ಚಿಕ್ಕಮಗಳೂರು: ಸರಕಾರದಿಂದ ಪರಿಹಾರ ಸಿಗದ ಆರೋಪ; ನೆರೆಯಿಂದ ಆಸ್ತಿ-ಪಾಸ್ತಿ ಕಳೆದುಕೊಂಡ ರೈತ ಆತ್ಮಹತ್ಯೆ
ಚಿಕ್ಕಮಗಳೂರು, ಅ.3: ಕಳೆದ ಅಗಸ್ಟ್ ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದಾಗಿ ತನ್ನ ಜಮೀನಿಗೆ ಭಾರೀ ಪ್ರಮಾಣದಲ್ಲಿ ಹಾನಿಯಾಗಿದ್ದಕ್ಕೆ ಇನ್ನೂ ಪರಿಹಾರ ಸಿಗದಿದ್ದರಿಂದ ಮನನೊಂದ ರೈತರೋರ್ವರು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯ ಎಸ್.ಕೆ.ಮೇಗಲ್ನಲ್ಲಿ ಬುಧವಾರ ರಾತ್ರಿ ವರದಿಯಾಗಿದೆ.
ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಗೆ ಒಳಪಟ್ಟಿರುವ ಎಸ್.ಕೆ.ಮೇಗಲ್ ಗ್ರಾಮದ ನಿವಾಸಿ ಚಂದ್ರೇಗೌಡ(55) ಆತ್ಮಹತ್ಯೆಗೆ ಶರಣಾದ ರೈತ ಎಂದು ತಿಳಿದು ಬಂದಿದ್ದು, ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಅತಿವೃಷ್ಟಿಯಿಂದಾಗಿ ಚಂದ್ರೇಗೌಡ ಅವರ ಆರು ಎಕರೆ ಜಮೀನಿನ ಪೈಕಿ ಸುಮಾರು ಮೂರು ಎಕರೆಯಷ್ಟು ಭತ್ತದ ಗದ್ದೆ, ಕಾಫಿ, ಅಡಿಕೆ ತೋಟ ನೆರೆ ನೀರಿನಲ್ಲಿ ಕೊಚ್ಚಿ ಹೋಗಿ ಭಾರೀ ನಷ್ಟ ಸಂಭವಿಸಿತ್ತು ಎಂದು ತಿಳಿದು ಬಂದಿದೆ.
ನೆರೆಯಿಂದಾಗಿ ನಾಟಿ ಮಾಡಿದ್ದ ಭತ್ತದ ಗದ್ದೆ, ಕಾಫಿ, ಅಡಿಕೆ ತೋಟ ನಾಶವಾಗಿದ್ದರಿಂದ ತೀವ್ರವಾಗಿ ನೊಂದಿದ್ದ ಚಂದ್ರೇಗೌಡ ಅವರು, ಸರಕಾರದ ಪರಿಹಾರಕ್ಕಾಗಿ ಅಲೆಯುತ್ತಿದ್ದರೆಂದು ತಿಳಿದು ಬಂದಿದ್ದು, ನಾಶಗೊಂಡಿದ್ದ ಭತ್ತದ ಗದ್ದೆ, ತೋಟವನ್ನು ಸರಿಪಡಿಸಲು ಚಂದ್ರೇಗೌಡ ಸರಕಾರದ ಪರಿಹಾರಧನವನ್ನು ನಂಬಿಕೊಂಡು ಸುಮಾರು 50 ಸಾವಿರ ಕೈ ಸಾಲ ಸೇರಿದಂತೆ ಕಳಸ ಪಟ್ಟಣದ ಸಹಕಾರಿ ಬ್ಯಾಂಕ್ ಒಂದರಲ್ಲಿ ಸುಮಾರು 1 ಲಕ್ಷ ರೂ. ಸಾಲ ಮಾಡಿದ್ದರೆಂದು ತಿಳಿದು ಬಂದಿದೆ.
