಂಘಕ್ಕೆ ತಲುಪಿಸಲು ಮೊಬೈಲ್ ವಾಹನ ವ್ಯವಸ್ಥೆ ಮಾಡುವುದಾಗಿ ತಿಳಿಸಿದ ಅವರು, ಸಂಘದ ಕಾರ್ಯದರ್ಶಿ ತಮಗೆ ಅಗತ್ಯವಾದ ಹಣದ ಕುರಿತು ಬ್ಯಾಂಕಿನ ವ್ಯವಸ್ಥಾಪಕರ ಮೊಬೈಲ್ಗೆ ಮೆಸೇಜ್ ಹಾಕಿದರೆ ಸಾಕು ಹಣ ಸಂಘಕ್ಕೆ ಕಳುಹಿಸಿಕೊಡಲು ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.
ಹಾಗೆಯೇ ಡಿಸಿಸಿ ಬ್ಯಾಂಕಿನಿಂದ ಶೂನ್ಯ ಬಡ್ಡಿ ಸಾಲ ಪಡೆಯುವ ಪ್ರತಿ ಮಹಿಳಾ ಸಂಘಗಳ ಸದಸ್ಯರು ಇಲ್ಲೇ ಉಳಿತಾಯ ಖಾತೆ ತೆರೆಯುವಂತೆ ಮಾಡಿ ಎಂದು ಸಲಹೆ ನೀಡಿದರು.
ಜನರ ಬ್ಯಾಂಕಿಗಿಸೋಣ, ಬಡವರಿಗೆ,ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವ ಮೂಲಕ ಬ್ಯಾಂಕನ್ನು ಉಳಿಸೊಣ ಎಂದು ತಿಳಿಸಿದರು. ಹೊಸ ಶಾಖೆಗಳನ್ನು ಆರಂಭಿಸುವ ಕುರಿತು ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ಚರ್ಚಿಸಿ, ಎಲ್ಲಿ ಅಗತ್ಯವಿದೆ ಎಂಬುದರ ಕುರಿತು ತೀರ್ಮಾನ ಕೈಗೊಳ್ಳುವುದಾಗಿ ನುಡಿದರು. ನಾನೊಬ್ಬನಾಗಲಿ, ಆಡಳಿತ ಮಂಡಳಿಯಾಗಲಿ ಸಾಧನೆ ಮಾಡಲು ಸಾಧ್ಯವಿಲ್ಲ. ನಿಮ್ಮೆಲ್ಲರ ಸಹಕಾರ ಬೇಕು ಎಂದ ಅವರು ಮನವಿ ಮಾಡಿದರು.
ಸಭೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ ಎಂ.ಎಲ್.ಅನಿಲ್ ಕುಮಾರ್, ಹನುಮಂತರೆಡ್ಡಿ, ನಾರಾಯಣರೆಡ್ಡಿ, ಯಲವಾರ ಸೊಣ್ಣೇಗೌಡ, ವೆಂಕಟರೆಡ್ಡಿ, ನಾಗಿರೆಡ್ಡಿ, ಮೋಹನ್ ರೆಡ್ಡಿ, ಬ್ಯಾಂಕಿನ ವ್ಯವಸ್ಥಾಪಕ ನಿರ್ದೇಶಕ ರವಿ, ಎಜಿಎಂಗಳಾದ ಶಿವಕುಮಾರ್, ಖಲೀಮುಲ್ಲಾ, ಚೌಡಪ್ಪ, ಮತ್ತಿತರರು ಉಪಸ್ಥಿತರಿದ್ದರು.