ಉದಾಸೀನ ತೋರುವ ಅಧಿಕಾರಿಗಳಿಗೆ ತಕ್ಷಣವೇ ನೋಟಿಸ್ ನೀಡಿ: ಮೇಯರ್ ಗೌತಮ್ ಕುಮಾರ್
ಬೆಂಗಳೂರು, ಅ.3: ಕಸ ಸಮಸ್ಯೆ, ಪ್ಲಾಸ್ಟಿಕ್ ನಿಷೇಧ, ರಸ್ತೆಗಳ ನಿರ್ವಹಣೆಯಂತಹ ವಿಷಯಗಳಲ್ಲಿ ಉದಾಸೀನ ತೋರುವ ಅಧಿಕಾರಿಗಳು ಮತ್ತು ನೌಕರರಿಗೆ ತಕ್ಷಣವೇ ಶೋಕಾಸ್ ನೋಟಿಸ್ ನೀಡುವಂತೆ ಎಲ್ಲ ವಲಯಗಳ ಜಂಟಿ ಆಯುಕ್ತರಿಗೆ ನೂತನ ಮೇಯರ್ ಗೌತಮ್ ಕುಮಾರ್ ಆದೇಶಿಸಿದ್ದಾರೆ.
ಮೇಯರ್ ಆಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ವಿಶೇಷ ಆಯುಕ್ತರು ಮತ್ತು ಜಂಟಿ ಆಯುಕ್ತರೊಂದಿಗೆ ಸಭೆ ನಡೆಸಿದ ಅವರು ಕಾಮಗಾರಿಗಳನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.
ಜಂಟಿ ಆಯುಕ್ತರು ಪ್ರತಿ 15 ದಿನಗಳಿಗೊಮ್ಮೆ ಆಯಾ ವಲಯದ ಅಭಿವೃದ್ಧಿ ಬಗ್ಗೆ ವಿಶೇಷ ಆಯುಕ್ತರೊಂದಿಗೆ ಸಭೆ ನಡೆಸಬೇಕು. ಈ ಸಭೆಯ ಎಲ್ಲ ವಿವರಗಳನ್ನು ಮೇಯರ್ ಗಮನಕ್ಕೆ ತರಬೇಕು ಹಾಗೂ ಅಭಿವೃದ್ಧಿ ಕಾಮಗಾರಿಗಳ ಬಗ್ಗೆ ಚರ್ಚೆ ನಡೆಸಬೇಕು ಎಂದು ಸೂಚಿಸಿದರು.
ಬಿಬಿಎಂಪಿ ಬಗ್ಗೆ ಜನರ ವಿಶ್ವಾಸವನ್ನು ಗಳಿಸಬೇಕು. ಜನರಿಗೆ ತೊಂದರೆಯಾಗದಂತೆ ಕಾಮಗಾರಿಗಳನ್ನು ನಡೆಸುವ ಮೂಲಕ ಪಾಲಿಕೆ ಬಗ್ಗೆ ಜನರಲ್ಲಿರುವ ಧೋರಣೆಯನ್ನು ಬದಲಿಸಬೇಕು. ಇನ್ನು ಮುಂದೆ ಬಿಬಿಎಂಪಿಯಲ್ಲಿ ಯಾವುದೇ ಯೋಜನೆಗಳನ್ನು ಅಧಿಕಾರಗಳೇ ಸಿದ್ಧಪಡಿಸುವಂತಿಲ್ಲ. ಮೇಯರ್ ಅವರೊಂದಿಗೆ ಈ ಕಾಮಗಾರಿಗಳ ಬಗ್ಗೆ ಸಮಗ್ರವಾಗಿ ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ.
ಯಾವ ಅಧಿಕಾರಿಯೂ ನಿಯಮಗಳನ್ನು ಉಲ್ಲಂಘಿಸಿ ಯೋಜನೆಗಳನ್ನು ರೂಪಿಸುವಂತಿಲ್ಲ ಎಂದು ಎಚ್ಚರಿಕೆ ನೀಡಿದ ಅವರು, ಯಾವುದೇ ಕಾಮಗಾರಿಗಳನ್ನು ಆರಂಭಿಸುವ ಮುನ್ನ ನಿಗದಿತ ನೈಜ ಅವಧಿಯನ್ನು ಸಿದ್ದಪಡಿಸಬೇಕು. ಆರು ತಿಂಗಳ ಅವಧಿ ಎಂದರೆ ಅದೇ ವೇಳೆಗೆ ಕಾಮಗಾರಿ ಪೂರ್ಣಗೊಳ್ಳಬೇಕು ಎಂದು ತಿಳಿಸಿದರು.