ಹಾಳಾಗಿದ್ದ ಜಮೀನು ಸರಿಪಡಿಸಲು ಸಾಲ ಮಾಡಿಕೊಂಡಿದ್ದ ಚಂದ್ರೇಗೌಡ ಅವರು ಸರಕಾರದ ಪರಿಹಾರ ಧನಕ್ಕಾಗಿ ಕಾಯುತ್ತಿದ್ದರು. ಆದರೆ ಸಕಾಲದಲ್ಲಿ ಅವರಿಗೆ ಪರಿಹಾರದ ಹಣ ಸಿಗದಿದ್ದರಿಂದ ಸಾಲ ಹಿಂದಿರುಗಿಸಲಾಗದೇ ತೀವ್ರವಾಗಿ ಮನನೊಂದುಕೊಂಡಿದ್ದರು. ಪರಿಹಾರಕ್ಕಾಗಿ ಕಂದಾಯ ಇಲಾಖಾಧಿಕಾರಿಗಳನ್ನು ಆಗಾಗ್ಗೆ ಸಂಪರ್ಕಿಸುತ್ತಿದ್ದರೆಂದು ತಿಳಿದು ಬಂದಿದ್ದು, ಸರಕಾರ ಇನ್ನೂ ಪರಿಹಾರಧನ ಬಿಡುಗಡೆ ಮಾಡಿಲ್ಲವೆಂದು ಮಂಗಳವಾರ ಮನೆಯಲ್ಲಿ ಮಾತನಾಡಿಕೊಂಡಿದ್ದ ಚಂದ್ರೇಗೌಡ ರಾತ್ರಿಯಾಗುತ್ತಲೇ ಮನೆಯವರಿಗೆ ತಿಳಿಯದಂತೆ ಮನೆಯಲ್ಲಿದ್ದ ಕ್ರಿಮಿನಾಶಕ ಔಷಧ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ತಿಳಿದು ಬಂದಿದೆ.
ಚಂದ್ರೇಗೌಡ ಅವರು ಆತ್ಮಹತ್ಯೆಗೆ ಶರಣಾದ ಸುದ್ದಿ ತಿಳಿಯುತ್ತಿದ್ದಂತೆ ಕಳಸ ಠಾಣೆಯ ಪೊಲೀಸರು ಗ್ರಾಮಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗುರುವಾರ ಬೆಳಗ್ಗೆ ಚಂದ್ರೇಗೌಡ ಅವರ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಕಳಸ ಪಟ್ಟಣದ ಸರಕಾರಿ ಆಸ್ಪತ್ರೆಯಲ್ಲಿ ನಡೆಸಲಾಯಿತು.
ಜಿಲ್ಲೆಯಲ್ಲಿ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮಲೆನಾಡು ಭಾಗದಲ್ಲಿ ಭಾರೀ ಆಸ್ತಿಪಾಸ್ತಿ ಹಾನಿಯಾಗಿದ್ದು, ಸಂತ್ರಸ್ಥರಿಗೆ ರಾಜ್ಯ ಸರಕಾರ ಇದುವರೆಗೂ ಪರಿಹಾರಧನ ಬಿಡುಗಡೆ ಮಾಡಿಲ್ಲ. ಪರಿಹಾರ ಧನ ಬಿಡುಗಡೆ ವಿಳಂಬವಾಗಿದ್ದರಿಂದ ಜಿಲ್ಲೆಯ ಮೂಡಿಗೆರೆ ತಾಲೂಕಿನ ಕಳಸ ಹೋಬಳಿ ವ್ಯಾಪ್ತಿಯಲ್ಲೇ ಇರುವ ಕಾರಗದ್ದೆ ಗ್ರಾಮದಲ್ಲಿ ರೈತರೊಬ್ಬರು ಮನನೊಂದು ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಬುಧವಾರ ಚಂದ್ರೇಗೌಡ ಅವರೂ ಇದೇ ಕಾರಣಕ್ಕಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಪರಿಹಾರಧನ ಬಿಡುಗಡೆಯಾಗದೇ ಮನನೊಂದು ಸಾವಿಗೆ ಶರಣಾದ ಪ್ರಕರಣದ ಪೈಕಿ ಚಂದ್ರೇಗೌಡ ಅವರ ಆತ್ಮಹತ್ಯೆ ಎರಡನೇ ಎರಡನೇ ಪ್ರಕರಣವಾಗಿದೆ.