ಉಪ ಚುನಾವಣೆ ಬಳಿಕ 'ಬಳ್ಳಾರಿ ವಿಭಜನೆ' ಚರ್ಚೆ: ಆನಂದ್ ಸಿಂಗ್
ಬೆಂಗಳೂರು, ಅ.2: ವಿಜಯನಗರವನ್ನು ಪ್ರತ್ಯೇಕ ಜಿಲ್ಲೆ ಮಾಡಬೇಕು ಎಂಬುದು ಸಾರ್ವಜನಿಕರ ಬಹಳ ಹಳೆಯ ಬೇಡಿಕೆ. ಈ ವಿಚಾರದಲ್ಲಿ ಯಾವುದೇ ತರಾತುರಿಯಲ್ಲಿ ತೀರ್ಮಾನ ಮಾಡಬಾರದಂತೆ ಸಭೆಯಲ್ಲಿ ಹಿರಿಯ ಶಾಸಕರು ಅಭಿಪ್ರಾಯಪಟ್ಟಿದ್ದಾರೆ ಎಂದು ಅನರ್ಹ ಶಾಸಕ ಆನಂದ್ ಸಿಂಗ್ ತಿಳಿಸಿದರು.
ಬುಧವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆದ ಬಳ್ಳಾರಿ ಜಿಲ್ಲೆ ವಿಭಜನೆಗೆ ಸಂಬಂಧಿಸಿದಂತೆ ಜನಪ್ರತಿನಿಧಿಗಳೊಂದಿಗೆ ನಡೆಸಿದ ಸಭೆಯ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಉಪ ಚುನಾವಣೆ ಎದುರಾಗುತ್ತಿರುವುದರಿಂದ, ಈ ವಿಷಯವನ್ನು ಮುಂದೂಡುವಂತೆ ಹಿರಿಯರು ಸಲಹೆ ನೀಡಿದ್ದಾರೆ. ಅದರಂತೆ, ಮುಖ್ಯಮಂತ್ರಿ ಯಡಿಯೂರಪ್ಪ ತೀರ್ಮಾನದಂತೆ ಸಭೆಯನ್ನು ಮುಂದೂಡಲಾಗಿದೆ ಎಂದು ಆನಂದ್ ಸಿಂಗ್ ಹೇಳಿದರು.
ವಿಜಯನಗರ ಪ್ರತ್ಯೇಕ ಜಿಲ್ಲೆಯಾಗಬೇಕು ಎಂಬುದು ನಮ್ಮ ಬೇಡಿಕೆ ಇದರಲ್ಲಿ ಯಾವುದೇ ಗೊಂದಲ ಇಲ್ಲ. ಜಿಲ್ಲೆಯ ವಿಭಜನೆ ವಿಚಾರ ಬಂದಾಗ ಪರ-ವಿರೋಧ ಚರ್ಚೆಗಳು ಇದ್ದೇ ಇರುತ್ತವೆ. ಸರಕಾರ ಎಲ್ಲ ವಿಷಯಗಳನ್ನು ಪರಿಶೀಲಿಸಿ, ಅಂಕಿ ಅಂಶಗಳನ್ನು ನೋಡಿ, ಭೌಗೋಳಿಕವಾದ ಹಲವಾರು ಸಂಗತಿಗಳನ್ನು ನೋಡಿ, ಆಡಳಿತಾತ್ಮಕ ಕ್ರಮ ಕೈಗೊಳ್ಳುತ್ತದೆ ಎಂದು ಅವರು ತಿಳಿಸಿದರು.